ಅಧಿಕಾರ ಹಂಚಿಕೆ ವರದಿ ಊಹಾಪೋಹ: ಕುಮಾರಸ್ವಾಮಿ
ಬೆಂಗಳೂರು, ಮೇ 21: ಜೆಡಿಎಸ್ಗೆ ಆಡಳಿತ ನಡೆಸುವ ಅಧಿಕಾರ ಬಿಟ್ಟುಕೊಡುವುದಾಗಿ ಆರಂಭದಲ್ಲಿ ಹೇಳಿದ್ದರೂ, ಕಾಂಗ್ರೆಸ್ ಈಗ ಅಧಿಕಾರ ಹಂಚಿಕೆಯ ಮಾತುಗಳು ಕೇಳಿಬರುತ್ತಿದೆ. ಆದರೆ, ಈ ವರದಿಗಳನ್ನು ಎಚ್ ಡಿ ಕುಮಾರಸ್ವಾಮಿ ತಳ್ಳಿಹಾಕಿದ್ದಾರೆ.
ಸಚಿವ ಸಂಪುಟದ ಖಾತೆ ಹಂಚಿಕೆ ವಿಚಾರದಲ್ಲಿ ಇನ್ನೂ ಯಾವ ನಿರ್ಧಾರವನ್ನೂ ತೆಗೆದುಕೊಂಡಿಲ್ಲ ಎಂದಿರುವ ಕುಮಾರಸ್ವಾಮಿ, ಪಕ್ಷಗಳ ನಡುವೆ 30 ತಿಂಗಳ ಅಧಿಕಾರ ಹಂಚಿಕೆಯ ವರದಿ ಶುದ್ಧ ಸುಳ್ಳು ಎಂದು ಸ್ಪಷ್ಟನೆ ನೀಡಿದರು.
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಭೇಟಿಯ ಬಳಿಕ ದೊರಕುವ ಫಲಿತಾಂಶ ಆಧಾರದಲ್ಲಿ ಸಂಪುಟ ರಚನೆಯನ್ನು ನಿರ್ಧರಿಸಲಾಗುತ್ತದೆ ಎಂದು ಹೇಳಿದರು.

ಖಾತೆ ಹಂಚಿಕೆ ಸಂಬಂಧ ಇದುವರೆಗೂ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿರುವ ಕುಮಾರಸ್ವಾಮಿ, ಇಂತಹ ಊಹಾಪೋಹ ಸುದ್ದಿಗಳನ್ನು ಹರಡುವ ಮೂಲಕ ಶಾಸಕರು ಹಾಗೂ ಜನರನ್ನು ಗೊಂದಲಕ್ಕೀಡು ಮಾಡಬಾರದು ಎಂದು ಮಾಧ್ಯಮಗಳಿಗೆ ಮನವಿ ಮಾಡಿದರು.
ಪ್ರಮಾಣವಚನ ಸ್ವೀಕರಿಸಿದ 24 ಗಂಟೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವುದಾಗಿ ಅವರು ತಿಳಿಸಿದರು.
'ಬಹುಶಃ ನಾನು ಬುಧವಾರ ಪ್ರಮಾಣವಚನ ಸ್ವೀಕರಿಸಲಿದ್ದೇನೆ. ಅದರ ಬಳಿಕ ಗುರುವಾರ ಸ್ಪೀಕರ್ ಚುನಾವಣೆ ಮತ್ತು ವಿಶ್ವಾಸಮತ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಿದ್ದೇವೆ ಎಂದರು.
ಮೇ 21ರಂದು ಕಂಠೀರವ ಸ್ಟೇಡಿಯಂನಲ್ಲಿ ಮಧ್ಯಾಹ್ನ 12ರಿಂದ 1.50ರ ಅವಧಿಯಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಈ ಮೊದಲು ಕುಮಾರಸ್ವಾಮಿ ಪ್ರಕಟಿಸಿದ್ದರು.
ಆದರೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯತಿಥಿಯ ಪ್ರಯುಕ್ತ ಸಮಾರಂಭವನ್ನು ಮೇ 23ಕ್ಕೆ ಮುಂದೂಡಲಾಗಿರುವುದಾಗಿ ತಿಳಿಸಿದ್ದರು.
ಪ್ರಮಾಣವಚನ ಸ್ವೀಕರಿಸುವ ಸ್ಥಳವೂ ಬದಲಾಗುವ ಸಾಧ್ಯತೆ ಇದ್ದು, ಕಂಠೀರವ ಕ್ರೀಡಾಂಗಣದಿಂದ ವಿಧಾನಸೌಧಕ್ಕೆ ಸಮಾರಂಭ ಶಿಫ್ಟ್ ಆಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಆದರೆ, ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಇತರೆ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಸ್ಥಳದ ಕುರಿತು ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.












Click it and Unblock the Notifications