ಮುಂಗಾರು ಕ್ಷೀಣಿಸಿದರೂ ಮುಂದುವರೆಯಲಿದೆ ಮಳೆ!
ಬೆಂಗಳೂರು ಜುಲೈ 18: ಹವಾಮಾನದಲ್ಲಿ ಉಂಟಾದ ವೈಪರೀತ್ಯದಿಂದಾಗಿ ಮುಂಗಾರು ದುರ್ಬಲಗೊಂಡಿವೆ. ಇದರಿಂದ ಕರಾವಳಿ ಹಾಗೂ ಮಲೆನಾಡು ಸೇರಿದಂತೆ ರಾಜ್ಯದ ವಿವಿಧೆಡೆ ಮಳೆ ಆರ್ಭಟ ಕಡಿಮೆ ಆಗಲಿದೆ. ಈ ಮೂಲಕ ಮಳೆಗೆ ತತ್ತರಿಸಿದ ರಾಜ್ಯದ ಜನರಿಗೆ ಸಿಹಿ ಸುದ್ದಿಯೊಂದು ಸಿಕ್ಕಂತಾಗಿದೆ.
ಸಮುದ್ರದ ಮೇಲ್ಮೈ ಸುಳಿಗಾಳಿ ಹಾಗೂ ಭೂಮೇಲ್ಮೈ ಸುಳಿಗಾಳಿ ಪ್ರಭಾವ ಕ್ಷೀಣಿಸಿದ್ದರಿಂದ ಮುಂಗಾರು ಆರ್ಭಟ ಹಂತ ಹಂತವಾಗಿ ಕಡಿಮೆ ಆಗಿದೆ. ಹೀಗಿದ್ದರೂ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಮಳೆ ಆಗಬಹುದು ಎಂದು ರಾಜ್ಯ ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ.
ಶಿರಾಡಿ ಘಾಟ್ನಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ, ಏನಿದೆ ನಿಯಮ?
ಮುಂದಿನ ಮೂರು ದಿನಗಳ ಪೈಕಿ ಕರಾವಳಿಯ ದಕ್ಷಿಣ ಒಳನಾಡು, ಉತ್ತರ ಒಳನಾಡು ಮತ್ತು ಉಡುಪಿ ಜಿಲ್ಲೆಗೆ ಹಾಗೂ ಮಲೆನಾಡಿನ ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಒಂದೆರಡು ಕಡೆ ಸೋಮವಾರ ಹಾಗೂ ಜುಲೈ 19ರ ಮಂಗಳವಾರದವರೆಗೆ ಸಾಧಾರಣದಿಂದ ಭಾರೀ ಮಳೆ ಬೀಳುವ ನಿರೀಕ್ಷೆ ಇದ್ದು, 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ. ಉಳಿದ ದಿನಗಳಲ್ಲಿ ಇದೇ ಜಿಲ್ಲೆಗಳಲ್ಲಿ ಹಲವು ಪ್ರದೇಶಗಳಲ್ಲಿ ಸಾಧಾರಣ ಮಳೆ ಆಗಬಹುದು ಎನ್ನಲಾಗಿದೆ.
ಇನ್ನು ಉತ್ತರ ಒಳನಾಡಿನ ಬೆಳಗಾವಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಮಾತ್ರ ಮಂಗಳವಾರ ಜೋರು ಮಳೆ ಬರುವ ಸಾಧ್ಯತೆ ಇದ್ದು, 'ಯೆಲ್ಲೋ ಅಲರ್ಟ್' ನೀಡಲಾಗಿದೆ. ಇದರ ಹೊರತು ಯಾವ ಜಿಲ್ಲೆಗಳಲ್ಲೂ ಅಷ್ಟಾಗಿ ದಾಖಲೆಯ ಮಳೆ ನಿರೀಕ್ಷೆ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದುರ್ಬಲಗೊಂಡ ವೈಪರಿತ್ಯಗಳು
ಎರಡು ವಾರದ ಹಿಂದೆ ಅರಬ್ಬೀ ಸಮುದ್ರ ಮಟ್ಟದಲ್ಲಿ ಸೃಷ್ಟಿಯಾಗಿ ಹಂತ ಹಂತವಾಗಿ ತೀವ್ರಗೊಂಡಿದ್ದ ಮೇಲ್ಮೈ ಸುಳಿಗಾಳಿ (ಸ್ಟ್ರಫ್) ಇದೀಗ ಕ್ಷೀಣಿಸಿದೆ. ಮಹಾರಾಷ್ಟ್ರ ಹಾಗೂ ಗುಜರಾತ್ ಕರಾವಳಿ ಭಾಗದಲ್ಲಿ ಎದ್ದಿದ್ದ ತೀವ್ರ ಗಾಳಿ ಬೀಸುವಿಕೆ ಅಬ್ಬರ ಕುಂದಿದೆ. ಭೂಮೇಲ್ಮೈ ಮೇಲೆ ಉಂಟಾಗಿದ್ದ ವಾಯುಭಾರ ಕುಸಿತವು ಸಂಪೂರ್ಣ ಸಹಜ ಸ್ಥಿತಿಗೆ ಬಂದಿದೆ ಎನ್ನಲಾಗಿದೆ. ಈ ಕಾರಣಗಳಿಂದ ಮನೆ, ಗುಡ್ಡ ಕುಸಿತ, ರಸ್ತೆ, ಸೇತುವೆ ಮುಳುಗಡೆ ಆಗಿ ಅನೇಕ ಆವಾಂತರಗಳಿಗೆ ಕಾರಣವಾಗಿದ್ದ ಧಾರಾಕಾರ ಮಳೆ ಹಂತ ಹಂತವಾಗಿ ಕಡಿಮೆ ಆಗುತ್ತಿದೆ.
ರಾಜ್ಯದ ಪೂರ್ವ ಜಿಲ್ಲೆಗಳಲ್ಲಿ ಮಳೆ ಕೊರತೆ
ಮುಂಗಾರು ಆರಂಭವಾದಾಗಿನಿಂದ ಅರಬ್ಬೀ ಸಮುದ್ರ ಹಾಗೂ ಮಹಾರಾಷ್ಟ್ರ ಕರಾವಳಿ ಭಾಗದಲ್ಲಿ ಉಂಟಾಗಿದ್ದ ಹವಾಮಾನ ಬದಲಾವಣೆಗಳಿಂದ ಕೇವಲ ರಾಜ್ಯದ ಕರಾವಳಿ, ಪಶ್ಚಿಮ ಘಟ್ಟಗಳ ಜಿಲ್ಲೆಗಳು ಸೇರಿದಂತೆ ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ಧಾರವಾಡ ಜಿಲ್ಲೆಗಳು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಳೆ ದಾಖಲಾಗಿದೆ.
ಆದರೆ ರಾಜ್ಯದ ಪೂರ್ವ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿತ್ರದುರ್ಗ, ಬಳ್ಳಾರಿ, ರಾಯಚೂರು, ಕಲಬುರಗಿ, ಕೊಪ್ಪಳ, ಯಾದಗಿರಿ ಜಿಲ್ಲೆಗಳಿಗೆ ಅಷ್ಟಾಗಿ ಮಳೆ ದಾಖಲಾಗಿಲ್ಲ. ಈ ಭಾಗದಲ್ಲಿ ಮಳೆ ಆಗಲು ಬಂಗಾಳಕೊಲ್ಲಿ, ಅಂಡಮಾನ್ ನಿಕೋಬಾರ್ ಭಾಗ ಇಲ್ಲವೇ ಓಡಿಶಾ ಭಾಗದಲ್ಲಿ ವೈಪರಿತ್ಯಗಳು ಉಂಟಾಗಬೇಕು. ಈವರೆಗೆ ಈ ಭಾಗದಲ್ಲಿ ಅಂತಹ ಪ್ರಬಲ ಬದಲಾವಣೆಗಳು ಆಗದ ಹಿನ್ನೆಲೆಯಲ್ಲಿ ಪೂರ್ವ ಜಿಲ್ಲೆಗಳಿಗೆ ಮಳೆ ಬಿದ್ದಿಲ್ಲ. ಮುಂದಿನ ದಿನಗಳಲ್ಲಿ ಈ ಭಾಗ ಜಿಲ್ಲೆಗಳಲ್ಲೂ ಅಧಿಕ ಮಳೆ ನಿರೀಕ್ಷಿಸಬಹುದು ಎಂದು ರಾಜ್ಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ಅಧಿಕಾರಿಗಳು ಮತ್ತು ವಿಜ್ಞಾನಿ ಪ್ರಸಾದ್ ತಿಳಿಸಿದ್ದಾರೆ.
ಗಮನಾರ್ಹ ಬದಲಾವಣೆ ಇಲ್ಲ: ಮಳೆಗೆ ವಿರಾಮ
ರಾಜ್ಯದಲ್ಲಿ ಮುಂದಿನ ನಾಲ್ಕೈದು ದಿನ ಮಳೆ ಹಂತ ಹಂತವಾಗಿ ಮಳೆ ಇನ್ನೂ ಕಡಿಮೆ ಆಗಲಿದೆ. ವಾತಾವರಣ ಸಹಜ ಸ್ಥಿತಿಗೆ ಬರಲಿದ್ದು, ಬಿಸಿಲಿನ ಸಮರ್ಪಕ ದರ್ಶನವಾಗುವ ಸಾಧ್ಯದೆ. ಮುಂದಿನ ಹತ್ತು ದಿನಗಳ ಮುನ್ಸೂಚನೆ ಗಮನಿಸಿದರೆ ವಾತಾವರಣದಲ್ಲಿ ಯಾವ ಭಾಗದಲ್ಲೂ ವೈಪರಿತ್ಯಗಳು ಉಂಟಾಗುವ ಲಕ್ಷಣಗಳು ಇಲ್ಲ. ಅಲ್ಲಿಯವರೆಗೆ ಮುಂಗಾರು ತುಸು ತನ್ನ ಆರ್ಭಟಕ್ಕೆ ವಿರಾಮ ನೀಡುವ ಸಾಧ್ಯತೆ ಇದೆ ಎಂದು ಪ್ರಸಾದ್ ಅವರು ಮಾಹಿತಿ ನೀಡಿದರು.
ಬಿದ್ದ ಮಳೆ ಪ್ರಮಾಣ
ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24ಗಂಟೆಗಳಲ್ಲಿ ಹೊನ್ನಾವರದಲ್ಲಿ 42.4 ಸೆಂ.ಮೀ, ಮಂಗಳೂರಿನಲ್ಲಿ ಹಾಸನದಲ್ಲಿ 31.2 ಸೆಂ.ಮೀ, ಕಾರವಾರದಲ್ಲಿ 20 ಸೆಂ.ಮೀ,, ಮಡಿಕೇರಿಯಲ್ಲಿ 18 ಸೆಂ.ಮೀ, ಬಾದಾಮಿ ಮತ್ತು ಬೆಂಗಳೂರು ಜಿಕೆವಿಕೆ ಪ್ರದೇಶದಲ್ಲಿ ತಲಾ 12 ಸೆಂ.ಮೀ. ಮಳೆ ದಾಖಲಾಗಿದೆ. ಇದೇ ವೇಳೆ ರಾಜ್ಯದ ಗರಿಷ್ಠ ತಾಪಮಾನ ರಾಯಚೂರಿನಲ್ಲಿ 33ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 12.4ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಬೆಂಗಳೂರಿನಲ್ಲಿ ಮುಂದಿನ 48 ಗಂಟೆ ಇದೇ ರೀತಿಯ ವಾತಾವರಣ ಮುಂದುವರಿಯಲಿದೆ. ಆಗಾಗ ತುಂತುರು ಮಳೆ ದಾಖಲಾಗಲಿದೆ. ಗರಿಷ್ಠ ತಾಪಮಾನ 27 ಡಿ.ಸೆ.ಕನಿಷ್ಠ ತಾಪಮಾನ 20ಡಿ.ಸೆ. ದಾಖಲಾಬಹುದು ಎಂದು ಅಂದಾಜಿಸಲಾಗಿದೆ.
Recommended Video