ಶಿವಮೊಗ್ಗದಲ್ಲಿ ಜೆಡಿಎಸ್ಗೆ ಬಂಡಾಯದ ಬಿಸಿ!
ಶಿವಮೊಗ್ಗ, ಮಾರ್ಚ್ 01 : ವಿಧಾನಸಭೆ ಚುನಾವಣೆಗೆ ಇನ್ನೂ ದಿನಾಂಕ ಘೋಷಣೆಯಾಗಿಲ್ಲ. ಆದರೆ, ಶಿವಮೊಗ್ಗ ಜಿಲ್ಲಾ ಜೆಡಿಎಸ್ ನಲ್ಲಿ ಬಂಡಾಯದ ಬಿಸಿ ತಟ್ಟಿದೆ. ಪಕ್ಷದ ಮಾಜಿ ನಗರಾಧ್ಯಕ್ಷ ನರಸಿಂಹ ಮೂರ್ತಿ ಬಂಡಾಯದ ಬಾವುಟ ಹಾರಿಸಿದ್ದಾರೆ.
ಗುರುವಾರ ನರಸಿಂಹಮೂರ್ತಿ ಪತ್ರಿಕಾಗೋಷ್ಠಿ ನಡೆಸಿದರು. '2018ರ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಶಿವಮೊಗ್ಗ ನಗರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದರು'.
ಈಗಾಗಲೇ 126 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರುವ ಜೆಡಿಎಸ್ ಪಕ್ಷ, ಜೆಡಿಎಸ್ ಜಿಲ್ಲಾಧ್ಯಕ್ಷ ಎಚ್.ಆರ್.ನಿರಂಜನ್ ಅವರನ್ನು ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ನಿರಂಜನ್ ಅವರ ವಿರುದ್ಧ ಅಸಮಾಧಾನ ಗೊಂಡಿರುವ ನರಸಿಂಹಮೂರ್ತಿ ಬಂಡಾಯ ಅಭ್ಯರ್ಥಿಯಾಗುವುದಾಗಿ ಹೇಳಿದ್ದಾರೆ.

'ನಿರಂಜನ್ ಅವರ ಸರ್ವಾಧಿಕಾರಿ ಧೋರಣೆಯಿಂದ ಬೇಸತ್ತು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 2012ರಲ್ಲಿ ನಾನು ಜೆಡಿಎಸ್ಗೆ ಮರು ಸೇರ್ಪಡೆಯಾಗಿ ಪಕ್ಷದ ಪರವಾಗಿ ಕೆಲಸ ಮಾಡಿದ್ದೇನೆ. ವಿಧಾನ ಸಭೆ ಚುನಾವಣೆಗೆ ಒಂದು ವರ್ಷದ ಹಿಂದೆ ನಗರಾಧ್ಯಕ್ಷರಾಗಿ ಆಯ್ಕೆ ಮಾಡುವಾಗ ಜೆಡಿಎಸ್ ಜಿಲ್ಲಾಧ್ಯಕ್ಷ ನಿರಂಜನ್ ಅವರು ಮೀನಾಮೇಷ ಎಣಿಸಿ ನಂತರ ವರಿಷ್ಠರ ಒತ್ತಡದಿಂದ ನಗರಾಧ್ಯಕ್ಷನನ್ನಾಗಿ ನೇಮಿಸಿದ್ದಾರೆ' ಎಂದು ಮಹಾನಗರ ಪಾಲಿಕೆ ಸದಸ್ಯ ನರಸಿಂಹಮೂರ್ತಿ ಹೇಳಿದರು.
'ನಗರಾಧ್ಯಕ್ಷನಾದ ನಂತರ ವಿಧಾನಸಭೆ ಚುನಾವಣೆ ಹತ್ತಿರ ಬಂದಾಗ ನಾನು ಪಕ್ಷದ ವತಿಯಿಂದ ಸ್ಪರ್ಧಿಸಲು ಪ್ರಯತ್ನಿಸಿದ್ದೆ. ಆದರೆ, ನಿರಂಜನ್ ಅವರು ಕರೆ ಮಾಡಿ ಅಭ್ಯರ್ಥಿ ಕಣದಿಂದ ಹೊರಗೆ ಬರಲಿಲ್ಲವೆಂದರೆ ಪಕ್ಷದಿಂದ ಹೊರ ಹಾಕುವುದಾಗಿ ಹೇಳಿದ್ದರು' ಎಂದರು.
'ಪಕ್ಷದ ಅಭ್ಯರ್ಥಿಯಾಗಿ ಟಿಕೆಟ್ ಕೇಳುವುದು ಪಕ್ಷ ವಿರೋಧಿ ಚಟುವಟಿಕೆಯಲ್ಲ. ನಗರ ಸಮಿತಿಯನ್ನು ವಿಸರ್ಜಿಸಿ ನಗರ ಘಟಕವನ್ನ ಎರಡು ವಿಭಾಗ ಮಾಡಲಾಗಿದೆ. ಯಾವತ್ತು ಅಧ್ಯಕ್ಷರು ಕಾರ್ಯಕರ್ತರ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ನಿರಂಜನ್ ಅವರ ಧೋರಣೆಯಿಂದ ಬೇಸತ್ತು ಬಂಡಾಯ ಅಭಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದೇನೆ' ಎಂದು ಹೇಳಿದರು.












Click it and Unblock the Notifications