ಹಾನಗಲ್ ಉಪ ಚುನಾವಣೆ: ಮತ್ತೊಮ್ಮೆ ಸ್ಪಷ್ಟ ಸಂದೇಶ ರವಾನಿಸಿದ ಬಿಜೆಪಿ ಹೈಕಮಾಂಡ್!
ಬೆಂಗಳೂರು, ಅ. 07: ಯಾವುದೇ ಚುನಾವಣೆ ಇರಲಿ, ಎಲ್ಲರಿಗಿಂತ ಮೊದಲು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿದ್ದ ಬಿಜೆಪಿ ಈ ಉಪ ಚುನಾವಣೆಗೆ ತಡವಾಗಿ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಅದಕ್ಕೆ ಕಾರಣವೂ ಇದೆ. ಮಾಜಿ ಸಚಿವ ದಿ. ಸಿ.ಎಂ. ಉದಾಸಿ ಅವರ ನಿಧನದಿಂದ ತೆರುವಾಗಿದ್ದ ಹಾನಗಲ್ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿತ್ತು. ಮೂಲ ಬಿಜೆಪಿ ಹಾಗೂ ವಲಸೆ ಬಿಜೆಪಿಗರ ಮಧ್ಯದ ಕಂದಕ ದೊಡ್ಡದಾಗಿ, ಅದರ ಪರಿಣಾಮ ಚುನಾವಣೆ ಫಲಿತಾಂಶದ ಮೇಲೆ ಆಗುವ ಸಾಧ್ಯತೆಗಳನ್ನು ಬಿಜೆಪಿ ನಾಯಕರು ಮನಗಂಡಿದ್ದರು.
ಇದೀಗ ಹಾವೇರಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ದಿ. ಸಿ.ಎಂ. ಉದಾಸಿ ಅವರ ಆಪ್ತ ಶಿವರಾಜ ಸಜ್ಜನರ್ ಅವರಿಗೆ ಹಾನಗಲ್ ಉಪ ಚುನಾವಣೆಯ ಟಿಕೆಟ್ ಘೋಷಣೆ ಆಗಿದೆ. ಜೊತೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಕ್ಷೇತ್ರಕ್ಕೆ ಸೇರಿದವರಲ್ಲ ಎಂಬುದು ಗಮನಿಸಬೇಕಾದ ಅಶಂವಾಗಿದೆ. ಈ ಮಧ್ಯೆ ಶಿವರಾಜ್ ಸಜ್ಜನರ್ ಅವರಿಗೆ ಉಪ ಚುನಾವಣೆಗೆ ಟಿಕೆಟ್ ಸಿಕ್ಕಿದೆ. ಆ ಮೂಲಕ ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದೆ ಎನ್ನಲಾಗಿದೆ. ಏನದು ಸಂದೇಶ?
ಹಾನಗಲ್ ಉಪಚುನಾವಣೆಗೆ ಅಚ್ಚರಿಯ ಅಭ್ಯರ್ಥಿ!
ಹಾನಗಲ್ ಉಪ ಚುನಾವಣೆಗೆ ಸಂಸದ ಶಿವಕುಮಾರ್ ಉದಾಸಿ ಅವರ ಪತ್ನಿ ರೇವತಿ ಶಿವಕುಮಾರ್ ಉದಾಸಿ ಅವರಿಗೆ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಬಹುತೇಕ ಪಕ್ಕಾ ಎಂಬ ಮಾಹಿತಿ ಬಿಜೆಪಿ ವಲಯದಿಂದಲೇ ಕೇಳಿ ಬಂದಿತ್ತು. ತಪ್ಪಿದರೆ, ಮೂಲ ಬಿಜೆಪಿಗರಾದ ಕಲ್ಯಾಣ್ ಕುಮಾರ್ ಶೆಟ್ಟರ್ ಅಥವಾ ಮಹಾಂತೇಶ ಸೊಪ್ಪಿನ್ ಅವರಲ್ಲಿ ಒಬ್ಬರಿಗೆ ಬಿಜೆಪಿ ಟಿಕೆಟ್ ಕೊಡಲಾಗುತ್ತದೆ ಎನ್ನಲಾಗಿತ್ತು. ಜೊತೆಗೆ ಶಿವರಾಜ ಸಜ್ಜನರ್ ಅವರ ಹೆಸರೂ ಕೇಳಿ ಬಂದಿತ್ತಾದರೂ, ಅಚ್ಚರಿ ಎಂಬಂತೆ ಅವರೇ ಈಗ ಅಧಿಕೃತವಾಗಿ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಬಿಜೆಪಿ ಹೈಕಮಾಂಡ್ ಸ್ಪಷ್ಟ ಸಂದೇಶವನ್ನು ತನ್ನ ಪಕ್ಷದ ನಾಯಕರಿಗೆ ಕೊಟ್ಟಿದೆ.
Breaking; ಹಾನಗಲ್, ಸಿಂಧಗಿ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಘೊಷಣೆ
ಮತ್ತೊಮ್ಮೆ ಖಡಕ್ ಸೂಚನೆ ರವಾನಿಸಿದ ಹೈಕಮಾಂಡ್
ಶಾಸಕರು ಅಥವಾ ಸಂಸದರಾಗಿದ್ದಾಗ ಮೃತಪಡುವ ಜನಪ್ರತಿನಿಧಿಗಳ ಕುಟುಂಬಸ್ಥರಿಗೆ ನಂತರದ ಚುನಾವಣೆಯಲ್ಲಿ ಟಿಕೆಟ್ ಕೊಡುವುದು ರಾಜಕೀಯ ಪಕ್ಷಗಳ ಸಂಪ್ರದಾಯ. ಆದರೆ ಆ ಸಂಪ್ರದಾಯಕ್ಕೆ ಬಿಜೆಪಿ ಕಳೆದ ಲೋಕಸಭಾ ಚುನಾವಣೆಯಲ್ಲಿಯೇ ತೆರೆ ಎಳೆದಿತ್ತು. ಆಗಲೂ ಕೂಡ ಖಡಕ್ ಸಂದೇಶವನ್ನು ರವಾನಿಸಿತ್ತು. ಬೆಂಗಳೂರು ದಕ್ಷಿಣ ಲೋಕಸಭಾ ಅಭ್ಯರ್ಥಿಯಾಗಿ ಬಿಜೆಪಿ ಯುವ ನಾಯಕ ತೇಜಸ್ವಿ ಸೂರ್ಯ ಅವರ ಹೆಸರು ಪ್ರಕಟಿಸಿತ್ತು. ಆಗ ಮಾಜಿ ಸಚಿವ ದಿ. ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಆ ಮೂಲಕ ಕುಟುಂಬ ರಾಜಕಾರಣಕ್ಕೆ ಬಿಜೆಪಿ ಹೈಕಮಾಂಡ್ ಮಣೆ ಹಾಕುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿತ್ತು. ಈಗ ಹಾನಗಲ್ ಉಪ ಚುನಾವಣೆಯಲ್ಲಿಯೂ ಹೈಕಮಾಂಡ್ ಹಾಗೆ ಮಾಡಿದೆ.
ಟಿಕೆಟ್ಗೆ ಪ್ರಯತ್ನಿಸಿದ್ದ ಉದಾಸಿ ಕಟುಂಬ!
ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಡೆಯಲು ಸಂಸದ ಶಿವಕುಮಾರ್ ಉದಾಸಿ ಬಳಹಷ್ಟು ಪ್ರಯತ್ನಿಸಿದ್ದರು ಎಂಬ ಮಾಹಿತಿಯಿದೆ. ಬಿಜೆಪಿ ಟಿಕೆಟ್ ಪಡೆದು ತಮ್ಮ ಪತ್ನಿ ರೇವತಿ ಶಿವಕುಮಾರ್ ಉದಾಸಿ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ಕ್ಷೇತ್ರವನ್ನು ಹಿಡಿದಿಟ್ಟುಒಳ್ಳುವುದು ಅವರ ಇಚ್ಛೆಯಾಗಿತ್ತು ಎನ್ನಲಾಗಿದೆ. ಆದರೆ ಕುಟುಂಬ ರಾಜಕಾರಣಕ್ಕೆ ಆಸ್ಪದ ಕೊಡುವುದಿಲ್ಲ ಎಂಬ ಬಿಜೆಪಿ ಹೈಕಮಾಂಡ್ ತೀರ್ಮಾನದಿಂದ ಉದಾಸಿ ಅವರ ಕುಟುಂಬ ಟಿಕೆಟ್ ಪಡೆಯಲು ಹಿನ್ನಡೆಗೆ ಕಾರಣವಾಗಿದೆ. ಜೊತೆಗೆ ಮೂಲ ಬಿಜೆಪಿಯ ಇತರ ಮುಖಂಡರಿಗೆ ಟಿಕೆಟ್ ನಿರಾಕರಿಸಿರುವುದು ಕುತೂಹಲ ಮೂಡಿಸಿದೆ.
ಆದರೂ ಮೂಲ ಬಿಜೆಪಿಗರು ಮೂಲೆಗುಂಪು?
ಈಗ ಕ್ಷೇತ್ರದ ಹೊರಗಿನವರಿಗೆ ಬಿಜೆಪಿ ಟಿಕೆಟ್ ಕೊಟ್ಟಿರುವುದು ಮೂಲ ಬಿಜೆಪಿಗರಲ್ಲಿ ಅಸಮಾಧಾನವನ್ನುಂಟು ಮಾಡಿದೆ ಎಂಬ ಮಾಹಿತಿ ಬಂದಿದೆ. ಕ್ಷೇತ್ರದ ಹೊರಗಿನವರಿಗೆ ಟಿಕೆಟ್ ಕೊಡುವ ಬದಲು ಕ್ಷೇತ್ರದಲ್ಲಿರುವವರಿಗೆ ಟಿಕೆಟ್ ಕೊಡಬೇಕಾಗಿತ್ತು ಎಂಬ ಮಾತುಗಳು ಕೇಳಿ ಬಂದಿವೆ. ಜೊತೆಗೆ ದಿ. ಸಿ.ಎಂ. ಉದಾಸಿ ಅವರು ಕುಟುಂಬಕ್ಕೂ ಟಿಕೆಟ್ ನಿರಾಕರಣೆ ಮಾಡಿರುವುದು ಕುತೂಹಲ ಮೂಡಿಸಿದೆ. ಸಂಸದ ಶಿವಕುಮಾರ್ ಉದಾಸಿ ಅವರು ಮುಂದಿನ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಹಾನಗಲ್ ಕ್ಷೇತ್ರದದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬಂದಿವೆ. ಒಟ್ಟಾರೆ ಅಚ್ಚರಿಯ ಅಭ್ಯರ್ಥಿಯನ್ನು ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಿದ್ದು, ಗೆಲ್ಲಿಸುಕೊಂಡು ಬರುವ ಜವಾಬ್ದಾರಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೆಗಲಿಗೆ ಬಿದ್ದಿದೆ.