ಕೋಬ್ರಾಗೆ ನೀರು: ವೈರಲ್ ವೀಡಿಯೊ ಹಿಂದಿನ ಅಸಲಿ ಕತೆಯೇನು?
ವೀಡಿಯೋದಲ್ಲಿ ಖಾಕಿ ಬಟ್ಟೆ ತೊಟ್ಟು ಹಾವಿಗೆ ನೀರು ಎರೆದವರು ಸಿ.ಎನ್. ನಾಯಕ. ಇವರು ಕಾರವಾರ ಜಿಲ್ಲೆಯ ಉಪ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬೆಂಗಳೂರು, ಏಪ್ರಿಲ್ 1: ಹನ್ನೆರಡು ಅಡಿ ಉದ್ದದ ಕಿಂಗ್ ಕೋಬ್ರಾಗೆ ಖಾಕಿ ಧರಿಸಿರುವ ವ್ಯಕ್ತಿಯೊಬ್ಬರು ಬಿಸ್ಲೇರಿ ಬಾಟಲಿಯಿಂದ ನೀರುಣಿಸುತ್ತಿರುವ ವೀಡಿಯೊ ಒಂದು ಕಳೆದ ಮೂರ್ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ವೈರಲ್ ಆಗಿದೆ.
ಉತ್ತರ ಕರ್ನಾಟಕದಲ್ಲಿ ಸೆರೆ ಹಿಡಿಯಲಾಗಿದ್ದ ವೀಡಿಯೋ ದೃಶ್ಯಗಳು ಎರಡೇ ದಿನ ಕಳೆಯುವಷ್ಟರಲ್ಲಿ ರಾಜ್ಯ, ರಾಷ್ಟ್ರೀಯ ಮಾಧ್ಯಮಗಳನ್ನು ದಾಟಿ ಅಂತಾರಾಷ್ಟ್ರೀಯ ಮಾಧ್ಯಮಗಳನ್ನೂ ಮುಟ್ಟಿತು.[ವೀಡಿಯೋ ವೈರಲ್, ಬಾಟಲಿಯಿಂದ ನೀರು ಕುಡಿಯುತ್ತಿರುವ ಕಾಳಿಂಗ ಸರ್ಪ]

ಹೀಗೆ ಬಂದ ಎಲ್ಲಾ ಸುದ್ದಿಗಳಲ್ಲೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಭೀಕರ ಬರಗಾಲ ಇರುವುದರಿಂದ ಅಲ್ಲಿನ ಕಾಡು ಪ್ರಾಣಿಗಳೂ ನೀರಿಲ್ಲದೆ ತತ್ತರಿಸಿವೆ. ಇಂಥ ಸಂದರ್ಭದಲ್ಲಿ ಇತ್ತೀಚೆಗೆ ಸಿಕ್ಕಿಬಿದ್ದ ಕಿಂಗ್ ಕೋಬ್ರಾವೊಂದು ನೀರಿಲ್ಲದೆ ಬಾಯಾರಿದ್ದಾಗ ಅಲ್ಲಿನ ಅರಣ್ಯ ಇಲಾಖೆ ಸಿಬ್ಬಂದಿ ನೀರುಣಿಸಿ ಸಂತೈಸಿದರು ಎಂದು ಬಿಂಬಿತವಾಗಿತ್ತು.
ಈ ವೀಡಿಯೋದಲ್ಲಿ ಹಾವಿಗೆ ನೀರೆರೆದವರು ಯಾರು? ಅವರು ಏನಂತಾರೆ? ಉತ್ತರ ಕನ್ನಡ ಜಿಲ್ಲೆಯಲ್ಲಿ ನಿಜಕ್ಕೂ ಭೀಕರ ಬರಗಾಲ ಇದೆಯಾ ? ಎಂಬಿತ್ಯಾದಿ ಮಾಹಿತಿಗಳನ್ನು ಹುಡುಕಿಕೊಂಡು ಹೋದ ಮಾಧ್ಯಮವೊಂದು ಕೊನೆಗೂ ಈ ವೀಡಿಯೋ ಹಿಂದಿನ ಅಸಲಿ ಕತೆಯನ್ನು ಹೆಕ್ಕಿ ತೆಗೆದಿದೆ.
ವೀಡಿಯೋದಲ್ಲಿ ಖಾಕಿ ಬಟ್ಟೆ ತೊಟ್ಟು ಹಾವಿಗೆ ನೀರು ಎರೆದವರು ಸಿ.ಎನ್. ನಾಯಕ. ಇವರು ಕಾರವಾರ ಜಿಲ್ಲೆಯ ಉಪ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅವರು ಹೇಳುವ ಪ್ರಕಾರ, ಕಾರವಾರ ಜಿಲ್ಲೆಯಲ್ಲಿ ಬರ ಇಲ್ಲ. ದಟ್ಟ ಕಾಡುಗಳು, ಕಾಡಿನ ಮಧ್ಯೆ ಹರಿಯುವ ಕಾಳೀ ನದಿಯಿಂದಾಗಿ ಅಲ್ಲಿ ಬರವಿಲ್ಲ. ಆದರೆ, ಬಿಸಿಲಿನ ತಾಪಮಾನ ಸಾಕಷ್ಟಿದೆ. ಈ ಬಿಸಿಲಿನ ಪ್ರಖರತೆಗೆ ಅಲ್ಲಿನ ಕಾಡು ಪ್ರಾಣಿಗಳು ಬಸವಳಿಯುತ್ತವೆ.
ಕಾಡಿನಲ್ಲಿ ಸುತ್ತಾಡುವ ಅವರು, ಪ್ರತಿದಿನ ಹೀಗೆ ಬಸವಳಿದ ಹಲವಾರು ಪ್ರಾಣಿಗಳನ್ನು ನೋಡುತ್ತಾರಂತೆ. ಅದೇ ರೀತಿ, ಇತ್ತೀಚೆಗೆ ಅರಣ್ಯ ಪರಿವೀಕ್ಷಣೆಗೆಂದು ತೆರಳಿದ್ದ ಅವರಿಗೆ ಮಧ್ಯಾಹ್ನ ಸುಮಾರು 12: 30ರ ಹೊತ್ತಿಗೆ ಕಾಳಿಂಗ ಸರ್ಪ ಕಂಡಿದೆಯಂತೆ. ಅದನ್ನು ನೋಡಿದ ಕೂಡಲೇ ಅಧಿಕಾರಿಗಳಿಗೆ ಅದು ನೀರಿಲ್ಲದೆ ಬಳಲಿರುವುದು ಖಾತ್ರಿಯಾಯಿತಂತೆ.
ಸುಸ್ತಾಗಿ ಮಲಗಿದ್ದ ಅದನ್ನು ತಂದು ಅದಕ್ಕೆ ನೀರು ಕುಡಿಸಿದ್ದಾರೆ ಅಧಿಕಾರಿಗಳು. ನಾಯಕ್ ಅವರು ಹೇಳುವ ಪ್ರಕಾರ, ಇದು ಮಾಮೂಲಿ ದಿನಚರಿ. ಎಷ್ಟೋ ಬಾರಿ ಕಾಡು ಪ್ರಾಣಿಗಳು ನೀರಿಲ್ಲದೆ ಒದ್ದಾಡುವಾಗ ಅವುಗಳ ಬಳಿಗೆ ತೆರಳಿ ಅವುಗಳಿಗೆ ನೀರು ಕೊಡುತ್ತೇವೆ. ಇದರಲ್ಲಿ ಸೆನ್ಸೇಷನ್ ಆಗುವಂಥದ್ದೇನೂ ಇಲ್ಲ ಎಂದಿದ್ದಾರೆ ನಾಯಕ್.












Click it and Unblock the Notifications