ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸುವ ಅವಕಾಶ ಇದೆ: ಸಿದ್ದರಾಮಯ್ಯ
ಮೈಸೂರು, ನವೆಂಬರ್ 14: 224 ಕ್ಷೇತ್ರಗಳಲ್ಲಿ ಎಲ್ಲಿ ಬೇಕಿದ್ರೂ ಸ್ಪರ್ಧೆ ಮಾಡುವವನೇ ನಿಜವಾದ ಲೀಡರ್ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಮೈಸೂರಿನಲ್ಲಿ ಸೋಮವಾರ ಮಾಧ್ಯಮಗಳಿಗೆ ಮಾತನಾಡಿದ ಅವರು, ಒಬ್ಬ ನಾಯಕನಾದವನು ಎಲ್ಲಿಂದ ಬೇಕಾದರೂ ಚುನಾವಣೆಗೆ ಸ್ಪರ್ಧಿಸುತ್ತಾನೆ. ಎಲ್ಲಿ ಬೇಕಾದರೂ ಚುನಾವಣೆಗೆ ನಿಲ್ಲುವವನು ನಾಯಕ. ಜನ ಚುನಾವಣೆಗೆ ನಿಲ್ಲುವಂತೆ ಬಯಸಬೇಕು. ಜನಸೇವೆ ಮಾಡುವ ಇಂಗಿತ ಇರಬೇಕು ಅಂತ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು. ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸುವ ಅವಕಾಶ ಇದೆ. ಜನ ಬಯಸಿದ ಕಡೆ ಸ್ಪರ್ಧೆ ಮಾಡುತ್ತೇನೆ. ಕೋಲಾರದವರು ಬಯಸಿದರೆ ಕೋಲಾರ, ವರುಣದವರು ಬಯಸಿದರೆ ವರುಣ. ಅಂತ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ರು.
Siddaramaiah; ಕೋಲಾರದಿಂದ ಸ್ಪರ್ಧೆ, ಪ್ಲಸ್ ಪಾಯಿಂಟ್ಗಳು!
ಈಗ ನನಗೆ 75 ವರ್ಷ, ನನಗೆ ಬಹಳ ವರ್ಷ ಬದುಕಬೇಕೆಂಬ ಆಸೆಯಿದೆ. ಹೆಚ್ಚು ವರ್ಷ ಬದುಕುಳಿದು,ಜನರ ಸೇವೆ ಮಾಡಬೇಕು ಎಂಬ ಆಸೆಯಿಟ್ಟುಕೊಂಡಿದ್ದೇನೆ. ನಾನು ಎಷ್ಟು ವರ್ಷಗಳ ಕಾಲ ಬದುಕುತ್ತೇನೋ ಗೊತ್ತಿಲ್ಲ.ರೋಗಗಳು ಬಾರದಂತೆ ಎಲ್ಲರೂ ಮುನ್ನೆಚ್ಚರಿಕೆ ವಹಸಬೇಕು ಎಂದು ಸಲಹೆ ನೀಡಿದರು.
ಸಿದ್ದರಾಮಯ್ಯಗೆ ರಾಜಕೀಯವಾಗಿ ಪುನರ್ಜನ್ಮ ಕೊಟ್ಟೆ ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು 8 ಚುನಾವಣೆ ಗೆಲ್ಲುವಾಗ ಕುಮಾರಸ್ವಾಮಿ ಎಲ್ಲಿದ್ದರು.? ಕುಮಾರಸ್ವಾಮಿ ರಾಜಕೀಯಕ್ಕೆ ಬಂದಿದ್ದು ಯಾವಾಗ.? 1996 ರಲ್ಲಿ ಕುಮಾರಸ್ವಾಮಿ ರಾಜಕೀಯಕ್ಕೆ ಬಂದರು. ನಾನು ಅಷ್ಟೊತ್ತಿಗೆ ಚುನಾವಣೆ ಗೆದ್ದಿರಲಿಲ್ವಾ ? ನಾನು ಹೋಗದ ಕಾರಣ ಸಿದ್ದರಾಮಯ್ಯ ಗೆದ್ದರು ಎಂಬ ಮಾತುಗಳು ಬಾಲಿಶ.ಮತ ಹಾಕಿದ ಮತದಾರರಿಗೆ ಮಾಡಿದ ಅವಮಾನವಿದು ಅಂತ ಸಿದ್ದರಾಮಯ್ಯ ಗರಂ ಆದ್ರು.
ಶಾಲಾ ಗೋಡೆಗಳಿಗೆ ಕೇಸರಿ ಬಣ್ಣ ಬಳಿದು ಶಾಲೆಗಳನ್ನೂ ಕೇಸರಿಕರಣ ಮಾಡುವ ವಿಚಾರಕ್ಕೆ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ರು.ಇದು ಸರ್ಕಾರದ ದುಡ್ಡು, ಬಿಜೆಪಿಯದ್ದಲ್ಲ, ಇದು ಜನರ ದುಡ್ಡು.ಜನರು ಕೇಸರಿಕರಣ ಮಾಡಿ ಅಂತ ಹೇಳಿದ್ದಾರಾ? ಇಷ್ಟ ಬಂದಂಗೆ ಅಧಿಕಾರ ಮಾಡಲು ಆಗೋದಿಲ್ಲ.ಅದು ಜನ ವಿರೋಧಿ, ಸಂವಿಧಾನ ವಿರೋಧಿ ಆಗುತ್ತದೆ. ಇವರಿಗೇನು ಬಹುಮತ ಇತ್ತಾ ?ಈ ರೀತಿ ಮಾಡುತ್ತೀವಿ ಅಂತಾ ಅಧಿಕಾರಕ್ಕೆ ಬಂದಿದ್ದರಾ ? ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬಂದವರು ಇವರು ಅಂತ ರಾಜ್ಯ ಸರ್ಕಾರ ಕಿಡಿಕಾರಿದ್ರು.
ಶಾಸಕ ಪ್ರಿಯಾಂಕ ಖರ್ಗೆಗೆ ಬೆದರಿಕೆ ವಿಚಾರಕ್ಕೆ ಮಾತನಾಡಿ, ಇದು ಪ್ರಜಾಪ್ರಭುತ್ವಕ್ಕೆ ಮಾರಕ. ಸಾಹಿತಿಗಳು, ಚಿಂತಕರು, ಪತ್ರಕರ್ತರು, ಪ್ರತಿಪಕ್ಷದವರಿಗೆ ಬೆದರಿಕೆ ಹಾಕುವುದು ಒಳ್ಳೆಯ ಬೆಳವಣಿಗೆಯಲ್ಲ. ಬಿಜೆಪಿಯವರು ಮೊದಲಿನಿಂದಲೂ ಇಂತವುಗಳನ್ನು ಪೋಷಿಸಿಕೊಂಡು ಬರುತ್ತಿದ್ದಾರೆ. ಕೇಂದ್ರ ಸರ್ಕಾರವೇ ಇದರ ಪರವಾಗಿ ಇದೆ. ಬಸವರಾಜ ಬೊಮ್ಮಾಯಿ, ಆರಗ ಜ್ಞಾನೇಂದ್ರ ಇವರೆಲ್ಲ ಇದರ ಭಾಗ. ಸಂವಿಧಾನದ 19ನೇ ವಿಧಿಯಡಿ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ. ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಭಯ ಹುಟ್ಟಿಸುವ ಮೂಲಕ ಬಿಜೆಪಿಯವರು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮಾಡುತ್ತಿದ್ದಾರೆ ಅಂತ ಸಿದ್ದರಾಮಯ್ಯ ಟೀಕಿಸಿದರು.
ಮುಂದಿನ ಅಧಿವೇಶನದಲ್ಲಿ ಕಬ್ಬು ಬೆಳೆಗಾರರ ಸಂಕಷ್ಟ ಪ್ರಸ್ತಾಪ: ಸಿದ್ದರಾಮಯ್ಯ ಭರವಸೆ
ಮಂಡ್ಯ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಪ್ರತಿಭಟಿಸುತ್ತಿದ್ದ ರೈತರನ್ನು ಸಿದ್ದರಾಮಯ್ಯ ಭೇಟಿಯಾಗಿ ಚರ್ಚಿಸಿ, ಕಬ್ಬಿಗೆ ಬೆಂಬಲ ಬೆಲೆ ನಿಗದಿಪಡಿಸಬೇಕು, ಭತ್ತದ ಬೆಂಬಲ ಬೆಲೆ ಹೆಚ್ಚಿಸಬೇಕು ಎಂದು ರೈತರು ಆಗ್ರಹಿಸಿದರು. ಈ ಕುರಿತು ಈಗಾಗಲೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಮುಂದಿನ ದಿನಗಳಲ್ಲಿ ವಿಧಾನಸಭೆ ಅಧಿವೇಶನದಲ್ಲಿಯೂ ಪ್ರಸ್ತಾಪಿಸುತ್ತೇನೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.