ರಾಹುಲ್ ವಿರುದ್ಧ ಸ್ಪರ್ಧೆಗೆ ಸಿದ್ಧ: ಡಿವಿಎಸ್ ಗೌಡ ಘೋಷಣೆ
ಪ್ರಧಾನಿ ಅಭ್ಯರ್ಥಿ ಪ್ರಕಟಕ್ಕೆ ಹಿಂದೇಟು ಹಾಕುತ್ತಿರುವ ಕಾಂಗ್ರೆಸ್ಸನ್ನು ಕೆಣಕಿದ ಸದಾನಂದ ಗೌಡರು ಮೈಸೂರು, ಉಡುಪಿ, ಚಿಕ್ಕಮಗಳೂರು, ಬೆಂಗಳೂರು ಉತ್ತರ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ವಿರುದ್ದ ಸ್ಪರ್ಧಿಸಲು ಸಿದ್ಧ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಸವಾಲು ಹಾಕಿದರು.
ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ತಾವೂ ಸೇರಿದಂತೆ 6 ಮಂದಿಯ ಹೆಸರು ಪ್ರಸ್ತಾಪವಾಗುತ್ತಿದೆ. ಮಾಜಿ ಮುಖ್ಯಮಂತ್ರಿಗಿಂತ ಮಾಜಿ ಡಿಸಿಎಂ ಆಗಿದ್ದವರಿಗೆ ಹೆಚ್ಚು ಪ್ರಾತಿನಿಧ್ಯ ನೀಡಲಾಗುತ್ತಿದೆ ಎಂದು ಮಾರ್ಮಿಕವಾಗಿ ನುಡಿದರು. (ಬೆಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಗಳು ಇಂತಿವೆ: ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಕೆಆರ್ ಪುರಂ, ಹೆಬ್ಬಾಳ, ಬ್ಯಾಟರಾಯನಪುರ, ಮಲ್ಲೇಶ್ವರಂ, ಪುಲಕೇಶಿ ನಗರ ಮತ್ತು ದಾಸರಹಳ್ಳಿ)
ಮೋದಿ ರ್ಯಾಲಿ ಫೆಬ್ರವರಿಯಲ್ಲಿ ನಾಲ್ಕು ಕಡೆ: ನರೇಂದ್ರ ಮೋದಿ ಅವರ ರ್ಯಾಲಿ ಫೆಬ್ರವರಿಯಲ್ಲಿ ಉಡುಪಿ, ದಾವಣಗೆರೆ, ಬೀದರ್, ಹುಬ್ಬಳ್ಳಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಲೋಕಸಭೆ ಚುನಾವಣೆಗೆ ರಾಜ್ಯದಿಂದ ಬಿಜೆಪಿ ಅಭ್ಯರ್ಥಿ ಪಟ್ಟಿ ಒಂದು ವಾರದಲ್ಲಿ ಬಿಡುಗಡೆ ಆಗಲಿದ್ದು, ಪಕ್ಷದ ಕೋರ್ ಕಮಿಟಿ ಎರಡು ದಿನದಲ್ಲಿ ಸಭೆ ಸೇರಿ ಅಂತಿಮಗೊಳಿಸಲಿದೆ 15 ರಿಂದ 20 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಲಿದೆ ಎಂದರು. ( ನಾನೊಬ್ಬ ಸೈನಿಕ, ನಿಮಗಾಗಿ ಏನು ಮಾಡಲೂ ಸಿದ್ಧ )
ಈ ವರ್ಷದ ಮೊದಲ ಅಧಿವೇಶನವನ್ನು ಕೇವಲ 7 ದಿನಗಳಿಗೆ ಮೊಟಕುಗೊಳಿಸಲಾಗಿದೆ. ಕನಿಷ್ಟಪಕ್ಷ 15 ದಿನವಾದರೂ ಅಧಿವೇಶನ ನಡೆಸಬೇಕು. ಇದಕ್ಕೆ ಆಡಳಿತ ಪಕ್ಷದಲ್ಲಿನ ಭಿನ್ನಮತ ಹಾಗೂ ಸಚಿವರ ಅಸಹಕಾರ ಕಾರಣವಿರಬಹುದು. ಆಡಳಿತ ಪಕ್ಷದಿಂದಲೇ ಅಧಿವೇಶನ ಮೊಟಕಾಗಿರುವುದು ದುರಂತದ ಸಂಗತಿ ಎಂದು ಚಾಟಿ ಬೀಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 60 ದಿನ ಅಧಿವೇಶನ ನಡೆಸುವುದಾಗಿ ಹೇಳಿದ್ದರು. ಅವರು ಹೇಳುವುದು ಒಂದು, ಮಾಡುವುದು ಮತ್ತೊಂದು ಎಂದು ಅವರು ವ್ಯಂಗ್ಯವಾಡಿದರು.
ತಾವು ಮುಖ್ಯಮಂತ್ರಿ ಆಗಿದ್ದಾಗ ಜಾರಿಗೆ ತಂದ ಸಕಾಲ ಯೋಜನೆಯಲ್ಲಿ 4 ಕೋಟಿ ಅರ್ಜಿ ವಿಲೇವಾರಿ ಆಗಿದ್ದು, ಪ್ರಧಾನ ಮಂತ್ರಿ ಪ್ರಶಸ್ತಿಗೆ ಭಾಜನವಾಗಿದೆ. ಪಾಕ್ ನಿಯೋಗ ಇದರ ಅಧ್ಯಯನಕ್ಕೆ ಬಂದಿತ್ತು. ಇದು ಸಿಎಂ ಕಚೇರಿವರೆಗೂ ವಿಸ್ತರಿಸಬೇಕು. ಆಗ ಶೇ. 50ರಷ್ಟು ಭ್ರಷ್ಟಾಚಾರ ಕಡಿಮೆಯಾಗಲಿದೆ. ಸಿದ್ದರಾಮಯ್ಯನವರ ಸರ್ಕಾರದಲ್ಲಿ ಕಡತ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ ಎಂದರು. ( ಭಾರತದ ಭವ್ಯ ಭವಿಷ್ಯಕ್ಕಾಗಿ ಮೋದಿ ಕನಸು )