ಮತದಾನಕ್ಕೆ ನಾವು ರೆಡಿ, ಬನ್ನಿ ಮತ ಚಲಾಯಿಸಿ
ಬೆಂಗಳೂರು, ಏ. 16 : ಲೋಕಸಭೆ ಚುನಾವಣೆಯ ಮತದಾನಕ್ಕೆ ರಾಜ್ಯ ಚುನಾವಣಾ ಆಯೋಗ ಸಕಲ ರೀತಿಯಲ್ಲಿ ಸಜ್ಜಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಹೇಳಿದ್ದಾರೆ. ಮತದಾನಕ್ಕಾಗಿ 54,264 ಮತಗಟ್ಟೆಗಳನ್ನು ತೆರೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ಪ್ರೆಸ್ ಕ್ಲಬ್ ಮತ್ತು ವರದಿಗಾರರ ಕೂಟ ಜಂಟಿಯಾಗಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅನಿಲ್ ಕುಮಾರ್ ಝಾ, 2009ರ ಚುನಾವಣೆಯಲ್ಲಿ 4 ಕೋಟಿ 36 ಲಕ್ಷ ಮತದಾರರಿದ್ದರು. ಈ ಬಾರಿ 6 ಕೋಟಿ 42 ಲಕ್ಷ ಮತದಾರರು ಮತ ಚಲಾಯಿಸಲು ಅವಕಾಶ ಪಡೆದಿದ್ದಾರೆ ಎಂದು ಹೇಳಿದರು.

ಚುನಾವಣಾ ಕಾರ್ಯಕ್ಕಾಗಿ 2,95,000 ಸಿಬ್ಬಂದಿಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. 1,18,000 ಮಹಿಳಾ ಸಿಬ್ಬಂದಿಗಳು ಚುನಾವಣಾ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ ಎಂದರು. ಗುರುವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು. [ಮತಗಟ್ಟೆ ಹುಡುಕಲು ಎಸ್ಎಂಎಸ್ ಮಾಡಿ]
ರಾಜ್ಯದ 28 ಕ್ಷೇತ್ರಗಳಲ್ಲಿ ಒಟ್ಟು 54,264 ಮತಗಟ್ಟೆಗಳನ್ನು ತೆರೆಯಲಾಗಿದೆ. ಇವುಗಳಲ್ಲಿ 11,424 ಅತಿ ಸೂಕ್ಷ್ಮ ಮತಗಟ್ಟೆಗಳು ಹಾಗೂ 14,968 ಸೂಕ್ಷ್ಮ ಮತಗಟ್ಟೆಗಳಾಗಿವೆ ಎಂದರು. 28 ಕ್ಷೇತ್ರಗಳಿಗೆ 28 ಮತ ಏಣಿಕೆ ಕೇಂದ್ರಗಳನ್ನು ತೆರೆಯಲಾಗಿದ್ದು, ಮತದಾನದ ನಂತರ ಅಲ್ಲಿ ಮತಯಂತ್ರಗಳನ್ನು ಇಡಲಾಗುತ್ತದೆ ಎಂದರು.
ಮತದಾನದ ದಿನವಾದ ಏ.17ರಂದು ಖಾಸಗಿ ಸಂಸ್ಥೆಗಳು ಕೂಡ ವೇತನ ಸಹಿತ ರಜೆ ನೀಡಬೇಕು ಎಂದು ಚುನಾವಣಾ ಆಯೋಗ ಈಗಾಗಲೇ ಸೂಚನೆ ರವಾಸಿದೆ. ರಜೆ ನೀಡದ ಕಂಪನಿ, ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಬೆಂಗಳೂರು ನಗರ ವ್ಯಾಪ್ತಿ : ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಲ್ಲಿ ಒಟ್ಟು 6623 ಮತಕೇಂದ್ರಗಳಿವೆ. ಇವುಗಳಲ್ಲಿ 2044 ಸೂಕ್ಷ್ಮ ಮತ್ತು 1,361 ಅತಿ ಸೂಕ್ಷ್ಮ ಮತಕೇಂದ್ರಗಳಾಗಿವೆ ಎಂದು ಹೇಳಿದ ಅನಿಲ್ ಕುಮಾರ್ ಝಾ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮೊದಲ ಬಾರಿಗೆ ವಿವಿಪ್ಯಾಟ್ ಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ ಎಂದರು. [ಏನಿದು ವಿವಿಪ್ಯಾಟ್ ಇಲ್ಲಿದೆ ವಿವರ]












Click it and Unblock the Notifications