Ration Card: ಪಡಿತರಚೀಟಿದಾರರಿಗೆ ಶೀಘ್ರವೇ "ಸ್ಮಾರ್ಟ್ ಕಾರ್ಡ್" ವಿತರಣೆ, ಏನಿದರ ಉಪಯೋಗ?- ಇಲ್ಲಿದೆ ಮಾಹಿತಿ
ಬೆಂಗಳೂರು, ನವೆಂಬರ್, 23: ಅನ್ನಭಾಗ್ಯ ಯೋಜನೆ ಜಾರಿಯಾಗಿನಿಂದ ರೇಷನ್ ಕಾರ್ಡ್ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಲವಾರು ಬದಲಾವಣೆಗಳನ್ನು ತರುತ್ತಲೇ ಇದೆ. ಇದೀಗ ಪಡಿತರದಾರರಿಗೆ ಚೀಟಿ ಜೊತೆಗೆ ಶೀಘ್ರವೇ ಅನ್ನಭಾಗ್ಯದ ಸ್ಮಾರ್ಟ್ ಕಾರ್ಡ್ ಕೊಡಲಾಗುವುದು. ಬಿಪಿಎಲ್ ಹಾಗೂ ಎಪಿಎಲ್ ಚೀಟಿದಾರರಿಗೆ ಇದನ್ನು ವಿತರಣೆ ಮಾಡಲಾಗುವುದು ಎಂದು ಕೋಲಾರದಲ್ಲಿ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಈ ಸ್ಮಾರ್ಟ್ ಕಾರ್ಡ್ ಬಹು ಉಪಯೋಗಿ ಕಾರ್ಡ್ ಆಗಲಿದೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು. ಇನ್ನು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆಯಡಿ 1.13 ಕೋಟಿ ಕಾರ್ಡ್ದಾರರಿಗೆ ಅಂದರೆ ಸುಮಾರು ₹4 ಕೋಟಿ ಜನರಿಗೆ ಹಣ ಸಂದಾಯ ಮಾಡಿದ್ದೇವೆ.
2.66 ಲಕ್ಷ ಕಾರ್ಡ್ದಾರರು ಪೋಸ್ಟಲ್ ಇಲಾಖೆಯಲ್ಲಿ ಖಾತೆ ತೆರೆದಿದ್ದು, ಅವರಿಗೂ ಹಣ ಸಂದಾಯ ಆಗುತ್ತಿದೆ ಎಂದರು.

ಶೇಕಡಾ 90ರಷ್ಟು ಅಧಿಕ ಕಾರ್ಡ್ದಾರರಿಗೆ ಈಗಾಗಲೇ ಹಣ ತಲುಪಿದೆ. ಇನ್ನೂ 7 ಲಕ್ಷ ಕಾರ್ಡ್ದಾರರು ಬ್ಯಾಂಕ್ ಖಾತೆ ತೆರೆಯದಿರುವುದು ಸೇರಿದಂತೆ ವಿವಿಧ ಸಮಸ್ಯೆಯಿದೆ. ಅಂತಹವರಿಗೆ ಹಣ ಸಂದಾಯ ಆಗಿಲ್ಲ. ಅವರಿಗೂ ಹಣ ಸಂದಾಯ ಮಾಡಲು ಇಲಾಖೆ ಅಧಿಕಾರಿಗಳೇ ಖುದ್ದಾಗಿ ಕಾರ್ಡ್ಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಈ ಮೂಲಕ ಶೇಕಡಾ 100 ಸಾಧನೆ ಮಾಡಲಿದ್ದೇವೆ ಎಂದು ಭರವಸೆ ನೀಡಿದರು.
3 ವಿದ್ಯುತ್ ಯೋಜನೆಗಳ ಫಲಾನುಭವಿಗಳ ಬಾಕಿ ಮನ್ನಾಗೆ ನಿರ್ಧಾರ
3 ವಿದ್ಯುತ್ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳಿಗೆ ಹೆಚ್ಚಿನ ಸಬ್ಸಿಡಿ ದರದಲ್ಲಿ ವಿದ್ಯುತ್ ನೀಡಲಾಗುತ್ತಿದ್ದು. ಇದೀಗ 3 ವಿದ್ಯುತ್ ಯೋಜನೆಗಳ ಫಲಾನುಭವಿಗಳ 389 ಕೋಟಿ ರೂಪಾಯಿ ಬಾಕಿ ಮನ್ನಾ ಮಾಡಲು ರಾಜ್ಯದ ಸರ್ಕಾರ ನಿರ್ಧಾರ ಮಾಡಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಮಾಹಿತಿ ನೀಡಿದ್ದಾರೆ. ಹಾಗಾದರೆ ಈ ಮೂರು ಯೋಜನೆಗಳು ಯಾವುವು, ಯಾರೆಲ್ಲ ವಿದ್ಯುತ್ ಬಿಲ್ ಬಾಕಿ ಮನ್ನಾ ಆಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ಗಮನಿಸಿ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್ ಅವರು, "ಕುಟೀರ ಭಾಗ್ಯ", "ಭಾಗ್ಯಜ್ಯೋತಿ" ಮತ್ತು "ಅಮೃತ ಜ್ಯೋತಿ" ಯೋಜನೆ ಫಲಾನುಭವಿಗಳಿಗೆ ಉಚಿತವಾಗಿ ಅಥವಾ ಹೆಚ್ಚಿನ ಸಬ್ಸಿಡಿ ದರದಲ್ಲಿ ವಿದ್ಯುತ್ ಪಡೆಯುತ್ತಿದ್ದ ಫಲಾನುಭವಿಗಳ 389 ಕೋಟಿ ರೂಪಾಯಿಗಳ ಬಾಕಿ ಮನ್ನಾ ಮಾಡಲು ರಾಜ್ಯದ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು ಎಂದು ಕನ್ನಡ ಪ್ರಭ ವರದಿ ಮಾಡಿದೆ.
ಹಾಗೆಯೇ ಇದು ಈಗಾಗಲೇ ಈ ಮೂರು ಯೋಜನೆಗಳನ್ನು ತನ್ನ ಮಹತ್ವಾಕಾಂಕ್ಷೆಯ "ಗೃಹ ಜ್ಯೋತಿ" ಯೋಜನೆಯೊಂದಿಗೆ ವಿಲೀನಗೊಳಿಸಲಾಗಿದ್ದು, ವಸತಿ ವಿದ್ಯುತ್ ಸಂಪರ್ಕಗಳಿಗೆ 200 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ನೀಡುತ್ತದೆ ಎಂದರು.
ಈ ಹಿಂದೆ 'ಕುಟೀರ ಭಾಗ್ಯ' ಮತ್ತು 'ಭಾಗ್ಯ ಜ್ಯೋತಿ' ಫಲಾನುಭವಿಗಳು 40 ಹಾಗೂ 'ಅಮೃತ ಜ್ಯೋತಿ' ಫಲಾನುಭವಿಗಳು 75 ಯೂನಿಟ್ ವಿದ್ಯುತ್ ಪಡೆಯುತ್ತಿದ್ದರು. 40 ಯೂನಿಟ್ ಪಡೆದವರಿಗೆ ಈಗ 50 ಯೂನಿಟ್ ಜೊತೆಗೆ 10 ಯೂನಿಟ್ ಮತ್ತು 75 ಯೂನಿಟ್ ಪಡೆಯುವವರಿಗೆ ಶೇಕಡಾ 10ರಷ್ಟು ಹೆಚ್ಚುವರಿಯಾಗಿ ನೀಡಲಾಗುವುದು ಎಂದು ತಿಳಿಸಿದರು.
"ಕುಟೀರ ಭಾಗ್ಯ", "ಭಾಗ್ಯಜ್ಯೋತಿ" ಹಾಗೂ "ಅಮೃತ ಜ್ಯೋತಿ" ಯೋಜನೆಗಳ ಫಲಾನುಭವಿಗಳ 389 ಕೋಟಿ ರೂಪಾಯಿಗಳ ಹಣ ಬಾಕಿ ಇತ್ತು. ನಾನು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ್ದೇನೆ. ಮತ್ತು ಅದನ್ನು ಮನ್ನಾ ಮಾಡಲು ನಿರ್ಧಾರ ಮಾಡಿದ್ದೇವೆ. ಸೋಲಾರ್ ಸಬ್ಸ್ಟೇಷನ್ಗಳಿಗೆ ಸರ್ಕಾರ ಟೆಂಡರ್ ಕರೆದಿದ್ದು, 750 ಮೆಗಾ ವ್ಯಾಟ್ ಉತ್ಪಾದಿಸುವ 7 ಬಿಡ್ದಾರರನ್ನು ಶಾರ್ಟ್ಲಿಸ್ಟ್ ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯದ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಪ್ರತಿ ಯೂನಿಟ್ಗೆ 3.17 ರೂಪಾಯಿ ದರವನ್ನು ನಿಗದಿ ಮಾಡಲಾಗಿದೆ. ತುಮಕೂರು ಜಿಲ್ಲೆಯ ಪಾವಗಡದ ಅನೇಕ ರೈತರು ಸೌರ ವಿದ್ಯುತ್ ಉತ್ಪಾದಿಸುವವರಿಗೆ 8,000 ಹೆಕ್ಟೇರ್ ಭೂಮಿಯನ್ನು ನೀಡಲು ಮುಂದೆ ಬಂದಿದ್ದಾರೆ ಎಂದು ತಿಳಿಸಿದರು.












Click it and Unblock the Notifications