ಚಂದ್ರರೇಖೆಯನ್ನು ಹೊಂದಿರುವ ವಿಶಿಷ್ಟ ಚಂದ್ರಮೌಳೀಶ್ವರ ಲಿಂಗ
ಶಿವರಾತ್ರಿಯ (ಫೆ 13) ಶುಭದಿನದಂದು ಕೊಲ್ಕತ್ತಾದಲ್ಲಿ ರಾಘವೇಶ್ವರ ಶ್ರೀಗಳು ಶ್ರೀಕರಾರ್ಚಿತ ಚಂದ್ರಮೌಳೀಶ್ವರ ದೇವರಿಗೆ ವಿಶೇಷ ಪೂಜೆಯನ್ನು ನೆರವೇರಿಸಿದರು. ಶಂಕರಾಚಾರ್ಯಯರು ಸುರೇಶ್ವರಾಚಾರ್ಯರ ಜೇಷ್ಠ ಶಿಷ್ಯ ವಿದ್ಯಾನಂದಾಚಾರ್ಯರಿಗೆ ನೀಡಿದ ಚಂದ್ರಮೌಳೀಶ್ವರ ಲಿಂಗವು ಚಂದ್ರ ರೇಖೆಯನ್ನು ಹೊಂದಿದ್ದು, ಅನ್ವರ್ಥ ಚಂದ್ರಮೌಳೇಶ್ವರ ಲಿಂಗವಾಗಿದೆ.
ಚಂದ್ರನ ಗತಿಗೆ ತಕ್ಕಂತೆ, ಅಮಾವಾಸ್ಯೆ - ಹುಣ್ಣಿಮೆಗಳಿಗೆ ಲಿಂಗದ ಬಣ್ಣ ಬದಲಾವಣೆಯಾಗುವುದು ಇದರ ವೈಶಿಷ್ಟ್ಯ. ಚಂದ್ರಮೌಳೀಶ್ವರನ ಒಂದು ಭಾಗದಲ್ಲಿ ಒಳಗಿನಿಂದಲೇ ಆತ್ಮಲಿಂಗದ ಆಕಾರ ಮೂಡಿಬಂದಿರುವುದು ವಿಶೇಷ.
ಇದು ಗೋಕರ್ಣ ಹಾಗೂ ರಾಮಚಂದ್ರಾಪುರ ಮಠದ ಸಂಬಂಧದ ಪ್ರತೀಕವಾಗಿದೆ. ಇನ್ನೊಂದು ಭಾಗವು ಅಖಂಡ ಭಾರತದ ನಕಾಶೆಯನ್ನು ಹೋಲುತ್ತದೆ. ನಕಾಶೆಯ ಮಧ್ಯೆ ತ್ರಿಕೋನಾಕಾರವಿದೆ. ಅದರ ಒಳಗೆ ತ್ರಿಕೋನಗಳು, ಅದರ ಮಧ್ಯ ಬಿಳಿ ಬಿಂದುವಿದೆ. ತ್ರಿಕೋನ ಶಕ್ತಿಯ ಪ್ರತೀಕವಾಗಿದೆ ಹಾಗೂ ಬಿಂದು ಶಿವನ ಪ್ರತೀಕವಾಗಿದೆ.

ರಾಘವೇಶ್ವರ ಶ್ರೀಗಳ ಅಮೃತಹಸ್ತದಿಂದ ಪ್ರತಿದಿನ 2ಬಾರಿ ಪೂಜಿಸಲ್ಪಡುವ ಇಂತಹ ಚಂದ್ರಮೌಳೀಶ್ವರ ಲಿಂಗವು ಜಗತ್ತಿನಲ್ಲಿ ಇನ್ನೊಂದಿಲ್ಲ. ಶಂಕರಾಚಾರ್ಯ ಪರಂಪರೆಯ ಎಲ್ಲಾ ಮಠಗಳಲ್ಲಿ ಚಂದ್ರಮೌಳೀಶ್ವರ ಲಿಂಗಗಳಿವೆಯಾದರೂ, ಅವೆಲ್ಲವೂ ಸ್ಫಟಿಕ ಶಿಲೆಯದ್ದಾಗಿದೆ.
ಆದರೆ ರಾಮಚಂದ್ರಾಪುರಮಠದಲ್ಲಿರುವ ಈ ಚಂದ್ರಮೌಳೀಶ್ವರ ಲಿಂಗ ಬಾಣಶಿಲೆಯದ್ದಾಗಿದ್ದು, ಮೌಲಿ(ಹಣೆ)ಯ ಭಾಗದಲ್ಲಿ ಚಂದ್ರರೇಖೆಯನ್ನು ಹೊಂದಿದೆ. ಇದು ಸ್ವತಃ ಶ್ರೀರಾಮನೆ ಪೂಜಿಸಿದ ಚಂದ್ರಮೌಳೀಶ್ವರ ಲಿಂಗ ಎಂಬ ಪ್ರತೀತಿಯಿದೆ.

ಅಗಸ್ತ್ಯ ಮುನಿಗಳು ವಿಶಿಷ್ಟವಾದ ತಪೋರಾಮಾದಿ ವಿಗ್ರಹಗಳ ಜೊತೆಗೆ, ಈ ಚಂದ್ರಮೌಳೀಶ್ವರ ಲಿಂಗವನ್ನು ವರದಮುನಿಗಳಿಗೆ ನೀಡಿದರು. ಎಂಟನೇ ಶತಮಾನದಲ್ಲಿ ಶಂಕರಾಚಾರ್ಯರು ಗೋಕರ್ಣಕ್ಕೆ ಚಿತ್ತೈಸಿದಾಗ ವರದಮುನಿಗಳಿಂದ ಶಂಕರಾಚಾರ್ಯರಿಗೆ ನೀಡಲ್ಪಟ್ಟಿತ್ತು.
ಹುಲಿಯು ಜಿಂಕೆಗೆ ಹಾಲುಣಿಸುತ್ತಿದ್ದ ಭವ್ಯ ಪರಿಸರದಲ್ಲಿ, ಗೋಕರ್ಣದ ಅಶೋಕೆಯಲ್ಲಿ ಶಂಕರಾಚಾರ್ಯರು, ರಾಮಚಂದ್ರಾಪುರ ಮಠವನ್ನು (ರಾಘೂತ್ತಮಮಠ) ಸ್ಥಾಪಿಸಿ, ತಮ್ಮ ಜ್ಞಾನಶಿಷ್ಯ ಹಾಗೂ ಸುರೇಶ್ವರಾಚಾರ್ಯರ ಜ್ಯೇಷ್ಠ ಶಿಷ್ಯರಾದ ಶ್ರೀ ವಿದ್ಯಾನಂದರನ್ನು ಪೀಠಾಧಿಪತಿಯಾಗಿ ನೇಮಿಸಿದರು.

ಅಂದಿನಿಂದ ಇಂದಿನವರೆಗೆ ಶ್ರೀಸೀತಾರಾಮಚಂದ್ರ, ಹಾಗೂ ವಿಶಿಷ್ಟ ಚಂದ್ರಮೌಳೀಶ್ವರ ಲಿಂಗ ಮುಂತಾದ ದೇವರ ದಿವ್ಯ ಸಾನಿದ್ಯಕ್ಕೆ ಮಠದ ಶ್ರೀಗಳ ಅಮೃತಹಸ್ತದಿಂದಲೇ ಅವಿಚ್ಛಿನ್ನವಾಗಿ ಪ್ರತಿದಿನ 2 ಪೂಜೆಗಳು ನಡೆಯುತ್ತಾ ಬಂದಿದೆ.
1300 ವರ್ಷಗಳ ಇತಿಹಾಸದಲ್ಲಿ ಒಂದು ದಿನವೂ ತಪ್ಪದಂತೆ ಈ ವಿಶಿಷ್ಟ ದೇವತಾ ವಿಗ್ರಹಗಳಿಗೆ ಚಂದ್ರಮೌಳೀಶ್ವರ ಲಿಂಗಕ್ಕೆ ಪೂಜೆ ನಡೆಯುತ್ತಾ ಬಂದಿರುವುದು ದೇವತಾ ಸಾನ್ನಿಧ್ಯವನ್ನು ನೂರ್ಮಡಿಗೊಳಿಸಿದೆ.












Click it and Unblock the Notifications