ಪ್ರಧಾನಿಯವರೇ ಸುಳ್ಳು ಹೇಳದೆ ಈ 5 ಪ್ರಶ್ನೆಗಳಿಗೆ ಉತ್ತರಿಸಿ: ಸುರ್ಜೇವಾಲಾ
ಬೆಂಗಳೂರು, ಏಪ್ರಿಲ್ 27: ಪ್ರಧಾನಿ ಮೋದಿ ಅವರು ಇಂದು ಕಾಂಗ್ರೆಸ್ ಜತೆಗಿನ ಮೈತ್ರಿ ಪಕ್ಷಗಳ ಸರ್ಕಾರಗಳಿಗೆ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕಗಳನ್ನು ಕಡಿಮೆ ಮಾಡುವಂತೆ ಸಲಹೆ ನೀಡಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.
ಬುಧವಾರ ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ನೂತನ ಪದಾಧಿಕಾರಿಗಳ ಸಭೆ ನಡೆಯಿತು. ಈ ವೇಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಮಾತನಾಡಿ, ಭಾರತ ಸರ್ಕಾರ ಅಬಕಾರಿ ಸುಂಕ ಇಳಿಸಿದ್ದು, ಕೇವಲ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಮಾತ್ರ ಆದರೆ ಕಾಂಗ್ರೆಸ್ ಮೈತ್ರಿ ಸರ್ಕಾರ ಇರುವ ದಕ್ಷಿಣ ಭಾರತ ಹಾಗೂ ಇತರೆ ರಾಜ್ಯ ಸರ್ಕಾರಗಳು ಅಬಕಾರಿ ಸುಂಕ ಇಳಿಸಬೇಕು ಎಂದು ಅವರು ಹೇಳಿದರು.
ಈ ವಿಚಾರದಲ್ಲಿ ನಾವು ಪ್ರಧಾನಮಂತ್ರಿಗಳಿಗೆ ಐದು ಸರಳ ಪ್ರಶ್ನೆಗಳನ್ನು ಕೇಳಬಯಸುತ್ತೇವೆ. ಮೋದಿ ಅವರೇ ಈ ಪ್ರಶ್ನೆಗಳಿಗೆ ಯಾವುದೇ ಟೀಕೆ, ವಿಷಯಾಂತರ ಹಾಗೂ ಸುಳ್ಳುಗಳನ್ನು ಹೇಳದೇ ನೇರ ಉತ್ತರ ನೀಡಿ ಎಂದು ಮೋದಿ ಅವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಪ್ರಶ್ನೆ ಮಾಡಿದ್ದಾರೆ.
ಮೋದಿಗೆ ಸರ್ಕಾರಕ್ಕೆ 5 ಪ್ರಶ್ನೆ ಹಾಕಿದ ಕಾಂಗ್ರೆಸ್
1. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ 9.48 ರೂ. ಇತ್ತು. ಅದನ್ನು ನೀವು 28 ರೂ.ಗೆ ಏರಿಕೆ ಮಾಡಿದ್ದೀರಿ. ಈ ಅಬಕಾರಿ ಸುಂಕವನ್ನು ನೀವು 18 ರೂ.ನಷ್ಟು ಕಡಿಮೆ ಮಾಡಿ ಹಳೇಯ ಪ್ರಮಾಣಕ್ಕೆ ಯಾವಾಗ ಇಳಿಸುತ್ತೀರಿ? ಮನಮೋಹನ್ ಸಿಂಗ್ ಅವರ ಸರ್ಕಾರ ಇದ್ದಾಗ ಡೀಸೆಲ್ ಮೇಲಿನ ಅಬಕಾರಿ ಸುಂಕ 3.56 ರೂ. ಇತ್ತು. ಮೋದಿ ಅವರೇ ಇದನ್ನು ನೀವು 21.80 ರೂ.ಗೆ ಏರಿಕೆ ಮಾಡಿದ್ದೀರಿ. ಇದನ್ನು ನೀವು ಯಾವಾಗ ಹಿಂಪಡೆಯುತ್ತೀರಿ? 18.24 ರೂ.ನಷ್ಟು ಅಬಕಾರಿ ಸುಂಕ ಕಡಿತಗೊಳಿಸುವುದು ಯಾವಾಗ?
2. ಕಳೆದ 8 ವರ್ಷಗಳಲ್ಲಿ ದೇಶದಲ್ಲಿನ ಬಿಜೆಪಿ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕದಿಂದ 27 ಲಕ್ಷ ಕೋಟಿ ಹಣ ಸಂಗ್ರಹಿಸಿದೆ. ಈ ಹಣವನ್ನು ದೇಶದ ಜನ ಸಾಮಾನ್ಯರಿಗೆ ಪರಿಹಾರವಾಗಿ ಯಾವಾಗ ಹಿಂತಿರುಗಿಸುತ್ತೀರಿ?
3. 2014ರಲ್ಲಿ ಸಬ್ಸಿಡಿಸಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆ 414 ರೂ. ಇತ್ತು. ಇದನ್ನು ನೀವು 1000 ರೂ.ಗೆ ಏರಿಸಿದ್ದೀರಿ. ಇದರ ಬೆಲೆ ಏರಿಕೆಯನ್ನು ನೀವು ಯಾವಾಗ ಹಿಂಪಡೆಯುತ್ತೀರಿ, ಜನರ ಹೊರೆ ಇಳಿಸುತ್ತೀರಿ?
4. ಮನಮೋಹನ್ ಸಿಂಗ್ ಅವರ ಸರ್ಕಾರ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲಕ್ಕೆ ವಾರ್ಷಿಕವಾಗಿ 1.50 ಲಕ್ಷ ಕೋಟಿ ಸಬ್ಸಿಡಿಯನ್ನು ನೀಡುತ್ತಿತ್ತು. ಮೋದಿ ಅವರೇ ನೀವು ಈ ಸಬ್ಸಿಡಿಯನ್ನು ರದ್ದು ಮಾಡಿದ್ದು, ಅದನ್ನು ಮತ್ತೆ ಯಾವಾಗ ನೀಡುತ್ತೀರಿ?
5. ಕರ್ನಾಟಕ, ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ, ಹಿಮಾಚಲ, ಅಸ್ಸಾಂ, ಉತ್ತರಾಖಂಡ ರಾಜ್ಯಗಳಲ್ಲಿ ರಾಜ್ಯ ಅಬಕಾರಿ ಸುಂಕವನ್ನು ಕಡಿತಗೊಳಿಸಲು ಯಾವಾಗ ಸೂಚನೆ ನೀಡುತ್ತೀರಿ?
ಮೋದಿ ಜನರ ಮೇಲೆ ಹೊರೆ ಹಾಕಿದ್ದಾರೆ :ಮಲ್ಲಿಕಾರ್ಜುನ ಖರ್ಗೆ
'ಮೋದಿ ಅವರು ಈಗ ಹೊಸ ಪ್ರಯತ್ನಕ್ಕೆ ಮುಂದಾಗಿದ್ದು, ಈಗಾಗಲೇ ಅವರು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಮೇಲೆ ಸಾಕಷ್ಟು ಅಬಕಾರಿ ಸುಂಕ ವಿಧಿಸಿದ್ದು, ಕಳೆದ 8 ವರ್ಷಗಳಲ್ಲಿ 27 ಲಕ್ಷ ಕೋಟಿ ಹಣ ಸಂಪಾದಿಸಿದ್ದಾರೆ. ಆ ಹಣದಲ್ಲಿ ಅರ್ಧದಷ್ಟು ಹಣವನ್ನು ಜನರಿಗೆ ಸಬ್ಸಿಡಿ ರೂಪದಲ್ಲಿ ನೀಡಿದರೆ ಜನರಿಗೆ ಹೊರೆ ಇಳಿಯಲಿದೆ,' ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕೇಂದ್ರ ಸರ್ಕಾರವು ಇಂಧನ ತೈಲದ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡದೇ, ಬಿಜೆಪಿ ಹೊರತಾದ ಪಕ್ಷಗಳು ಅದಿಕಾರದಲ್ಲಿರುವ ರಾಜ್ಯಗಳಿಗೆ ಅಬಕಾರಿ ಸುಂಕ ಕಡಿತ ಮಾಡುವಂತೆ ಸಲಹೆ ನೀಡುತ್ತಿದ್ದಾರೆ. ಕೇಂದ್ರ ಸರ್ಕಾರ ಯಾವ ಕಾರಣಕ್ಕೆ ಅಬಕಾರಿ ಸುಂಕ ಕಡಿತ ಮಾಡುತ್ತಿಲ್ಲ ಎಂದರು.
ಮನಮೋಹನ್ ಸಿಂಗ್ ಅವರ ಸರ್ಕಾರ ಪ್ರತಿ ವರ್ಷ 1.30 ಲಕ್ಷ ಕೋಟಿ ಕೋಟಿ ಸಬ್ಸಿಡಿ ನೀಡಿ ಇಂಧನ ತೈಲ ದರ ನಿಯಂತ್ರಣ ಮಾಡುತ್ತಿದ್ದರು. ಬಡವರ ಮೇಲೆ ಹಣಕಾಸಿನ ಹೊರೆ ಬೀಳಬಾರದು ಎಂದು ಆಹಾರದಿಂದ ಎಲ್ಲ ವಸ್ತುಗಳ ಮೇಲೆ ಸಬ್ಸಿಡಿ ನೀಡುತ್ತಿದ್ದರು. ಆದರೆ ಮೋದಿ ಅವರಿಗೆ ಈ ಬುದ್ಧಿ ಯಾಕೆ ಬರುತ್ತಿಲ್ಲ. ಅವರು ನಮಗೆ ಸಲಹೆ ನೀಡುವ ಬದಲು, ಕರ್ನಾಟಕ, ಯುಪಿ, ಬಿಹಾರ ಸೇರಿದಂತೆ ಎಲ್ಲೆಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆಯೋ ಆ ರಾಜ್ಯಗಳಲ್ಲಿ ಅವರು ಇಂಧನ ತೈಲದ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿ ತೋರಿಸಲಿ, ನಂತರ ಬೇರೆ ರಾಜ್ಯಗಳಿಗೆ ಹೇಳಲಿ ಎಂದು ಖರ್ಗೆ ಮೋದಿ ವಿರುದ್ಧ ಗುಡುಗಿದರು.
ಕೇಂದ್ರ ಸರ್ಕಾರ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲ: ಸಿದ್ದು
ಕೇಂದ್ರ ಸರ್ಕಾರ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲವಾಗಿದ್ದು, ಬಡವರು, ರೈತರಿಂದ ಯದ್ವಾತದ್ವ ತೆರಿಗೆ ವಸೂಲಿ ಮಾಡುತ್ತಿರುವ ವಿಚಾರವನ್ನು ನಮ್ಮ ನಾಯಕರು ಪ್ರಸ್ತಾಪಿಸಿದ್ದಾರೆ. ನಾನು ಆ ಬಗ್ಗೆ ಮಾತನಾಡುವುದಿಲ್ಲ ಎಂದು ಶಾಸಕಾಂಗ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಇಂದು ರಾಜ್ಯ ಪ್ರದೇಶ ಕಾಂಗ್ರೆಸ್ ನ ನೂತನ ಪದಾಧಿಕಾರಿಗಳ ಸಭೆ ಮಾಡಿದ್ದು, ಆ ಸಭೆಯಲ್ಲಿ ಪಕ್ಷದ ಪ್ರಮುಖ ನಾಯಕರು ಭಾಗವಹಿಸಿ ಅವರ ಜವಾಬ್ದಾರಿ ತಿಳಿಸಿದ್ದೇವೆ. ಚುನಾವಣೆಗೆ ಸಮಯ ವರ್ಷಕ್ಕಿಂತ ಕಡಿಮೆ ಇದ್ದು, ಎಲ್ಲ ಪದಾಧಿಕಾರಿಗಳು ಎಲ್ಲರೂ 24/7 ಕೆಲಸ ಮಾಡಬೇಕು ಎಂದು ಹೇಳಿದ್ದೇವೆ. ಇಂದು ಈ ಸರ್ಕಾರದಲ್ಲಿ ವ್ಯಾಪಕ ಭ್ರಷ್ಟಾಚಾರ, ಬೆಲೆ ಏರಿಕೆ ಆಗುತ್ತಿದೆ ಎಂದರು
ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಗುತ್ತಿಗೆದಾರರ ಸಂಘದವರು 40% ಲಂಚದ ಬಗ್ಗೆ ಪ್ರಧಾನಮಂತ್ರಿಗಳಿಗೆ ಪತ್ರಬರೆದು ದೂರು ನೀಡಿದ್ದಾರೆ. ಪತ್ರ ಬರಂದು 10 ತಿಂಗಳಾದರೂ ಪ್ರಧಾನಿಗಳು ಇಂದಿನವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಮಾಹಿತಿ ಪಡೆದು, ತನಿಖೆ ಮಾಡುವುದಿರಲಿ ಮಾಡಿಲ್ಲ. ಪ್ರಧಾನಿಗಳು ತಮ್ಮನ್ನು ತಾವು ಕಾವಲುಗಾರ ಎಂದು ಹೇಳಿಕೊಂಡಿದ್ದು, ನಾನು ತಿನ್ನಲ್ಲ, ಬೇರೆಯವರಿಗೂ ತಿನ್ನಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಇಲ್ಲಿಯವರೆಗೂ ಮೌಲವಾಗಿರುವುದು ನೋಡಿದರೆ ಇವರ ಭ್ರಷ್ಟಾಚಾರಕ್ಕೆ ಕೇಂದ್ರದ ಕುಮ್ಮಕ್ಕು ಇರುವ ಅನುಮಾನ ವ್ಯಕ್ತವಾಗುತ್ತದೆ.
ಇವರ ವೈಫಲ್ಯ, ನಮ್ಮ ಸಾಧನೆ ಜನರ ಮುಂದೆ ಇಡುವ ಕೆಲಸ ಆಗಬೇಕು. ನಮ್ಮ ಸರ್ಕಾರ ಇದ್ದಾಗ ಭಾಗ್ಯಗಳ ಸರ್ಕಾರ ಇತ್ತು, ಇಂದು ದೌರ್ಭಾಗ್ಯಗಳ ಸರ್ಕಾರ ಅಧಿಕಾರದಲ್ಲಿದೆ.
ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಅವರು ತಲೆಮರೆಸಿಕೊಂಡು 15 ದಿನವಾದರೂ ಇನ್ನು ಬಂಧಿಸಲಾಗಿಲ್ಲ. ಅವರಿಗೆ ಪೊಲೀಸ್ ಹಾಗೂ ಸರ್ಕಾರವೇ ರಕ್ಷಣೆ ನೀಡುತ್ತಿದೆ. ಹೀಗಾಗಿ ಬಂಧಿಸಿಲ್ಲ. ಅವರಿಗೆ ಜಾಮೀನು ಸಿಗಲಿ ಎಂದು ಕಾಯುತ್ತಿದ್ದಾರೆ. ಹೀಗೆ ಸರ್ಕಾರ ಭ್ರಷ್ಟಾಚಾರದಲ್ಲಿ ಭಾಗಿಯಾಗಿ, ಭ್ರಷ್ಟರನ್ನು ರಕ್ಷಣೆ ಮಾಡುತ್ತಿದೆ. ಕೋಮು ಸಾಮರಸ್ಯ ಹಾಳು ಮಾಡಿದವರನ್ನು ರಕ್ಷಣೆ ಮಾಡುತ್ತಿದೆ.
ಈಶ್ವರಪ್ಪ ಶಿವಮೊಗ್ಗದಲ್ಲಿ ವ್ಯಕ್ತಿಯ ಹತ್ಯೆಯಾದಾಗ ಸೆಕ್ಷನ್ 144 ಉಲ್ಲಂಘಿಸಿ ಶವಯಾತ್ರೆ ಮಾಡುತ್ತಾರೆ. ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸುವುದಿಲ್ಲ. ಆಳಂದದಲ್ಲಿ ಕೇಂದ್ರ ಸಚಿವ ಕೂಬಾ ಅವರು ಸೆಕ್ಷನ್ 144 ಉಲ್ಲಂಘನೆ ಮಾಡಿದ್ದಾರೆ. ಇವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದರೆ ಮೇಕೆದಾಟು ಪಾದಯಾತ್ರೆ ಮಾಡಿದ ನನ್ನ ಮೇಲೆ ನಾಲ್ಕೈದು, ಶಿವಕುಮಾರ್ ಅವರ ವಿರುದ್ಧ 9 ಕೇಸ್ ದಾಖಲಾಗಿದೆ.
ಇವರು ಭ್ರಷ್ಟಾಚಾರ, ಕಾನೂನು ಉಲ್ಲಂಘನೆ, ಕೋಮುಸಾಮರಸ್ಯ ಹಾಳುಮಾಡುತ್ತಿದ್ದಾರೆ. ಈ ಎಲ್ಲ ವಿಚಾರಗಳನ್ನು ಜನರಿಗೆ ತಿಳಿಸಬೇಕಾಗಿದೆ. ಸರ್ಕಾರದ ವೈಫಲ್ಯತೆಗಳನ್ನು ಜನರ ಮುಂದೆ ಇಡುವ ಕೆಲಸ ಪದಾಧಿಕಾರಿಗಳು ಮಾಡಬೇಕು ಎಂದು ಚರ್ಚೆ ಮಾಡಲಾಗಿದೆ. ಅವರ ಜವಾಬ್ದಾರಿ ಮನವರಿಕೆ ಮಾಡಲಾಗಿದೆ.