ಸಿಡಿಗರ್ಲ್ ಎಂಟ್ರಿಯಿಂದ ರಮೇಶ್ ಜಾರಕಿಹೊಳಿಗೆ ಕಂಟಕ ಎದುರಾಗಲಿದೆಯೇ ?
ಬೆಂಗಳೂರು, ಮಾರ್ಚ್ 28: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಸ್ಫೋಟ ಪ್ರಕರಣ ಇಬ್ಬರು ರಾಜಕೀಯ ನಾಯಕರ ನಡುವಿನ ಕಾಳಗಕ್ಕೆ ನಾಂದಿ ಹಾಡಿದೆ. ಇಡೀ ರಾಜ್ಯದೆಲ್ಲೆಡೆ ಇಬ್ಬರು ನಾಯಕರ ಬೆಂಬಲಿಗರು ಬೀದಿಗೆ ಇಳಿದಿದ್ದಾರೆ. ಇದರ ನಡುವೆ ಸತತ ಐದು ವಿಡಿಯೋ ಬಿಡುಗಡೆ ಮಾಡುವ ಮೂಲಕ ದಿನಕ್ಕೊಂದು ಟ್ವಿಸ್ಟ್ ಕೊಟ್ಟಿದ್ದ ಸಿಡಿಲೇಡಿ ಸೋಮವಾರ "ಸಿಡಿ ರಣರಂಗ"ಕ್ಕೆ ಎಂಟ್ರಿ ಕೊಡುವ ಮುನ್ಸೂಚನೆ ನೀಡಿದ್ದಾಳೆ.
ರಮೇಶ್ ಜಾರಕಿಹೊಳಿ ವಿರುದ್ಧ ಸತತ ವಿಡಿಯೋ ಹೇಳಿಕೆ ಬಿಡುಗಡೆ ಮಾಡುತ್ತಿದ್ದ ಯುವತಿ ಕೈ ಬಹರದ ದೂರನ್ನು ವಕೀಲ ಜಗದೀಶ್ ಮೂಲಕ ಪೊಲೀಸ್ ಆಯುಕ್ತರಿಗೆ ರವಾನಿಸಿದ್ದಳು. ದೂರನ್ನಾಧರಿಸಿ ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಆರೋಪದಡಿ ಎಫ್ಐಆರ್ ದಾಖಲಿಸಲಾಗಿದೆ. ರಮೇಶ್ ಜಾರಕಿಹೊಳಿಯನ್ನು ಬಂಧಿಸಬೇಕು ಎಂದು ಕೂಡ ಆಗ್ರಹಿಸಿದ್ದಳು. ಯುವತಿ ದೂರಿನ ಆಧಾರದ ಮೇಲೆ ಜಾರಕಿಹೊಳಿ ವಿರುದ್ಧ ಎಫ್ಐಆರ್ ಆಗುತ್ತಿದ್ದಂತೆ, ಇದೊಂದು ರಾಜಕೀಯ ಷಡ್ಯಂತ್ರ, ಹನಿ ಟ್ರ್ಯಾಪ್ ಎಂಬ ಸಂಶಯವನ್ನು ಗಟ್ಟಿಗೊಳಿಸುವ ಅಡಿಯೋಗಳು ಬಿಡುಗಡೆಯಾದವು.

ಡಿ.ಕೆ. ಶಿವಕುಮಾರ್ ಅವರು ಹಣ ನೀಡಿದ್ದಾರೆ ಎಂದು ಸಿಡಿಲೇಡಿ ಮಾತನಾಡಿರುವ ಅಡಿಯೋ ಬಿಡುಗಡೆ ಆದವು. ಇದರ ಜತೆಗೆ ಸಿಡಿ ಲೇಡಿಯ ಪೋಷಕರು ಡಿ.ಕೆ. ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದರು. ನನ್ನ ಮಗಳನ್ನು ಇಟ್ಟುಕೊಂಡು ನೀಚ ರಾಜಕಾರಣ ಮಾಡಬೇಡಿ ಎಂದು ತಾಕೀತು ಮಾಡಿದರು. ಇದರ ಬೆನ್ನಲ್ಲೇ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿ ಅವಾಚ್ಯ ಪದಗಳನ್ನು ಬಳಿಸಿದರು.

ಜಾರಕಿಹೊಳಿ ಬಳಸಿದ ಕೆಟ್ಟ ಪದ ಖಂಡಿಸಿ ಡಿ.ಕೆ. ಬೆಂಬಲಿಗ ಕೈ ಕಾರ್ಯಕರ್ತರು ಹೋರಾಟಕ್ಕೆ ಇಳಿದಿದ್ದಾರೆ. ಇದೇ ರೀತಿ ಜಾರಕಿಹೊಳಿ ಬೆಂಬಲಿಗರು ಬೆಂಗಳೂರು ಹಾಗೂ ಗೋಕಾಕ್ನಲ್ಲಿ ಹೋರಾಟ ಆರಂಭಿಸಿದ್ದಾರೆ. ಇಬ್ಬರ ನಾಯಕರ ನಡುವೆ ಪ್ರತಿಷ್ಠೆಯಾಗಿ ಮಾರ್ಪಟ್ಟಿರುವ ಅಶ್ಲೀಲ ಸಿಡಿ ಪ್ರಕರಣ ಸದ್ಯಕ್ಕೆ ತಾರ್ಕಿಕ ಅಂತ್ಯ ಕಾಣಿಸುವ ಲಕ್ಷಣ ಕಾಣಿಸುತ್ತಿಲ್ಲ. ಇದರ ಬೆನ್ನಲ್ಲೇ ಈ ಪ್ರಕರಣದ ಕೇಂದ್ರ ಬಿಂದು ಸಿಡಿಲೇಡಿ. ಆಕೆ ಸೋಮವಾರ ಅಧಿಕೃತವಾಗಿ ರಣರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಸೋಮವಾರ ನ್ಯಾಯಾಧೀಶರ ಮುಂದೆ ಹಾಜರಾಗಿ ತನ್ನ ಹೇಳಿಕೆ ದಾಖಲಿಸಲಿದ್ದಾಳೆ ಎಂಬ ಮುನ್ಸೂಚನೆ ನೀಡಿದ್ದಾಳೆ. ಸಿಡಿಲೇಡಿಯ ದೂರನ್ನು ಪೊಲೀಸ್ ಆಯುಕ್ತರಿಗೆ ಸಲ್ಲಿಸಿ ಎಫ್ಐಆರ್ ದಾಖಲಿಸಲು ಕಾರಣವಾದ ವಕೀಲ ಜಗದೀಶ್ ಕುಮಾರ್ ಈ ಬಗ್ಗೆ ಫೇಸ್ ಬುಕ್ ಜಾಲ ತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಎಸ್ಐಟಿ ಅಧಿಕಾರಿಗಳು ಸರಿಯಾಗಿ ತನಿಖೆ ನಡೆಸುತ್ತಿಲ್ಲ. ರಮೇಶ್ ಜಾರಕಿಹೊಳಿ ವಿರುದ್ಧ ಯುವತಿ ಅತ್ಯಾಚಾರ ಆರೋಪ ಮಾಡಿದ್ದಾಳೆ. ಎಫ್ಐಆರ್ ದಾಖಲಾದರೂ ಬಂಧಿಸಿಲ್ಲ. ಎಸ್ಐಟಿ ತನಿಖಾ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ. ಯುವತಿ ನ್ಯಾಯಾಲಯಕ್ಕೆ ಹಾಜರಾಗಿ ಸ್ವಯಂ ಪ್ರೇರಿತ ಹೇಳಿಕೆ ದಾಖಲಿಸಲಿದ್ದಾಳೆ ಎಂಬ ಸೂಚನೆ ಯುವತಿ ಪರ ವಕೀಲರ ಜಗದೀಶ್ ನೀಡಿದ್ದಾರೆ. ಒಂದು ವೇಳೆ ಆಕೆ ನನ್ನ ಮೇಲೆ ರಮೇಶ್ ಜಾರಕಿಹೊಳಿ ಅತ್ಯಾಚಾರ ಎಸಗಿದ್ದಾರೆ ಎಂದು ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದೇ ಆದಲ್ಲಿ, ಸಿಆರ್ಪಿಸಿ ಸೆಕ್ಷನ್ 164 ಅಡಿ ಯುವತಿ ಹೇಳಿಕೆ ದಾಖಲಿಸಿಕೊಂಡಲ್ಲಿ ಯಾರೂ ಊಹಿಸದ ರೀತಿ ತಿರುವು ಪಡೆಯಬಹುದು.

ಯುವತಿ ಹೇಳಿಕೆ ದಾಖಲಿಸಿಕೊಂಡ ಬಳಿಕ ನ್ಯಾಯಾಲಯ ಸಿಡಿ ಲೇಡಿಯನ್ನು ಎಸ್ಐಟಿ ವಿಚಾರಣೆಗೆ ವಹಿಸಬಹುದು. ನ್ಯಾಯಾಲಯದ ನಿರ್ದೇಶನದ ಮೇರೆಗೆ ಆರೋಪಿತ ರಮೇಶ್ ಜಾರಕಿಹೊಳಿಯನ್ನು ಎಸ್ಐಟಿ ಪೊಲೀಸರು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಸಾಧ್ಯತೆಯಿದೆ. ಒಂದು ವೇಳೆ ಯುವತಿಯ ಹೇಳಿಕೆ ಆಧರಿಸಿ ರಮೇಶ್ ಜಾರಕಿಹೊಳಿ ಬಂಧನಕ್ಕೆ ಒಳಗಾದ ಪಕ್ಷದಲ್ಲಿ ರಾಜ್ಯ ರಾಜಕಾರಣದಲ್ಲೂ ಕೂಡ ಊಹೆ ಮಾಡಲಾಗದ ಬದಲಾವಣೆ ಆದರೂ ಅಚ್ಚರಿ ಪಡಬೇಕಿಲ್ಲ.












Click it and Unblock the Notifications