ರಮೇಶ್ ಜಾರಕಿಹೊಳಿ CD ಮಾಡಿಸಿದ್ದೇ ವಿಜಯೇಂದ್ರ-ಡಿಕೆಶಿ: ಯತ್ನಾಳ್ ಸ್ಫೋಟಕ ಹೇಳಿಕೆ
ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಎಂದಿನಿಂತೆ ಯಡಿಯೂರಪ್ಪ ಕುಟುಂಬದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸದನದಲ್ಲಿ ಇತ್ತೀಚೆಗೆ ಹನಿಟ್ರ್ಯಾಪ್ ಬಿರುಗಾಳಿ ಎಬ್ಬಿಸಿದ್ದ ಯತ್ನಾಳ್ ಅವರು ಉಚ್ಛಾಟನೆ ಬಳಿಕೂ ಹನಿಟ್ರ್ಯಾಪ್ ಬಗ್ಗೆ ಮತ್ತೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಇದರಲ್ಲಿ ಯಾರ ಪಾತ್ರ ಇದೆ ಎಂದು ಹೆಸರುಗಳನ್ನೂ ಅವರು ಬಹಿರಂಗಪಡಿಸಿ, ಆರೋಪ ಮಾಡಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿರುವ ಅವರು ಹಲವು ಸ್ಫೋಟಕ ವಿಚಾರಗಳನ್ನು ತಿಳಿಸಿದ್ದಾರೆ.
ದೆಹಲಿಯಲ್ಲಿರುವ ಬಿಜೆಪಿ ಸಂಸದರು ವಿಜಯೇಂದ್ರನ ವಿರುದ್ಧವೇ ಇದ್ದಾರೆ. ಅವರೇ ವಿಜಯೇಂದ್ರನನ್ನ ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯಬೇಕು ಎನ್ನುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಅವರ ಸಿಡಿ ಹಗರಣವನ್ನು ಮಾಡಿದ್ದೇ ವಿಜಯೇಂದ್ರ ಹಾಗೂ ಡಿಕೆ ಶಿವಕುಮಾರ್ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಈ ಹಿಂದೆ ಡಿಕೆ ಶಿವಕುಮಾರ್ ಜೊತೆ ಸೇರಿಕೊಂಡು ವಿಜಯೇಂದ್ರನೇ ರಮೇಶ್ ಜಾರಕಿಹೊಳಿ ಅವರ ಸಿಡಿಯನ್ನ ಮಾಡಿಸಿದ್ದರು. ಸದ್ಯ ಈಗ ಬಯಲಿಗೆ ಬಂದಿರುವ ಹನಿಟ್ರ್ಯಾಪ್ ಹಗರಣದಲ್ಲೂ ಇದೇ ಟೀಂ ಇದೆ ಎಂದು ಯತ್ನಾಳ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬಿಜೆಪಿಯಿಂದ ಉಚ್ಛಾಟನೆಗೊಂಡ ಬಳಿಕ ನಾನು ಮನೆಯಲ್ಲಿ ಸುಮ್ಮನೆ ಕೂರುವುದಿಲ್ಲ. ಬೀದರ್ನಿಂದ ಚಾಮರಾಜನಗರ, ಕೋಲಾರದಿಂದ ಕೊಡಗಿನವರೆಗೂ ರಾಜ್ಯ ಪ್ರವಾಸ ಮಾಡುತ್ತೇನೆ. ಇವರ ವಿರುದ್ಧ ಎಂದಿಗೂ ಹೋರಾಟ ನಿಲ್ಲಿಸುವುದಿಲ್ಲ. ಹಿಂದೂಗಳ ರಕ್ಷಣೆಗಾಗಿ ರಾಜ್ಯ ಪ್ರವಾಸ ಮಾಡುತ್ತೇನೆ. ಅಪ್ಪ-ಮಕ್ಕಳ ಕುಟುಂಬವನ್ನು ರಾಜಕೀಯದಿಂದ ದೂರ ಮಾಡುತ್ತೇನೆ ಎಂದು ಶಪಥ ಕೂಡ ಮಾಡಿದ್ದಾರೆ.
ವಿಜಯದಶಮಿ ದಿನ ನಿರ್ಧಾರ ಹೇಳುವೆ: ಉಚ್ಛಾಟನೆ ಬಳಿಕ ಬೇರೆ ಪಕ್ಷಕ್ಕೆ ಸೇರ್ತಾರಾ ಎನ್ನುವ ಪ್ರಶ್ನೆಗೂ ಉತ್ತರಿಸಿರುವ ಯತ್ನಾಳ್, ನಾನು ಯಾವತ್ತಿಗೂ ಕಾಂಗ್ರೆಸ್, ಜೆಡಿಎಸ್ ಪಕ್ಷ ಸೇರುವುದಿಲ್ಲ. ಬಿಜೆಪಿಯವರು ನನ್ನನ್ನು ಗೌರವದಿಂದ ಮತ್ತೆ ವಾಪಸ್ ಕರೆದರೆ ನಾನು ಬಿಜೆಪಿಯಲ್ಲಿಯೇ ಇರ್ತೀನಿ. ಇಲ್ಲದಿದ್ರೆ ವಿಜಯದಶಮಿ ದಿನದಂದು ನನ್ನ ನಿರ್ಧಾರ ಏನು ಎಂಬುದನ್ನು ಪ್ರಕಟಿಸುತ್ತೇನೆ ಎಂದು ಯತ್ನಾಳ್ ಎಚ್ಚರಿಕೆ ನೀಡಿದ್ದಾರೆ.

ಜನರೇ ಹೊಸ ಪಕ್ಷ ಕಟ್ಟಲು ನನಗೆ ಸಲಹೆ ಕೊಡ್ತಿದ್ದಾರೆ ಎಂದು ಯತ್ನಾಳ್ ಸುಳಿವು ನೀಡಿದ್ದಾರೆ. ನಾನು ಯಾವ ಕಾರಣಕ್ಕೂ ಮತ್ತೆ ದೆಹಲಿಗೆ ಹೋಗಲ್ಲ, ಉಚ್ಛಾಟನೆ ಮರುಪರಿಶೀಲನೆ ಮಾಡಿ ಅಂತಾ ಮನವಿಯೂ ಮಾಡಲ್ಲ. ನಾನು ಹಿಂದೂಗಳ ಪರವಾಗಿ ಹೋರಾಟ ಮಾಡ್ತೀನಿ, ಇದಕ್ಕಾಗಿ ಇಡೀ ರಾಜ್ಯ ಪ್ರವಾಸ ಮಾಡ್ತೀನಿ. ಹೊಸ ಪಕ್ಷ ಕಟ್ಟುವಂತೆ ಜನರೇ ನನಗೆ ಸಲಹೆ ಕೊಡ್ತಿದ್ದಾರೆ. ಇಲ್ಲಿ ಹಿಂದೂಗಳನ್ನ ರಕ್ಷಣೆ ಮಾಡೋರು ಯಾರೂ ಇಲ್ಲ. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆಯೂ ಧ್ವನಿ ಎತ್ತುವವರಿಲ್ಲ. ನಮ್ಮ ಹಿಂದೆಯೂ ಒಂದು ದೊಡ್ಡ ಶಕ್ತಿ ಇದೆ. ಬಹುತೇಕ ಬಿಜೆಪಿ ಸಂಸದರು ನಮ್ಮ ಪರವಾಗಿಯೇ ಇದ್ದಾರೆ ಎಂದು ಯತ್ನಾಳ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಕ್ಷ ವಿರೋಧಿ ಆರೋಪದ ಮೇರೆಗೆ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟಿಸಲಾಗಿದೆ.












Click it and Unblock the Notifications