ಕೆ.ಆರ್.ಕ್ಷೇತ್ರದ ರಾಮ್-ರಾಜೀವ್ ಗುದ್ದಾಟದಲ್ಲಿ ಲಾಭ ಯಾರಿಗೆ?
ಮೈಸೂರು, ಫೆಬ್ರವರಿ 2: ಮೈಸೂರಿನ ವಿಧಾನಸಭಾ ಕ್ಷೇತ್ರಗಳಲ್ಲೊಂದಾದ ಕೆ.ಆರ್.ಕ್ಷೇತ್ರ ಇತರೆ ರಾಜಕೀಯ ಪಕ್ಷಗಳ ನಾಯಕರ ಜಿದ್ದಾಜಿದ್ದಿಗಿಂತ ಬಿಜೆಪಿ ನಾಯಕರ ನಡುವಿನ ಗುದ್ದಾಟದಿಂದಲೇ ಹೆಚ್ಚು ಪ್ರಚಾರ ಪಡೆದುಕೊಳ್ಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಇಲ್ಲಿ ಒಂದೇ ಸಮುದಾಯದ ನಾಯಕರು ರಾಜಕೀಯ ಮುಂಚೂಣಿಗೆ ಬರಲು ಹವಣಿಸುತ್ತಿದ್ದು, ಇದರಿಂದ ತಮ್ಮೊಳಗೆ ಮುಸುಕಿನ ಗುದ್ದಾಟ ನಡೆಸತೊಡಗಿದ್ದಾರೆ. ಅಷ್ಟೇ ಅಲ್ಲದೆ ಒಬ್ಬರ ಕಾಲೆಳೆದು ಮತ್ತೊಬ್ಬರು ತಮ್ಮ ಸ್ಥಾನ ಗಟ್ಟಿ ಮಾಡಿಕೊಳ್ಳಲು ಮುಂದಾಗುತ್ತಿರುವುದು ಇವತ್ತು ನಿನ್ನೆಯ ಬೆಳವಣಿಗೆಯಲ್ಲ.
ಕೆಆರ್ ಕ್ಷೇತ್ರದಿಂದ ರೂಪಾ ಅಯ್ಯರ್ ಸ್ಪರ್ಧೆ? ಕೆಪಿಜೆಪಿ ಮಾಹಿತಿ ಏನು?
ಹಾಗೆನೋಡಿದರೆ ಕೆ.ಆರ್.ಕ್ಷೇತ್ರ ಬಿಜೆಪಿಯ ಪ್ರಾಬಲ್ಯ ಹೊಂದಿದೆ. ಇಲ್ಲಿರುವ ಹೆಚ್ಚಿನವರು ಬಿಜೆಪಿಯತ್ತ ಒಲವು ಹೊಂದಿದವರಾಗಿದ್ದಾರೆ. ಆದರೆ ಬಿಜೆಪಿ ನಾಯಕರ ನಡುವಿನ ಹಗ್ಗಜಗ್ಗಾಟ ಕಾಂಗ್ರೆಸ್ ಗೆ ಮಣೆ ಹಾಕುವಂತೆ ಮಾಡಿದೆ. 2013ರ ಚುನಾವಣೆಯಲ್ಲಿ ಬಿಜೆಪಿ ನಾಯಕರ ನಡುವಿನ ಶೀತಲ ಸಮರಗಳ ಕಾರಣದಿಂದಾಗಿಯೇ ಬಿಜೆಪಿ ಹಿಡಿತದಿಂದ ಜಾರಿ ಹೋಗಿ ಕಾಂಗ್ರೆಸ್ ತೆಕ್ಕೆಗೆ ಬಿದ್ದಿತ್ತು. ಮುಂದಿನ ಚುನಾವಣೆಯಲ್ಲಿಯೂ ಅದು ಪುನರಾವರ್ತನೆಯಾದರೆ ಅಚ್ಚರಿ ಪಡಬೇಕಾಗಿಲ್ಲ.
ಸಫಲವಾಗದ ರಾಮದಾಸ್ ತಂತ್ರ
2008ರ ಚುನಾವಣೆಯಲ್ಲಿ ಬಿಜೆಪಿ ಶಾಸಕರಾಗಿ ಆಯ್ಕೆಯಾದ ಎಸ್.ಎ.ರಾಮದಾಸ್ ಐದು ವರ್ಷಗಳ ಕಾಲ ಶಾಸಕರಾಗಿ, ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು, ತಮ್ಮ ಕ್ಷೇತ್ರದಲ್ಲಿ ತನ್ನದೇ ಹವಾ ಸೃಷ್ಠಿಸಿದ ಅವರು, ಆಸರೆ ಸಂಸ್ಥೆ ಮೂಲಕ ಎಲ್ಲರ ಮನೆಮನದ ಬಾಗಿಲು ತಟ್ಟಿದ್ದರು. ಮಕ್ಕಳಿಗೆ ಲೇಖನ ಸಾಮಗ್ರಿ ನೀಡುವುದು, ಮನೆಮನೆಗೆ ಡೈರಿ, ಕ್ಯಾಲೆಂಡರ್ ಹಂಚಿಕೆ, ಹುಟ್ಟು ಹಬ್ಬದ ಶುಭಾಶಯ ಕೋರಿಕೆ ಹೀಗೆ ಸುಲಭವಾಗಿ ಸದಾ ಎಲ್ಲರ ನೆನಪುಗಳಲ್ಲಿ ಉಳಿಯುವ ತಂತ್ರ ಅಳವಡಿಸಿಕೊಂಡು ಬಂದಿದ್ದರು.
ಆದರೆ 2013ರ ಚುನಾವಣೆ ಬಂದಾಗ ಎಲ್ಲವೂ ಛಿದ್ರವಾಗಿತ್ತು. ಕಾರಣ ಆ ಸಮಯಕ್ಕೆ ರಾಜ್ಯದಲ್ಲಿ ಬಿಜೆಪಿ ಹೋಳಾಗಿ ಹೋಗಿತ್ತು. ಯಡಿಯೂರಪ್ಪ ಪಕ್ಷಬಿಟ್ಟು ಕೆಜೆಪಿ ಎಂಬ ಹೊಸಪಕ್ಷ ಕಟ್ಟಿದ್ದರು. ಹೀಗಾಗಿ ರಾಮದಾಸ್ಗೆ ಬಿಜೆಪಿಯಿಂದ ಮತ್ತೆ ಟಿಕೆಟ್ ಸಿಕ್ಕಿತಾದರೂ ಚುನಾವಣೆಗೆ ಮುನ್ನವೇ ಸೋಲುತ್ತೇನೆಂಬ ಸೂಚನೆ ಸಿಕ್ಕಿ ಬಿಟ್ಟಿತ್ತು. ಅದಕ್ಕೆ ಕಾರಣ ಅದೇ ಕ್ಷೇತ್ರದ ಅವರದೇ ಸಮುದಾಯದ ಮತ್ತೊಬ್ಬ ನಾಯಕ ಹೆಚ್.ವಿ.ರಾಜೀವ್.
ರಾಮ್ ದಾಸ್ ಹಾಗೂ ರಾಜೀವ್ ನಡುವೆ ಜಿದ್ದಾಜಿದ್ದಿ
ಬಿಜೆಪಿ ಮುಖಂಡರೂ ಬ್ರಾಹ್ಮಣ ಸಮುದಾಯದ ಪ್ರಭಾವಿ ನಾಯಕರೂ ಆಗಿದ್ದ ಕೆ.ಆರ್.ಕ್ಷೇತ್ರದ ಹೆಚ್.ವಿ. ರಾಜೀವ್ ಅವರು ಅವತ್ತು ಬಿಜೆಪಿ ತೊರೆದು ಯಡಿಯೂರಪ್ಪ ಅವರ ಕೆಜೆಪಿ ಸೇರಿದ್ದರು. ಅಷ್ಟೇ ಅಲ್ಲದೆ ಟಿಕೆಟ್ ಪಡೆದು ರಾಮದಾಸ್ ವಿರುದ್ಧ ಸ್ಪರ್ಧೆಗೂ ಇಳಿದು ಬಿಟ್ಟಿದ್ದರು.
ಒಂದೇ ಕ್ಷೇತ್ರದಲ್ಲಿ ಒಂದೇ ಸಮುದಾಯದ ಇಬ್ಬರು ನಾಯಕರು ಅಖಾಡಕ್ಕಿಳಿದು ಒಬ್ಬರ ಮೇಲೆ ಒಬ್ಬರು ಜಿದ್ದಾಜಿದ್ದಿ ಆರಂಭಿಸಿಯೇ ಬಿಟ್ಟರು. ಮೊದಲೇ ರಾಮದಾಸ್ ವಿರುದ್ಧ ಕತ್ತಿ ಮಸೆಯುತ್ತಿದ್ದ ಇನ್ನು ಕೆಲವು ಬಿಜೆಪಿ ನಾಯಕರು ಬಿಜೆಪಿಯಲ್ಲಿದ್ದುಕೊಂಡೇ ಕೆಜೆಪಿಯ ರಾಜೀವ್ಗೆ ಬೆಂಬಲ ನೀಡಿದರು. ಪರಿಣಾಮ ಕ್ಷೇತ್ರದ ಸಾಂಪ್ರದಾಯಿಕ ಮತ ಹಂಚಿ ಹೋಯಿತು ಇದರಿಂದ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಎಂ.ಕೆ.ಸೋಮಶೇಖರ್ ಗೆಲುವು ಸಾಧಿಸಿದ್ದರು.
ರಾಮ್ ದಾಸ ಮತ್ತು ರಾಜೀವ್ ನಡುವಿನ ಸಂಬಂಧ ಸುಧಾರಿಸಿಲ್ಲ
ಇದಾದ ಬಳಿಕ ಯಡಿಯೂರಪ್ಪ ಮರಳಿ ಬಿಜೆಪಿಗೆ ಬಂದಿದ್ದು, ಅವರೊಂದಿಗೆ ಹೆಚ್.ವಿ.ರಾಜೀವ್ ಮರಳಿದ್ದಾರೆ. ಆದರೆ ಕ್ಷೇತ್ರದಲ್ಲಿ ರಾಮದಾಸ್ ಮತ್ತು ರಾಜೀವ್ ನಡುವಿನ ಸಂಬಂಧ ಮಾತ್ರ ಇನ್ನೂ ಸುಧಾರಿಸಿಲ್ಲ. ಇಲ್ಲಿ ಇಬ್ಬರೂ ಒಂದೇ ಪಕ್ಷದಲ್ಲಿದ್ದುಕೊಂಡು ಗುದ್ದಾಟ ನಡೆಸುತ್ತಿದ್ದಾರೆ. ಒಟ್ಟಾಗಿ ಹೋಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಇಬ್ಬರೂ ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ತಮ್ಮದೇ ತಂತ್ರಗಳನ್ನು ಅಳವಡಿಸಿಕೊಂಡು ಕ್ಷೇತ್ರದಲ್ಲಿ ಭದ್ರವಾಗಿ ನೆಲೆಯೂರಲು ಪ್ರಯತ್ನಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಬಿಎಸ್ ಯಡಿಯೂರಪ್ಪ ಬೆಂಬಲವಿದೆ
ಕೆಲವೊಂದು ಘಟನೆಗಳು ರಾಮದಾಸ್ ಅವರ ವರ್ಚಸ್ಸನ್ನು ಕುಗ್ಗಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಇದು ಕ್ಷೇತ್ರದಲ್ಲಿ ರಾಜೀವ್ ಫ್ಲಸ್ ಪಾಯಿಂಟ್. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್.ಕ್ಷೇತ್ರದಿಂದ ಹಲವರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದು, ಅವರ ಪೈಕಿ ರಾಜೀವ್ ಮತ್ತು ರಾಮದಾಸ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಈ ಬಾರಿ ರಾಮದಾಸ್ ಅವರಿಗೆ ಟಿಕೆಟ್ ಸಿಗುವುದು ಕಷ್ಟ ಸಾಧ್ಯವಾಗಿದೆ. ರಾಜೀವ್ ಅವರು ಯಡಿಯೂರಪ್ಪ ಅವರಿಗೆ ಆಪ್ತರಾಗಿರುವುದಲ್ಲದೆ, ಹಲವು ಕೆಲಸ ಕಾರ್ಯಗಳ ಮೂಲಕ ಮತ್ತು ತನ್ನದೇ ವರ್ಚಸ್ಸನ್ನು ಉಳಿಸಿಕೊಂಡಿರುವುದರಿಂದ ಅವರಿಗೆ ಟಿಕೆಟ್ ಸಿಗುವ ಎಲ್ಲ ಸಾಧ್ಯತೆಗಳಿವೆ.
ಜೆಡಿಎಸ್ ಪಕ್ಷಕ್ಕೆ ಕಾಲಿಡುತ್ತಾರಾ?
ಪಕ್ಷದೊಳಗಿನ ಬೆಳವಣಿಗೆ, ತಮ್ಮದೇ ಪಕ್ಷದಲ್ಲಿರುವ ಹಿತಶತ್ರುಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುವ ರಾಮದಾಸ್ ಅವರಿಗೆ ಬಿಜೆಪಿಯಲ್ಲಿ ಉಳಿಗಾಲವಿಲ್ಲ ಎಂಬುದು ಮನದಟ್ಟಾಗಿದೆ. ಹೀಗಾಗಿಯೇ ಅವರು ಜೆಡಿಎಸ್ ನ ಬಾಗಿಲು ತಟ್ಟಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಜೆಡಿಎಸ್ಗೆ ಸೇರ್ಪಡೆಯಾಗಿ ಸ್ಪರ್ಧಿಸಿದರೂ ಅದರ ಲಾಭ ಕಾಂಗ್ರೆಸ್ಗೆ ಎಂಬುದರಲ್ಲಿ ಎರಡು ಮಾತಿಲ್ಲ.