ರಾಮನಗರ : ಹಸುಗಳ ಸಾವು, ಜನರಿಗೆ ಸಂಕಷ್ಟ
ರಾಮನಗರ, ಅ.4 : ರಾಮನಗರ ಜಿಲ್ಲೆಯಲ್ಲಿ ಹಸುಗಳಿಗೆ ಕಾಲುಬಾಯಿ ಜ್ವರ ಕಾಣಿಸಿಕೊಂಡಿದ್ದು ಸುಮಾರು 600 ಹಸುಗಳು ಈಗಾಗಲೇ ಸಾವನ್ನಪ್ಪಿವೆ. ಇದರಿಂದಾಗಿ ಹೈನುಗಾರಿಕೆಯಲ್ಲಿ ತೊಡಗಿರುವ ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದೆ.
ರಾಮನಗರ ಪಶುಲನಾ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿ ಇದುವರೆಗೂ ಸುಮಾರು 600 ಜಾನುವಾರುಗಳು ಕಾಲುಬಾಯಿ ಜ್ವರದಿಂದ ಸಾವನ್ನಪ್ಪಿವೆ ಎಂದು ಮಾಹಿತಿ ನೀಡಿದ್ದಾರೆ. ಅದರಲ್ಲೂ ಚನ್ನಪಟ್ಟಣ ತಾಲೂಕಿನಲ್ಲಿ 250ಕ್ಕೂ ಹೆಚ್ಚು ಹಸುಗಳು ಮೃತಪಟ್ಟಿವೆ.

ಜಿಲ್ಲೆಯ ಒಟ್ಟು 825 ಹಳ್ಳಿಗಳಲ್ಲಿ 208 ಗ್ರಾಮಗಳ ಸುಮಾರು 4000 ಜಾನುವಾರುಗಳಿಗೆ ಕಾಲುಬಾಯಿ ಜ್ವರ ಕಂಡುಬಂದಿದೆ. ಜಿಲ್ಲೆಯ ಸುಮಾರು ಮೂರು ಲಕ್ಷ ಜಾನುವಾರುಗಳಲ್ಲಿ ಒಂದೂವರೆ ಲಕ್ಷ ಜಾನುವಾರುಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆ ಹಾಕಲಾಗಿದೆ.
ಪಶುಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆ ಮತ್ತು ಬೆಂಗಳೂರು ಹಾಲು ಒಕ್ಕೂಟ ನೀಡಿರುವ ಮಾಹಿತಿಯಂತೆ ಒಂದೂವರೆ ಲಕ್ಷ ಹಸುಗಳಿಗೆ ಕಾಲುಬಾಯಿ ಜ್ವರ ಹಬ್ಬದಂತೆ ಲಸಿಕೆ ಹಾಕಲಾಗಿದೆ. ಜ್ವರದಿಂದಾಗಿ ಹಸುಗಳಲ್ಲಿ ಪಾಲಿನ ಉತ್ಪಾದನೆ ಪ್ರಮಾಣವೂ ಕಡಿಮೆಯಾಗುತ್ತಿದ್ದು, ಜನರನ್ನು ಆತಂಕಗೊಳಿಸಿದೆ.
ಉತ್ತಮ ಮಳೆಯಾಗದೆ ಬೆಳೆ ಬೆಳೆಯಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ರೈತರು ಹೈನುಗಾರಿಕೆ ಪ್ರಾರಂಭಿಸಿದ್ದರು. ಸಹಕಾರ ಸಂಘಗಳಿಗೆ ಹಾಲು ನೀಡುವ ಮೂಲಕ ಜೀವನ ಸಾಗಿಸುತ್ತಿದ್ದರು. ಸದ್ಯ ಕಾಲುಬಾಯಿ ಜ್ವರ ರೈತರ ಆದಾಯಕ್ಕೆ ಅಡ್ಡಗಾಲು ಹಾಕಿದ್ದು, ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಚನ್ನಪಟ್ಟಣ ತಾಲೂಕಿನಲ್ಲೇ ರೋಗದ ಪ್ರಮಾಣ ಹೆಚ್ಚಿದೆ. ತಾಲೂಕಿನ ಜೆ.ಬ್ಯಾಡರಹಳ್ಳಿಯ 30, ಚಕ್ಕೆರೆಯ 20, ತಿಮ್ಮಸಂದ್ರದ 5, ಸುಣ್ಣಘಟದ 10, ಬಿ.ವಿ.ಹಳ್ಳಿಯ 20, ಚಕ್ಕಲೂರು 12 ಹೀಗೆ ಹಲವು ಗ್ರಾಮಗಳಲ್ಲಿ 100ಕ್ಕೂ ಹೆಚ್ಚು ಸೀಮೆ ಹಸುಗಳು ಈ ಕಾಲುಬಾಯಿರೋಗದಿಂದ ಮೃತಪಟ್ಟಿವೆ.
ವಿಮೆ ಬಂದ್ : ರೈತರು ಸಹಕಾರ ಸಂಘ, ಬ್ಯಾಂಕ್ಗಳಿಂದ 50 ಸಾವಿರಕ್ಕೂ ಹೆಚ್ಚು ಸಾಲ ಮಾಡಿ ಹಸುಗಳನ್ನು ಖರೀದಿ ಮಾಡುತ್ತಿದ್ದರು. ಆದರೆ, ರಾಸುಗಳ ಸಾವಿನಿಂದಾಗಿ ಜಿಲ್ಲೆಯ ರಾಸುಗಳಿಗೆ ನೀಡುತ್ತಿದ್ದ ವಿಮೆಯನ್ನು ಸ್ಥಗಿತಗೊಳಿಸಲಾಗಿದೆ. ಆದ್ದರಿಂದ ಹಸುಗಳು ಮೃತಪಟ್ಟರೆ ರೈತರಿಗೆ ವಿಮೆ ಹಣವೂ ದೊರಕದಂತಾಗಿದೆ.
ದೇವರ ಮೊರೆ : ಕಾಲುಬಾಯಿ ಜ್ವರದಿಂದ ಹಸುಗಳನ್ನು ರಕ್ಷಿಸುವಂತೆ ಕೋರಿ ಜನರು ದೇವರ ಮೊರೆ ಹೋಗಿದ್ದಾರೆ. ತಾಲೂಕಿನ ಸುಳ್ಳೇರಿ ಹಾಗೂ ಚಕ್ಕರೆ ಗ್ರಾಮಗಳಲ್ಲಿ ರೈತರು ಬೇವಿನ ಮರಕ್ಕೆ ಮೊಸರು, ಹಾಲು ಅನ್ನ ನೈವೇದ್ಯ ಮಾಡಿ ಹಸುಗಳನ್ನು ಉಳಿಸುವಂತೆ ಮನವಿ ಮಾಡುತ್ತಿದ್ದಾರೆ












Click it and Unblock the Notifications