Shakti Scheme Spark: ಬಿಜೆಪಿ ಅಧೋಗತಿಗೆ ತಳ್ಳಿದ್ದ ಸಾರಿಗೆ ನಿಗಮಗಳಿಗೆ 'ಶಕ್ತಿ ಯೋಜನೆ' ಶಕ್ತಿ ತುಂಬಿದೆ
ಬೆಂಗಳೂರು, ನವೆಂಬರ್ 02: ಶಕ್ತಿ ಯೋಜನೆ ಮರು ಪರಿಶೀಲಿಸಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳುತ್ತಿದ್ದಂತೆ ರಾಜ್ಯಾದ್ಯಂತೆ ಶಕ್ತಿ ಯೋಜನೆ ಕಿಡಿ ಹೊತ್ತಿಕೊಂಡಿದೆ. ಆರೋಪ, ಪ್ರತ್ಯಾರೋಪಗಳ ಮಧ್ಯೆ ಸವಾಲೆಸೆಯುವುದು, ಬಹಿರಂಗ ಚರ್ಚೆಗೆ ಆಹ್ವಾನ ನಡೆದಿದೆ. ಈ ಮಧ್ಯೆ ಶಕ್ತಿ ಯೋಜನೆಗಳ ಬಗ್ಗೆ ಮಾತನಾಡಿದ್ದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರಿಗೆ ರಾಮಲಿಂಗಾ ರೆಡ್ಡಿ ತಿರುಗೇಟು ನೀಡಿದ್ದಾರೆ.
ಟ್ವೀಟ್ ಮೂಲಕ ಕಿರಿ ಕಾರಿರುವ ಸಚಿವ ರಾಮಲಿಂಗಾ ರೆಡ್ಡಿ ಅವರು, ಆರ್.ಅಶೋಕ್ ಅವರೆ ತಮಗೆ ಹಾಗೂ ತಮ್ಮ ಪಕ್ಷದವರಿಗೆ ಟ್ಟೀಟ್ ಮಾಡುವುದನ್ನು ಬಿಟ್ಟರೆ ಬೇರೇನೂ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.

ಶಕ್ತಿ ಯೋಜನೆಯು ಅಕ್ಷರಶಃ ಸಾರಿಗೆ ನಿಗಮಗಳಿಗೆ ಶಕ್ತಿಯನ್ನು ತುಂಬಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಈಗಾಗಲೇ ಅಂಕಿಅಂಶಗಳು ಇದನ್ನು ಸಾಬೀತುಪಡಿಸುತ್ತವೆ. ಬಿಜೆಪಿಯವರಂತೆ ನಾವು ಗಾಳಿಯಲ್ಲಿ ಗುಂಡು ಹಾರಿಸುವುದಿಲ್ಲ. ಕಾಂಗ್ರೆಸ್ ಅಭಿವೃದ್ಧಿಗೆ ಸಾಧನೆಗೆ ಅಂಕಿಅಂಶಗಳು ಇವೆ ಎಂದು ವಿವರಿಸಿದ್ದರೆ.
ಬಿಜೆಪಿ ಅಧಿಕಾರಾವಧಿಯಲ್ಲಿಯೇ ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳನ್ನು ಅಧೋಗತಿ ತಲುಪಿವೆ. ಈ ಕಟು ಸತ್ಯ ನಿಮಗೆ ತಿಳಿದಿದ್ದರೂ ಸಹ ಜಾಣ ಕುರುಡು ತೋರುವ ನಿಮ್ಮ ಬಗ್ಗೆ ನನಗೆ ಕನಿಕರವಿದೆ. ಸಾರಿಗೆ ಸಂಸ್ಥೆಗಳಲ್ಲಿ ಕಳೆದ 5 ವರ್ಷದ ತಮ್ಮ ಅಧಿಕಾರಾವಧಿಯಲ್ಲಿ ಯಾವ ಯಾವ ಸಾಧನೆಗಳನ್ನು ಮಾಡಿದ್ದೀರಾ? ಬೇಕಿದ್ದರೆ ಹೇಳಿ ಆ ಬಗ್ಗೆ ಚರ್ಚೆಗೆ ನಾವು ಸಿದ್ಧ ಎಂದು ಅವರು ಸವಾಲೆಸಿದ್ದಾರೆ.
ವಿರೋಧ ಪಕ್ಷದ ನಾಯಕರಾದ @RAshokaBJP ಅವರೇ,
— Ramalinga Reddy (@RLR_BTM) November 2, 2024
ತಮಗೆ ಹಾಗೂ ತಮ್ಮ ಪಕ್ಷದವರಿಗೆ ಟ್ಟೀಟ್ ಮಾಡುವುದನ್ನು ಬಿಟ್ಟರೆ ಬೇರೇನೂ ಗೊತ್ತಿಲ್ಲ ಎಂಬುದನ್ನು ಜಗಜಾಹ್ಹೀರು ಮಾಡಿದ್ದೀರಿ.
ಶಕ್ತಿ ಯೋಜನೆಯು ಅಕ್ಷರಶಃ ಸಾರಿಗೆ ನಿಗಮಗಳಿಗೆ ಶಕ್ತಿಯನ್ನು ತುಂಬಿದೆ ಎಂಬುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ ಏಕೆಂದರೆ ಅಂಕಿಅಂಶಗಳು ಇದನ್ನು ಸಾಬೀತುಪಡಿಸುತ್ತವೆ. ನಾವು… https://t.co/CLBXOLXFwm
ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳ ಆದಾಯದಲ್ಲಿ ಗಣನೀಯ ವೃದ್ಧಿಯಾದರೂ ಸಾರಿಗೆ ಸಂಸ್ಥೆಗಳಿಗೆ ಶಕ್ತಿ ತುಂಬಲು ಸಾಧ್ಯವಾಗಿಲ್ಲದಿರುವುದು ತಮ್ಮ ಸರ್ಕಾರದ ಕೊಡುಗೆ ಎಂದರು.
ಸಾರಿಗೆ ಇಲಾಖೆ ಆದಾಯ ಏರಿಕೆ: ಸಚಿವ
ಶಕ್ತಿ ಯೋಜನೆಯಿಂದ ದಿನನಿತ್ಯ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ 84 ಲಕ್ಷದಿಂದ 1.08 ಕೋಟಿಗೆ ಏರಿಕೆ ಆಗಿದೆ. ಆದಾಯದಲ್ಲಿ ಗಣನೀಯ ವೃದ್ಧಿ ಆಗಿದೆ. ನಾನು ಈಗಾಗಲೇ ಹಲವು ಬಾರಿ ತಿಳಿಸಿದ್ದೇನೆ. ಆದಾಯವೇ ಬೇರೆ ಲಾಭವೇ ಬೇರೆ ಎಂಬುದು ನೆನಪಿರಲಿ.ಬಿಜೆಪಿ ಅಧಿಕಾರದಲ್ಲಿದ್ದಾಗ ಐದು ವರ್ಷದಲ್ಲಿ ಬಿಎಸ್ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದ ವೇಳೆ ಸಾರಿಗೆ ಸಂಸ್ಥೆಗಳನ್ನು ರೂ.5900 ಕೋಟಿ ನಷ್ಟದಲ್ಲಿದ್ದವು.
ಕಳೆದ 5 ವರ್ಷಗಳಲ್ಲಿ ಬಿ.ಎಂ.ಟಿ ಸಿ ಹೊರತುಪಡಿಸಿ ಬೇರೆ ಯಾವುದೇ ಸಾರಿಗೆ ನಿಗಮಗಳಿಗೆ ಬಸ್ಗಳ ಸೇರ್ಪಡೆಯೇ ಮಾಡದೆ, ಡಕೋಟ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲು ಬಿಟ್ಟು ಹೋಗಿದ್ದೀರಾ ಎಂದು ಕಾಲೆಳೆದರು.
ಸಾರಿಗೆ ಇಲಾಖೆಯಲ್ಲಿ ಮಹತ್ವದ ಸಾಧನೆ: ಸಚಿವ
ರಾಜ್ಯ ಕಾಂಗ್ರೆಸ್ ಸರ್ಕಾರ 6200 ಬಸ್ಸುಗಳ ಸೇರ್ಪಡೆಗೆ ಅನುಮೋದನೆ ನೀಡಿದೆ. ಕಳೆದೊಂದು ವರ್ಷದಲ್ಲಿಯೇ 3400 ಹೊಸ ಬಸ್ಸುಗಳನ್ನು ಖರೀದಿಸಿ ನಿಗಮಗಳಿಗೆ ಸೇರಿಸಿ ರಸ್ತೆಗೆ ಇಳಿಸಿದ್ದೇವೆ. ಡಕೋಟಾ ಬಸ್ಸುಗಳನ್ನು ಪುನಶ್ಚೇತನ ಮಾಡುವ ಕಾರ್ಯವನ್ನು ಸಹ ಕೈಗೆತ್ತಿಕೊಂಡು 1300 ಬಸ್ಸುಗಳ ಪುನಶ್ಚೇತನ ಕಾರ್ಯ ಮಾಡಿದ್ದೇವೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಕಳೆದ 5 ವರ್ಷಗಳಲ್ಲಿ ಸಾರಿಗೆ ಸಂಸ್ಥೆಗಳಲ್ಲಿ 13888 ಹುದ್ದೆಗಳು ಖಾಲಿ ಇದ್ದವು. ನೀವು ಒಂದೇ ಒಂದು ನೇಮಕಾತಿ ಮಾಡಿಲ್ಲ. ಕಾಂಗ್ರೆಸ್ ಬಂದಾಗಿನಿಂದ 9000 ಹುದ್ದೆಗಳ ನೇಮಕಾತಿಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ 5800 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಗಳು ನಡೆಸಲಾಗುತ್ತಿದೆ, ಪ್ರಗತಿಯಲ್ಲಿದೆ ಎಂದು ಸರ್ಕಾರದ ಸಾಧನೆ ವಿವರಿಸಿದರು.
ಸಕಾಲಕ್ಕೆ ಸಾರಿಗೆ ನೌಕರರ ವೇತನ ಪಾವತಿ
ಬಿಜೆಪಿ ಅಧಿಕಾರದಲ್ಲಿದ್ದಾಗ ಸರ್ಕಾರದ ಅವಧಿಯಲ್ಲಿ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಿಗೆ ತಿಂಗಳ ವೇತನ ಪೂರ್ಣ ಪಾವತಿಯಾಗದೆ , ಅರ್ಧ ವೇತನ ,ಕೆಲವೊಮ್ಮೆ ಆ ವೇತನವೂ ತಿಂಗಳ ಕೊನೆಯವರೆಗೂ, ಒಮ್ಮೊಮ್ಮೆ ಮುಂದಿನ ತಿಂಗಳವರೆಗೂ ಪಾವತಿಯಾಗುತ್ತಿತ್ತು ಈ ಬಗ್ಗೆ ತಮಗೆ ಮಾಹಿತಿ ಇಲ್ಲವೇ?, ನಮ್ಮ ಸರ್ಕಾರ ಬಂದ ಮೇಲೆ ನಿಗದಿತ ದಿನಾಂಕದಂದು ನೌಕರರಿಗೆ ವೇತನ ಪಾವತಿಯಾಗುತ್ತಿದೆ ಎಂದು ತಿಳಿಸಿದರು.
ಸಾರಿಗೆ ಇಲಾಖೆಯಿಂದ ಕಾರ್ಮಿಕ ಕಲ್ಯಾಣ ಕಾರ್ಯಕ್ರಮಗಳು ಅನುಷ್ಠಾನಗೊಂಡಿವೆ. ಏಳೆಂಟು ವರ್ಷಗಳಿಂದ ಬಾಕಿ ಉಳಿದಿದ್ದ 1000 ಕ್ಕೂ ಅಧಿಕ ಮೃತ ಅವಲಂಬಿತ ಕುಟುಂಬಗಳಿಗೆ ಅನುಕಂಪ ಆಧಾರದಲ್ಲಿ ಹುದ್ದೆ ನೀಡಲಾಗಿದೆ. 5 ವರ್ಷದಲ್ಲಿ ಬಿಜೆಪಿ ನಿಲ್ಲಿಸಿದ್ದ ಪ್ರಕ್ರಿಯೆ ಮುಂದುವರೆಸಿದ್ದೇವೆ.
ರೂ.5900 ಕೋಟಿ ನಷ್ಟದಿಂದ ಹೊಣೆಗಾರಿಕೆ ಬಾಕಿಗಳಾದ ಡೀಸೆಲ್ ಹಣ, ಸಿಬ್ಬಂದಿಗಳ ಭವಿಷ್ಯ ನಿಧಿ, ಖರೀದಿ ಸಾಮಾಗ್ರಿಗಳ ಹಣ ಸೇರಿ ಎಲ್ಲಾ ಬಾಕಿ ಗಳನ್ನು ತೀರಿಸುವ ಹೊಣೆಗಾರಿಕೆ ಹೊತ್ತುಕೊಂಡು ನಾವು ಸಂಸ್ಥೆಗಳನ್ನು ಮುನ್ನಡೆಸಬೇಕಾಗಿದೆ ಎಂದರು.
ನಾವು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿಲ್ಲ: ಸ್ಪಷ್ಟನೆ
ನಾನಾಗಲಿ, ಯಾರೆ ಆಗಲಿ ಯಾವ ವೇದಿಕೆಯಲ್ಲಾಗಲೀ/ ಮಾಧ್ಯಮಕ್ಕಾಗಲೀ ಶಕ್ತಿ ಯೋಜನೆ ನಡೆಸಲು ಸಾರಿಗೆ ಸಂಸ್ಥೆಗಳು ಕಷ್ಟಪಡುತ್ತಿವೆ ಎಂಬ ಹೇಳಿಕೆ ಕೊಟ್ಟಿಲ್ಲ. ಸುದ್ದಿ ಮಾಧ್ಯಮಗಳು ಈ ಬಗ್ಗೆ ಪ್ರಕಟಿಸುವ ಮೊದಲು ನಿಖರ ಮಾಹಿತಿ ಪಡೆದು ಪ್ರಟಿಸುವಂತೆ ತಿಳಿಸಿದ್ದೇವೆ.
ಬಿಜೆಪಿಗೆ ಜನರ ದಾರಿ ತಪ್ಪಿಸಲು ದಿನಕ್ಕೊಂದು ವಿಷಯ ಬೇಕು. ಈ ಖಯಾಲಿ ಬಹಳ ಹಾನಿಕಾರಕವಾದದ್ದು ಸಾಧ್ಯವಾದರೆ ಇದನ್ನು ಸಮಾಜದ ಹಿತದೃಷ್ಟಿಯಿಂದ ಬದಲಿಸಿಕೊಳ್ಳಲು ಪ್ರಯತ್ನಿಸಿ. ಶಕ್ತಿ ಯೋಜನೆ ಮಹಿಳಾ ಸಬಲೀಕರಣದ ಯೋಜನೆ ಅದನ್ನು ಗೌರವಿಸುವ ಕೆಲಸ ಮಾಡಿ, ಇನ್ನಾದರೂ ಈ ಯೋಜನೆ ನಿರಾತಂಕವಾಗಿ ನಡೆಯಲು ಅವಕಾಶ ಮಾಡಿಕೊಟ್ಟು , ಮಹಿಳೆಯರಿಗೆ ತಲುಪುತ್ತಿರುವ ಈ ಯಶಸ್ವಿ ಯೋಜನೆಯಲ್ಲಿ ತಮ್ಮದೊಂದು ಅಳಿಲು ಸೇವೆ ಇರುವಂತಾಗಲಿ ಎಂದು ಕಿವಿ ಮಾತು ಹೇಳಿದರು.












Click it and Unblock the Notifications