ಕಟುಕರ ಪಾಲಾಗಲಿದ್ದ ಸಾವಿರ ಹಸುಗಳಿಗೆ 'ಅಭಯ' ನೀಡಿದ ರಾಮಚಂದ್ರಾಪುರ ಮಠ
ತಮಿಳುನಾಡಿನ ಆಡಿ ಜಾತ್ರೆಯಲ್ಲಿ ಬಡ ರೈತರ ಹಸುಗಳು ಕಟುಕರ ಪಾಲಾಗುವುದನ್ನು ತಪ್ಪಿಸಲು ಹನೂರು ತಾಲೂಕು ಕೆಂಪಯ್ಯನಹಟ್ಟಿಯಲ್ಲಿ ರಾಮಚಂದ್ರಾಪುರ ಮಠ ಹಮ್ಮಿಕೊಂಡಿದ್ದ ಅಭಯ ಜಾತ್ರೆಯಲ್ಲಿ 1019 ಹಸುಗಳಿಗೆ ಅಭಯ.
ಬೆಂಗಳೂರು, ಆ 14: : ಆಡಿ ಜಾತ್ರೆ ಎಂದೇ ಜನಪ್ರಿಯವಾಗಿರುವ ತಮಿಳುನಾಡಿನ ಅಂದಿಯೂರು ಜಾನುವಾರು ಜಾತ್ರೆಯಲ್ಲಿ ಬಡ ರೈತರ ಹಸುಗಳು ಕಟುಕರ ಪಾಲಾಗುವುದನ್ನು ತಪ್ಪಿಸಲು ಹನೂರು ತಾಲೂಕು ಕೆಂಪಯ್ಯನಹಟ್ಟಿಯಲ್ಲಿ ರಾಮಚಂದ್ರಾಪುರ ಮಠ ಹಮ್ಮಿಕೊಂಡಿದ್ದ ಅಭಯ ಜಾತ್ರೆಯಲ್ಲಿ 1019 ಹಸುಗಳಿಗೆ ಅಭಯ ನೀಡಲಾಗಿದೆ.
ಅಭಯಜಾತ್ರೆ ಹಾಗೂ ಅಭಯಜಾತ್ರೆಗೆ ಮುನ್ನ ಶ್ರೀಮಠ ಬೆಟ್ಟದ ತಪ್ಪಲಿನ ಮನೆಮನೆಗೆ ತೆರಳಿ ಜಾಗೃತಿ ಮೂಡಿಸಿದ ಪರಿಣಾಮವಾಗಿ ಅಮೂಲ್ಯ ಸಂಪತ್ತನ್ನು ಮಾರಾಟ ಮಾಡದೇ ಗೋಸಾಕಾಣಿಕೆ ಮುಂದುವರಿಸಲು ಈ ಭಾಗದ ರೈತರು ನಿರ್ಧರಿಸಿರುವುದು ಗಮನಾರ್ಹ ಸಾಧನೆ ಎಂದು ಮಠದ ಕಾಮದುಘ ಯೋಜನೆಯ ಕಾರ್ಯದರ್ಶಿ ಡಾ.ವೈ.ವಿ.ಕೃಷ್ಣಮೂರ್ತಿ ಹೇಳಿದ್ದಾರೆ.
ಕಟುಕರ ಪಾಲಾಗುವ ಗೋವುಗಳಿಗೆ ರಕ್ಷೆ, ಆ 11ರಿಂದ ಅಭಯ ಜಾತ್ರೆ
ಅಂದಿಯೂರು ಜಾನುವಾರು ಜಾತ್ರೆಯಲ್ಲಿ ಪ್ರತಿ ವರ್ಷ ಬರಗೂರು ತಳಿಯ 15 ಸಾವಿರಕ್ಕೂ ಹೆಚ್ಚು ಹಸುಗಳು ಮಾರಾಟವಾಗುತ್ತಿದ್ದವು. ಈ ಪೈಕಿ ಬಹುಪಾಲು ಕಟುಕರ ಪಾಲಾಗುತ್ತಿತ್ತು. ಆದರೆ ಈ ಬಾರಿ ಕರ್ನಾಟಕದಿಂದ ಒಂದು ಗೋವೂ ಆಡಿ ಜಾತ್ರೆಗೆ ಹೋಗದಂತೆ ಮಠ ಮತ್ತು ಗ್ಯಾನ್ ಫೌಂಡೇಷನ್ ರೈತರ ಮನವೊಲಿಸಿರುವ ಹಿನ್ನೆಲೆಯಲ್ಲಿ ತಮಿಳುನಾಡು ಭಾಗದಿಂದ ಸುಮಾರು ಆರು ಸಾವಿರ ಹಸುಗಳು ಮಾತ್ರ ಅಂದಿಯೂರು ಜಾತ್ರೆಗೆ ಬಂದಿದ್ದವು.
ರಾಮಚಂದ್ರಾಪುರ ಮಠ ಕೆಂಪಯ್ಯನ ಹಟ್ಟಿಯಲ್ಲಿ ಹಮ್ಮಿಕೊಂಡಿದ್ದ ಅಭಯ ಜಾತ್ರೆಗೆ 1019 ಹಸುಗಳಷ್ಟೇ ಬಂದಿದ್ದರೂ, ಉಳಿದ ರೈತರು ತಮ್ಮ ಹಸುಗಳನ್ನು ಮಾರಾಟ ಮಾಡದೇ ಗೋಪಾಲನೆ ಮುಂದುವರಿಸಲು ನಿರ್ಧರಿಸಿದ್ದಾರೆ.
ಸಂಕಷ್ಟದ ಸಂದರ್ಭದಲ್ಲಿ 3500 ಟನ್ಗೂ ಅಧಿಕ ಮೇವನ್ನು ಮಠ ಪೂರೈಸಿದ ಹಿನ್ನೆಲೆಯಲ್ಲಿ ರೈತರಲ್ಲಿ ಆತ್ಮಸ್ಥೈರ್ಯ ಹೆಚ್ಚಿದ್ದು, ಗೋವುಗಳನ್ನು ಮಾರಾಟ ಮಾಡದಿರಲು ನಿರ್ಧಸಿರುವುದು ಧನಾತ್ಮಕ ಬೆಳವಣಿಗೆಯಾಗಿದೆ ಎಂದು ಕೃಷ್ಣಮೂರ್ತಿ ಹೇಳಿದ್ದಾರೆ.
ಗಮನಿಸಬೇಕಾದ ಅಂಶವೇನಂದರೆ, ಹನೂರು ತಾಲೂಕು ಪಚ್ಚೆದೊಡ್ಡಿ ಎಂಬ ಹಳ್ಳಿಯಲ್ಲಿ ಸುಮಾರು 50 ಮನೆಗಳಿದ್ದು, 800ಕ್ಕೂ ಹೆಚ್ಚು ಹಸುಗಳಿವೆ. ಆದರೆ ಇಡೀ ಗ್ರಾಮದಿಂದ ಕೇವಲ ಆರು ಹಸುಗಳನ್ನಷ್ಟೇ ರೈತರು ಮಾರಾಟ ಮಾಡಿದ್ದಾರೆ.
ಅದು ಕೂಡಾ ತಳಿ ಬದಲಿಸುವ ಸಲುವಾಗಿ. ಹಳ್ಳಿಕಾರ್ ತಳಿಯ ಆರು ಹಸುಗಳನ್ನು ನೀಡಿ, ಬರಗೂರು ತಳಿಯ ಏಳು ಹಸುಗಳನ್ನು ಖರೀದಿಸಿದ್ದಾರೆ. ಉಳಿದಂತೆ ಗ್ರಾಮದ ಯಾರೂ ಹಸುಗಳ ಮಾರಾಟಕ್ಕೆ ಮುಂದಾಗಿಲ್ಲ. ಹಲವು ಹಳ್ಳಿಗಳಲ್ಲಿ ಈ ಬದಲಾವಣೆ ಕಂಡುಬಂದಿದೆ.
ರಾಘವೇಶ್ವರ ಶ್ರೀಗಳ ತೇಜೋವಧೆ ಮಾಡದಂತೆ ಕೋರ್ಟ್ ಆದೇಶ
ನೀರಿನ ಸೌಕರ್ಯವಿಲ್ಲದ ಕಾರಣಕ್ಕೆ ನಂಜುಂಡ ಎಂಬ ರೈತ ತನ್ನಲ್ಲಿದ್ದ ಬಳಿ ಇದ್ದ 100 ಬರಗೂರು ತಳಿ ಹಸುಗಳನ್ನು ಶ್ರೀಮಠಕ್ಕೆ ನೀಡಿದ್ದು ಬಿಟ್ಟರೆ ದೊಡ್ಡ ಪ್ರಮಾಣದಲ್ಲಿ ಯಾವ ರೈತರೂ ಮಾರಾಟಕ್ಕೆ ಮುಂದಾಗಿಲ್ಲ. ಆದರೆ ಕೆಲ ರೈತರು ವಯಸ್ಸಾದ ಹಸುಗಳು, ಹೋರಿ ಕರುಗಳು ಮತ್ತು ಅನಾರೋಗ್ಯಪೀಡಿತ ಜಾನುವಾರುಗಳ ಮಾರಾಟ ಮಾಡಿದ್ದಾರೆ. ಅಭಯ ಜಾತ್ರೆಯಲ್ಲಿ ಇಂಥ 500ಕ್ಕೂ ಹೆಚ್ಚು ಹಸು- ಕರುಗಳನ್ನು ಶ್ರೀಮಠ ಖರೀದಿಸಿದೆ.
ಒಟ್ಟು 71 ಹಸುಗಳನ್ನು ರಾಜ್ಯದ ಬೇರೆ ಬೇರೆ ಕಡೆಗಳಿಂದ ಬಂದಿದ್ದ ರೈತರು ಖರೀದಿಸಿದ್ದರೆ, ಒಡಿಶಾದಿಂದ ಬಂದ ಐಟಿ ಉದ್ಯೋಗಿಗಳು ಅಭಯ ಜಾತ್ರೆಯಲ್ಲಿ ಪಾಲ್ಗೊಂಡು, ಕೆಲ ಹಸುಗಳನ್ನು ಖರೀದಿಸಿ, ಸಾಕುವ ಸಲುವಾಗಿ ಶ್ರೀಮಠಕ್ಕೆ ಒಪ್ಪಿಸಲು ನಿರ್ಧರಿಸಿದ್ದಾರೆ ಎಂದು ಶ್ರೀಮಠದ ಆಂದೋಲನ ವಿಭಾಗದ ಕಾರ್ಯದರ್ಶಿ ಅಶೋಕ್ ಕೆದ್ಲ ವಿವರಿಸಿದ್ದಾರೆ.
ಗುಲ್ಬರ್ಗದ ಬಸವರಾಜ ದಿಗ್ಗಾವಿ ಅವರು ಸಹಸ್ರನಂದಿ ಯೋಜನೆಗಾಗಿ ಹೋರಿ ಕರುಗಳನ್ನು ಖರೀದಿಸಲು ಮುಂದಾಗಿದ್ದು, ಇಷ್ಟರಲ್ಲೇ ಖರೀದಿಸುವುದಾಗಿ ಭರವಸೆ ನೀಡಿದ್ದಾರೆ.
ತಮಿಳುನಾಡಿನಾದ್ಯಂತ ಶ್ರೀಮಠದ ಅಭಯ ಜಾತ್ರೆ ವ್ಯಾಪಕ ಪ್ರಚಾರ ಪಡೆದಿದ್ದು, ಕರ್ನಾಟಕದಲ್ಲಿ ಸ್ವಾಮೀಜಿಯೊಬ್ಬರು ಗೋ ಆಂದೋಲನ ಕೈಗೊಂಡಿರುವುದರಿಂದ ಕರ್ನಾಟಕದಿಂದ ಆಡಿ ಜಾತ್ರೆಗೆ ಬರುವ ಜಾನುವಾರುಗಳು ಸಂಪೂರ್ಣವಾಗಿ ನಿಂತಿವೆ ಎಂಬ ಮಾತುಗಳು ಆಡಿ ಜಾತ್ರೆಯಲ್ಲಿ ಕೇಳಿಬರುತ್ತಿವೆ ಎಂದು ಅಶೋಕ್ ಕೆದ್ಲ ಹೇಳಿದ್ದಾರೆ.