ಹೈಡ್ರಾಮಾ : ಚುನಾವಣೆ ನಿಲ್ಲಿಸಿ, ಇದು ಅಕ್ರಮ ಎಂದ ರೇವಣ್ಣ
Recommended Video

ಬೆಂಗಳೂರು, ಮಾರ್ಚ್ 23: ರಾಜ್ಯಸಭೆ ಚುನಾವಣೆ ಮತದಾನದ ವೇಳೆ ಜೆಡಿಎಸ್ ನಾಯಕರ ಹೈಡ್ರಾಮಾ ಕಂಡು ಎಲ್ಲರೂ ಒಮ್ಮೆ ಅವಾಕ್ಕಾದರು. ಮತದಾನ ಕೇಂದ್ರದಲ್ಲಿ ಗದ್ದಲ, ಗೊಂದಲದ ನಡುವೆ ಮತದಾನ ಸಾಗಿತು. 'ಚುನಾವಣೆ ನಿಲ್ಲಿಸಿ, ರಿಟರ್ನಿಂಗ್ ಆಫೀಸರ್ ಕಾಂಗ್ರೆಸ್ ಪರ ಇದ್ದಾರೆ' ಎಂದು ರೇವಣ್ಣ ಕೂಗಾಡಿದ ಘಟನೆ ನಡೆಯಿತು.
ಬಾಬುರಾವ್ ಚಿಂಚನಸೂರ್ ಅವರಿಗೆ ಎರಡು ಬಾರಿ ಮತದಾನ ಮಾಡಲು ಅವಕಾಶ ಕೊಟ್ಟಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಎಚ್.ಡಿ.ರೇವಣ್ಣ ಹಾಗೂ ವಕ್ತಾರ ರಮೇಶ್ ಬಾಬು ಅವರು ರಾಜ್ಯಸಭಾ ಚುನಾವಣಾಧಿಕಾರಿ ಎಸ್.ಮೂರ್ತಿ ವಿರುದ್ಧ ಕೂಗಾಡಿದರು.
ಕಾಂಗ್ರೆಸ್ ಏಜೆಂಟ್ ಆಗಿದ್ರೆ ನೀವು ಪಾರ್ಟಿ ಸೇರಿಕೊಳ್ಳಿ ಎಂದು ರೇವಣ್ಣ ಅವರು ಮೂರ್ತಿಗೆ ಹೇಳಿದರು. ನನಗೆ ಬೆದರಿಕೆ ಹಾಕಬೇಡಿ ಎಂದು ಪ್ರತಿಕ್ರಿಯಿಸಿದರು.

ಘಟನೆ ಹಿನ್ನಲೆ: ಬಾಬು ರಾವ್ ಚಿಂಚನಸೂರ್ ಅವರು ಮತ ಹಾಕಿ, ಕಾಂಗ್ರೆಸ್ ಏಜೆಂಟ್ ಗೆ ತೋರಿಸಿದ್ದಾರೆ. ಆದರೆ, ಬ್ಯಾಲೆಟ್ ಪೇಪರ್ ನಲ್ಲಿ ಮತ ಬೇರೆ ಪಕ್ಷಕ್ಕೆ ರೈಟ್ ಮಾರ್ಕ್ ಬಿದ್ದಿರುವುದನ್ನು ಕಂಡ ಏಜೆಂಟ್ ತಕ್ಷಣವೇ ಎಚ್ಚರಿಸಿದ್ದಾರೆ. ನಂತರ ಮತ್ತೊಮ್ಮೆ ಹೊಸ ಬ್ಯಾಲೆಟ್ ಪೇಪರ್ ಪಡೆದುಕೊಂಡು ಕಾಂಗ್ರೆಸ್ಸಿಗೆ ಮತ ಹಾಕಿದ್ದಾರೆ.
ನಂತರ ಬಂದ ಹಿರಿಯ ಸಚಿವ ಕಾಗೋಡು ತಿಮ್ಮಪ್ಪ ಅವರು ಕೂಡಾ ಇದೇ ಮಿಸ್ಟೇಕ್ ಮಾಡಿದರು. ಕಾಂಗ್ರೆಸ್ ಏಜೆಂಟ್ ಸೂಚನೆ ಬಳಿಕ, ಸರಿಯಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದರು.
ಇದನ್ನು ಕಂಡ ಜೆಡಿಎಸ್ ಅಭ್ಯರ್ಥಿ ಬಿ.ಎಂ.ಫಾರೂಕ್ ಹಾಗೂ ಮೇಲ್ಮನೆ ಸದಸ್ಯ ರಮೇಶ್ ಬಾಬು ಗಲಾಟೆ ಮಾಡಿ, ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರಿಗೆ ದೂರು ನೀಡಿದರು.
ಚಿಂಚನಸೂರ್ ಹಾಗೂ ಕಾಗೋಡು ತಿಮ್ಮಪ್ಪ ಅವರಿಗೆ ಎರಡು ಬಾರಿ ಮತದಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಕೆಲಕಾಲ ಮತದಾನ ಸ್ಥಗಿತಗೊಂಡಿತ್ತು.
ಒಟ್ಟು 224 ಸ್ಥಾನ: ಕಾಂಗ್ರೆಸ್ 122, ಬಿಜೆಪಿ 48, ಜೆಡಿಎಸ್ 37 ಬಲಾಬಲ ಹೊಂದಿದೆ. ಎಲ್ ಹನುಮಂತಯ್ಯ, ಜಿ.ಸಿ ಚಂದ್ರಶೇಖರ್, ಸೈಯದ್ ನಾಸೀರ್ ಹುಸೇನ್ ಅವರು ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದರೆ, ರಾಜೀವ್ ಚಂದ್ರಶೇಖರ್ ಅವರು ಬಿಜೆಪಿಯಿಂದ ಸ್ಪರ್ಧೆಯಲ್ಲಿದ್ದಾರೆ. ಅಭ್ಯರ್ಥಿ ಗೆಲ್ಲಲು 45 ಮತಗಳು ಬೇಕಾಗುತ್ತದೆ.












Click it and Unblock the Notifications