ರಾಜ್ಯಸಭೆ ಚುನಾವಣೆ: ಜೆಡಿಎಸ್ ಅಭ್ಯರ್ಥಿ ವಾಪಸ್ ಪ್ರಶ್ನೆಯೇ ಇಲ್ಲ: ಕುಮಾರಸ್ವಾಮಿ
ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮನವಿ ಮಾಡಿದ ನಂತರ ಜೆಡಿಎಸ್ ನಿಲುವನ್ನು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರನ್ನು ರಾಜ್ಯಸಭಾ ಚುನಾವಣಾ ಕಣದಿಂದ ಹಿಂದೆ ಸರಿಸುವ ಪ್ರಶ್ನೆಯೇ ಇಲ್ಲ ಎನ್ನುವ ಸಂದೇಶ ರವಾನಿಸಿದ್ದಾರೆ.
ಕಾಂಗ್ರೆಸ್ ನವರು ಹೇಳಿದಕ್ಕೆಲ್ಲಾ ಒಪ್ಪಿಕೊಳ್ಳಬೇಕಾ? ನಾವು 32 ಮಂದಿ ಶಾಸಕರು ಇದ್ದೇವೆ. ಕಾಂಗ್ರೆಸ್ ನವರು 25 ಶಾಸಕರಿದ್ದಾರೆ. ಯಾರ ಬಳಿ ಹೆಚ್ಚು ಮತಗಳು ಇವೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇವರ ದಬ್ಬಾಳಿಕೆಗೆಲ್ಲಾ ನಾವು ಬಗ್ಗಲು ಆಗುತ್ತಾ? ಎಂದು ನೇರವಾಗಿ ಅವರು ಹೇಳಿದರು.
ನಮ್ಮ ಅಭ್ಯರ್ಥಿ ಚುನಾವಣಾ ಕಣದಿಂದ ಯಾಕೆ ಹಿಂದೆ ಸರಿಯುತ್ತಾರೆ? ಎಂದು ಪ್ರಶ್ನಿಸಿದ ಅವರು, ನಾವೇನು ಸಂಧಾನ ಮಾಡುತ್ತಿಲ್ಲ. ನನ್ನ ಬಳಿ ಯಾರು ಸಂಧಾನಕ್ಕೆ ಬಂದಿದ್ದಾರೆ ಅನ್ನೋದನ್ನು ಅವರು ಹೇಳಲಿ ಎಂದು ಜೆಪಿ ನಗರದಲ್ಲಿ ಇಂದು ಮೊಮ್ಮಗನ ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.
ನಾವು ಮೊದಲು ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ. ಇವರು ನಮ್ಮ ಜೊತೆ ಸಮಾಲೋಚನೆ ಮಾಡಿ ಅಭ್ಯರ್ಥಿ ಹಾಕಿದ್ದಾರಾ? ಬೆಂಬಲ ಕೊಡಿ ಅಂತಾ ನಮ್ಮ ಪಕ್ಷದ ಅಧ್ಯಕ್ಷರನ್ನು ಕೇಳಬಹುದಾಗಿತ್ತಲ್ಲವೇ? ಅವರು ಸಿ.ಎಂ.ಇಬ್ರಾಹಿಂ ಅವರಿಗೆ ಹಳೆಯ ಸ್ನೇಹಿತರು ಅಲ್ಲವೇ? ಒಂದು ಮಾತು ಅವರನ್ನು ಕೇಳಬಹುದಿತ್ತು.
ಅಂತ ಯಾವ ಪ್ರಯತ್ನವನ್ನು ಮಾಡದೇ ಈಗ ಅಭ್ಯರ್ಥಿಯನ್ನು ವಾಪಸ್ ತೆಗೆದುಕೊಳ್ಳಲಿ ಅಂತಾ ಹೇಳುವುದು ಭಂಡತನ. ನಾವೇನು ಇವರ ಗುಲಾಮರಾ? ಎಂದು ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿಗಳು ತೀವ್ರ ವಾಗ್ದಾಳಿ ನಡೆಸಿದರು.

ಇಬ್ರಾಹಿಂ ಕಾಟಾಚಾರದ ಅಧ್ಯಕರಲ್ಲ:
ನಮ್ಮ ಪಕ್ಷದ ಅಧ್ಯಕ್ಷರ ಬಗ್ಗೆ ಸಿದ್ದರಾಮಯ್ಯ ಅವರು ಕೇವಲವಾಗಿ ಮಾತನಾಡಿದ್ದಾರೆ. ಕಾಟಾಚಾರದ ಅಧ್ಯಕ್ಷರನ್ನು ಮಾಡಿದ್ದಾರೆಂದು ಕುಹಕವಾಡಿದ್ದಾರೆ. ಇದು ಅವರ ಸಣ್ಣತನ. ನಮ್ಮ ಅಧ್ಯಕ್ಷರ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಲಿ ಎಂದು ಕುಮಾರಸ್ವಾಮಿ ನೇರ ಮಾತುಗಳಲ್ಲಿ ತಾಕೀತು ಮಾಡಿದರು.
ನಾವು ಇಬ್ರಾಹಿಂ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿದ್ದೇವೆ. ಅವರ ಹಿರಿತನ, ಅನುಭವದ ಬಗ್ಗೆ ನಮಗೆ ಅರಿವಿದೆ. ಇವರು (ಸಿದ್ದರಾಮಯ್ಯ) ಎಷ್ಟು ಜನ ಅಲ್ಪಸಂಖ್ಯಾತರ ಕುತ್ತಿಗೆ ಕೊಯ್ದಿಲ್ಲ ಹೇಳಿ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಸಿದ್ದರಾಮಯ್ಯ ಟವೆಲ್ ಕೊಡವಿಕೊಂಡು ಹೋಗಿದ್ದರು
ಧಾರವಾಡದಲ್ಲಿ ಸಿದ್ದರಾಮಯ್ಯ ಅವರು ನಮ್ಮ ಪಕ್ಷದ ಅಭ್ಯರ್ಥಿ ಬಗ್ಗೆ ಮತ್ತೆ ಮಾತನಾಡಿದ್ದಾರೆ. ಅಲ್ಪಸಂಖ್ಯಾತರನ್ನು ನಿಲ್ಲಿಸಿದ್ದೇವೆ, ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ ಎಂದು ಹೇಳಿದ್ದಾರೆ. ಆದರೆ, ನಾವು ಅಲ್ಪಸಂಖ್ಯಾತರನ್ನು ನಿಲ್ಲಿಸಿದಾಗ ಅವರು ತಮ್ಮ ಪಕ್ಷದ ಮತಗಳನ್ನು ನೀಡಲಿಲ್ಲ. ಅವರು ಯಾವಾಗ ಮತ ನೀಡಿದ್ದಾರೆ ನಮಗೆ? ಹಿಂದೆ ಇಕ್ಬಾಲ್ ಅನ್ಸಾರಿ ಅವರನ್ನು ಮಂತ್ರಿ ಮಾಡಬೇಕೆಂದು ಹೊರಟಾಗ, ಯಾವುದೇ ಕಾರಣಕ್ಕೂ ಅವರನ್ನು ಮಂತ್ರಿ ಮಾಡಬಾರದು ಎಂದು ಹಠ ಹಿಡಿದು ಟವಲ್ ಕೊಡವಿಕೊಂಡು ಹೋದರು ಸಿದ್ದರಾಮಯ್ಯ. ಅಂತ ವ್ಯಕ್ತಿ ಈಗ ಅಲ್ಪಸಂಖ್ಯಾತರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ಕಿಡಿ ಕಾರಿದರು.

ನಾನೇ ಸುರ್ಜೇವಾಲಾ ಜತೆ ಮಾತನಾಡಿದ್ದೇನೆ
ಸಂಧಾನ ಮಾಡುತ್ತಿರುವವರು ಯಾರು? ಯಾರು ಯಾರನ್ನು ಮತ ಕೇಳಿದ್ದಾರೆ? ಯಾರ ಬಳಿ ಯಾರನ್ನು ಕಳಿಸಿದ್ದಾರೆ? ಎನ್ನುವುದೆಲ್ಲ ಹೊರಗಡೆ ಬರಬೇಕು. ಗಾಳಿಯಲ್ಲಿ ಅಥವಾ ಪಾರಿವಾಳ ಜತೆ ಸಂದೇಶ ಕಳುಹಿಸಿದಂತೆ ಮಾಧ್ಯಮದವರ ಮೂಲಕ ಸಂದೇಶ ಕಳುಹಿಸಿದರೆ ಆಗುತ್ತಾ? ನಾನೇ ಸುರ್ಜೇವಾಲಾ ಜತೆ ಮಾತನಾಡಿದ್ದೇನೆ. ನನ್ನ ಅಭಿಪ್ರಾಯವನ್ನು ಅವರಿಗೆ ತಿಳಿಸಿದ್ದೇನೆ. ಈಗ ಸಿದ್ದರಾಮಯ್ಯ ಅವರು ಹೇಳುತ್ತಿರುವುದರಲ್ಲಿ ಯಾವುದೇ ವಿಶೇಷತೆ ಇಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಹೆಚ್.ಡಿ.ದೇವೇಗೌಡರು ರಾಜ್ಯಸಭೆಗೆ ಹೋಗಬೇಕಾದ ಸನ್ನಿವೇಶವೇ ಬೇರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರೇ ನಮಗೆ ಫೋನ್ ಮಾಡಿ ಹೇಳಿದ್ದರು. ನಮ್ಮ ಹೈಕಮಾಂಡ್ ಹೇಳಿದ್ದಾರೆ, ದೇವೇಗೌಡರಂತಹ ಹಿರಿಯರು ಸಂಸತ್ತಿಗೆ ಹೋಗಬೇಕು ಎಂದು ಹೇಳಿದ್ದಾರೆ. ಹೀಗಾಗಿ ಬಿಜೆಪಿಯಿಂದ ಅಭ್ಯರ್ಥಿಯನ್ನು ಹಾಕುವುದಿಲ್ಲ ಎಂದು ಅವರು ಹೇಳಿದ್ದರು. ಆಗ ಬಿಜೆಪಿ ಅಭ್ಯರ್ಥಿಯನ್ನು ಹಾಕದಿದ್ದಾಗ ಕಾಂಗ್ರೆಸ್ ಅಭ್ಯರ್ಥಿ ಹಾಕಲಿಲ್ಲ. ನಾವು ಕುಪೇಂದ್ರ ರೆಡ್ಡಿ ಅವರನ್ನು ಅಭ್ಯರ್ಥಿಯಾಗಿ ಮಾಡುವುದಕ್ಕಿಂತ ಮುಂಚೆಯೇ ಸೋನಿಯಾ ಗಾಂಧಿ ಅವರ ಜತೆ ದೇವೇಗೌಡರು ಮಾತನಾಡಿದ್ದಾರೆ. ನಾವು ಮೊದಲು ಕೇಳಿದ್ದೇವೆಯೇ ಹೊರತು ಅವರಲ್ಲ ಎಂದು ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದರು.

ಬಿಜೆಪಿಯನ್ನು ಸೋಲಿಸಲು ಎಲ್ಲದಕ್ಕೂ ಸಿದ್ದನಿದ್ದೇನೆ
ಬಿಜೆಪಿಯನ್ನು ಸೋಲಿಸಲು ಎಲ್ಲದಕ್ಕೂ ಸಿದ್ದನಿದ್ದೇನೆ. ಕಾಂಗ್ರೆಸ್ ನಾಯಕರಿಗೆ ಇದಕ್ಕಿಂತ ಓಪನ್ ಆಫರ್ ಏನು ಕೊಡಲಿ? ಯಾರಿಗಿದೆ ಇಲ್ಲಿ ಆತ್ಮಸಾಕ್ಷಿ? ನಾಳೆ ಮಧ್ಯಾಹ್ನದ ವೇಳೆಗೆ ಒಂದು ಸ್ಪಷ್ಟತೆ ದೊರೆಯುತ್ತದೆ. ನಮ್ಮ ಕುಪೇಂದ್ರ ರೆಡ್ಡಿ ಅವರು ಎಲ್ಲಾ ಶಾಸಕರನ್ನು ಭೇಟಿ ಮಾಡಿದ್ದಾರೆ. 32 ಶಾಸಕರು ಒಟ್ಟಾಗಿ ಎಲ್ಲರೂ ಮತ ನೀಡುತ್ತಾರೆ. ನಮ್ಮ ಪಕ್ಷದ ಎಲ್ಲಾ ಶಾಸಕರು ಒಟ್ಟಾಗಿ ತೀರ್ಮಾನ ಮಾಡುತ್ತಾರೆ. ಜಿ.ಟಿ.ದೇವೇಗೌಡ, ಗುಬ್ಬಿ ವಾಸು, ಶ್ರೀನಿವಾಸಗೌಡ, ಶಿವಲಿಂಗೇಗೌಡ ಸೇರಿದಂತೆ ಹಲವು ಶಾಸಕರ ಜೊತೆಯೂ ರೆಡ್ಡಿ ಅವರು ಮಾತನಾಡಿದ್ದಾರೆ. ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಅವರು ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಬಂಡೆಪ್ಪ ಖಾಷೆಂಪೂರ್, ಮುಖ್ಯ ಸಚೇತಕ ವೆಂಕಟರಾವ್ ನಾಡಗೌಡ, ರಾಜ್ಯಸಭೆ ಅಭ್ಯರ್ಥಿ ಕುಪೇಂದ್ರ ರೆಡ್ಡಿ, ಶಾಸಕ ಅನ್ನದಾನಿ ಮುಂತಾದವರು ಹಾಜರಿದ್ದರು












Click it and Unblock the Notifications