ಬೇರೆಯವರ ಹೆಂಡತಿಗೆ ಸಿದ್ದರಾಮಯ್ಯ ಲವ್ ಲೆಟರ್ ಬರೆದಿದ್ದಾರೆ: ಇಬ್ರಾಹಿಂ ಲೇವಡಿ
ಬೆಂಗಳೂರು, ಜೂ. 10: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮ್ಯ ಅವರು ಜೆಡಿಎಸ್ ಶಾಸಕರಿಗೆ ಪತ್ರ ಬರೆದಿದ್ದು, 'ಬೇರೆಯವರು ತಾಳಿ ಕಟ್ಟಿದ ಹೆಂಡತಿಗೆ ಲವ್ ಲೆಟರ್ ಬರೆದಂತೆ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ವ್ಯಾಖ್ಯಾನಿಸಿದರು.
ವಿಧಾನಸೌಧದದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಇಬ್ರಾಹಿಂ, ವಿರೋಧ ಪಕ್ಷದ ನಾಯಕರಾಗಿ ಈ ರೀತಿ ಪತ್ರ ಬರೆದಿರುವುದು ನೋಡಿದರೆ ಅವರಿಗೆ ಏನೂ ಅನ್ನಿಸುವುದಿಲ್ಲವೇ? ಮೊದಲಿನಿಂದಲೂ ಇಂತಹದ್ದೆ ರಾಜಕಾರಣ ಮಾಡಿಕೊಂಡು ಬಂದಿದ್ದಾರಾ ಎಂದು ಪ್ರಶ್ನಿಸಿದರು.
ಆತ್ಮಸಾಕ್ಷಿಯ ಮತ ಬರುತ್ತವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂಬ ಪ್ರಶ್ನೆಗೆ, ಯಾವುದ್ರೀ ಆತ್ಮ? ಅವರ ಬಳಿ ಮತಗಳೇ ಇಲ್ಲ ಎಂದ ಮೇಲೆ ಆತ್ಮಸಾಕ್ಷಿ ಮತಗಳು ಎಂದರೆ ಏನು ಅರ್ಥ. ಕಾಂಗ್ರೆಸ್ ಎರಡನೇ ಅಭ್ಯರ್ಥಿಯನ್ನು ಹಾಕುವ ಮೂಲಕ ಬಿಜೆಪಿ ಅಭ್ಯರ್ಥಿ ಲೆಹರ್ ಸಿಂಗ್ ಅವರನ್ನು ಗೆಲ್ಲಿಸುವುದು ಆತ್ಮಸಾಕ್ಷಿಯೇ ಎಂದು ಇಬ್ರಾಹಿಂ ಲೇವಡಿ ಮಾಡಿದರು.
ಕನ್ನಡಕ್ಕೆ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂದು ಕುವೆಂಪು ಹೇಳಿದ್ದಾರೆ. ಉತ್ತರ ಭಾರತದ ಬಿಜೆಪಿಯ ಲೆಹರ್ಸಿಂಗ್ ಅವರನ್ನು ಗೆಲ್ಲಿಸುವುದು ಕನ್ನಡಕ್ಕೆ ಕೈ ಎತ್ತುವಾ ಕೆಲಸವಾ? ಅವರೇನು ಬಡವರಾ? ಕರ್ನಾಟಕಕ್ಕಾಗಿ ದುಡಿದವರಾ? ಲೆಹರ್ ಸಿಂಗ್ ಸೋಲುವ ಅವಶ್ಯಕತೆ ಇಲ್ಲ ಎಂಬುದೇ ಸಿದ್ದರಾಮಯ್ಯನವರ ತೀರ್ಮಾನ. ಜನರೇ ಇದನ್ನು ತೀರ್ಮಾ ಮಾಡುತ್ತಾರೆ ಎಂದು ಹೇಳಿದರು.
ಜೆಡಿಎಸ್ ಸತ್ಯಧರ್ಮದ ಪಕ್ಷ:
ಜೆಡಿಎಸ್ ಸತ್ಯಧರ್ಮದ ಪಕ್ಷ. ಹಳ್ಳಿಯ ಜನರಿಂದ ನಡೆಯತ್ತಿರುವಂತಹ ಪಕ್ಷ. ಗ್ರಾಮೀಣ ಭಾಗದ ಜನ ಈ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ನಮ್ಮ ಹತ್ತಿರ ದುಡ್ಡೂ ಇಲ್ಲ, ನಮಗೆ ಯಾವುದೇ ಹೆಡ್ ಆಫಿಸ್ ಇಲ್ಲ ಎಂದು ಇಬ್ರಾಹಿಂ ಮಾರ್ಮಿಕವಾಗಿ ಹೇಳಿದರು.
ಕಾಂಗ್ರೆಸ್ನ ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಎರಡನೇ ಓಟುಗಳನ್ನು ನಮಗೆ ಕೊಡಿ ಎಂದು ಕೇಳಿದ್ದೆವು. ಆದರೆ, ಅವರಿಗೆ ಅದು ಬೇಕಿಲ್ಲ. ಕಾರಣ ಜೆಡಿಎಸ್ಗೆ ಮತ ನೀಡಿದರೆ ಬಿಜೆಪಿ ಗೆಲುವು ಸಾಧ್ಯವಿಲ್ಲ ಎಂಬುದು ಅವರಿಗೆ ಗೊತ್ತಿದೆ. ಯಾರ ಗೆಲುವಿಗೆ ಶ್ರಮಿಸಿದ್ದಾರೆ ಎಂಬುದು ನಿಮಗೇ ತಿಳಿಯುತ್ತದೆ ಎಂದು ಹೇಳಿದರು.
ಮಧ್ಯಮದವರಿಗೆ ಬರೆದಿದ್ದು:
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, 'ಜೆಡಿಎಸ್ ಶಾಸಕರಿಗೆ ಮನವಿ ಮಾಡಿ ಮಧ್ಯಮದವರಿಗೆ ಪತ್ರ ಬರೆದಿದ್ದು, ಅದನ್ನು ಜೆಡಿಎಸ್ ಶಾಕರಿಗೆ ಕಳುಹಿಸಿಲ್ಲ' ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಪತ್ರದಲ್ಲಿ ಏನಿತ್ತು?
ಜಾತ್ಯತೀತ ಜನತಾದಳದ ವಿಧಾನಸಭಾ ಸದಸ್ಯರಿಗೆ ಪ್ರೀತಿಯ ನಮಸ್ಕಾರಗಳು.
Recommended Video
ದೇಶ ಅತ್ಯಂತ ಆತಂಕಕಾರಿ ಹಾದಿಯಲ್ಲಿ ಸಾಗುತ್ತಿರುವುದು ನಮ್ಮೆಲ್ಲರ ಅರಿವಿನಲ್ಲಿದೆ. ಸಾಮಾಜಿಕ ನ್ಯಾಯ, ಸಮಾನತೆ,ಭಾತೃತ್ವ, ಜಾತ್ಯತೀತತೆ ಮೊದಲಾದ ಸಂವಿಧಾನದ ಆಶಯಗಳ ಮೇಲೆ ಪ್ರಭುತ್ವವೇ ನಡೆಸುತ್ತಿರುವ ನಿರಂತರ ದಾಳಿಯಿಂದ ದೇಶದ ಪ್ರಜಾಪ್ರಭುತ್ವವೇ ಅಪಾಯದಲ್ಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮಾಜಿಕ,ಶೈಕ್ಷಣಿಕ,ಆರ್ಥಿಕ ಕ್ಷೇತ್ರಗಳು ಸೇರಿದಂತೆ ಎಲ್ಲ ಬದಲಾವಣೆಗಳಿಗೂ ರಾಜಕೀಯ ಬದಲಾವಣೆಯೇ ಚಾಲನಾ ಶಕ್ತಿ ಎನ್ನುವುದು ನಾವು ಇತಿಹಾಸದಿಂದ ಕಲಿತ ಪಾಠವಾಗಿದೆ. ಕಲಿತ ಪಾಠವನ್ನು ಪ್ರಯೋಗಿಸುವ ಅವಕಾಶ ಎದುರಾದಾಗ ಮುಕ್ತ ಮನಸ್ಸಿನಿಂದ ತೊಡಗಿಸಿಕೊಳ್ಳುವುದು ಪ್ರತಿಯೊಬ್ಬ ಜವಾಬ್ದಾರಿಯುತ ಪ್ರಜೆಯ ಕರ್ತವ್ಯವಾಗಿದೆ.
ಮನ್ಸೂರು ಅಲಿ ಖಾನ್ ಅವರ ಗೆಲುವು ಯಾವುದೇ ಒಂದು ಪಕ್ಷದ ಗೆಲುವಾಗದೆ ಜಾತ್ಯತೀತ ಸಿದ್ದಾಂತದ ಮೇಲೆ ನಂಬಿಕೆ ಇಟ್ಟಿರುವ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳ ಪಕ್ಷಗಳೆರಡರ ಸೈದ್ದಾಂತಿಕ ಗೆಲುವಾಗುತ್ತದೆ. ಪ್ರಜಾಪ್ರತಿನಿಧಿಗಳಾದ ನಾವೆಲ್ಲರೂ ನಮ್ಮ ಪ್ರಭುಗಳಾದ ಪ್ರಜೆಗಳ ಆತ್ಮಸಾಕ್ಷಿಗೆ ದನಿಯಾಗಬೇಕಾಗಿರುವುದು ಕರ್ತವ್ಯವಾಗಿದೆ. ಈ ಆತ್ಮಸಾಕ್ಷಿಯ ಮತವನ್ನು ಜಾತ್ಯತೀತತೆಗೆ ಬದ್ದವಾಗಿರುವ ನಮ್ಮ ಪಕ್ಷದ ಮನ್ಸೂರ್ ಅಲಿ ಖಾನ್ ಅವರಿಗೆ ಚಲಾಯಿಸಬೇಕೆಂದು ನನ್ನ ಸವಿನಯ ವಿನಂತಿ.