ಮಹದಾಯಿ: ರೈತ ಸೇನೆ ಅಧ್ಯಕ್ಷ ಸೊರಬದಮಠರಿಂದ ಉಪವಾಸ ಸತ್ಯಾಗ್ರಹ
ಗದಗ, ಜುಲೈ 17 : ಉತ್ತರ ಕರ್ನಾಟಕದ ಕುಡಿಯುವ ನೀರಿನ ಯೋಜನೆಯಾದ ಮಹದಾಯಿ, ಕಳಸಾ-ಬಂಡೂರಿ ನಾಲಾ ಜೋಡಣೆ ಯೋಜನೆಯ ಅನುಷ್ಠಾನಕ್ಕಾಗಿ ನಡೆಯುತ್ತಿರುವ ಚಳವಳಿ ಜುಲೈ 16ಕ್ಕೆ ಎರಡು ವರ್ಷ ಪೂರೈಸಿದೆ.
ಕಳಸಾ-ಬಂಡೂರಿ ವೆಚ್ಚ 798 ಕೋಟಿ ರು.ಗೆ ಏರಿಕೆ, ಆದ್ರೆ ತೊಟ್ಟು ನೀರಿಲ್ಲ
ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಜಿಲ್ಲೆಯ ನಗರಗುಂದದಲ್ಲಿ ನಡೆಯುತ್ತಿರುವ ನಿರಂತರ ಧರಣಿ ಸತ್ಯಾಗ್ರಹ ಎರಡು ವರ್ಷ ಪೂರೈಸಿದ ನಿಮಿತ್ತ ಭಾನುವಾರ ಬೃಹತ್ ರತರ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಸಮಾವೇಶದಲ್ಲಿ ರೈತ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊರಬದಮಠದ ಅವರು ಅಮರಾಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದರು.
'ಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ಅವರು ಮಧ್ಯೆಸ್ಥಿಕೆ ವಹಿಸುವಂತೆ ಅವರ ಮನವೊಲಿಸುವ ಜವಾಬ್ದಾರಿಯನ್ನು ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಸಂಸದರು, ಶಾಸಕರು ಹಾಗೂ ರಾಜ್ಯದ ಮುಖ್ಯಮಂತ್ರಿ ವಹಿಸಿಕೊಳ್ಳಬೇಕು.
ಯೋಜನೆ ಜಾರಿಗೊಳ್ಳುವ ವರೆಗೆ ಇದೇ ವೇದಿಕೆಯಲ್ಲಿ ಇಂದಿನಿಂದಲೇ ಉಪವಾಸ ಸತ್ಯಾಗ್ರಹ ಆರಂಭಿಸುತ್ತಿದ್ದೇನೆ' ಎಂದು ವೀರೇಶ ಸೊರಬದಮಠದ ಪ್ರಕಟಿಸಿದರು.
ಅಲ್ಲದೆ ಸಮಾವೇಶದ ವೇದಿಕೆಯಲ್ಲಿ ಮಹದಾಯಿ ಸಮಸ್ಯೆ ಇತ್ಯರ್ಥ ಪಡಿಸಲು ಪ್ರಧಾನಿ ಮಧ್ಯಸ್ಥಿಕೆ ವಹಿಸುವಂತೆ ಈ ಭಾಗದ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಅವರ ಮೇಲೆ ಒತ್ತಡ ಹೇರಬೇಕು ಎಂಬ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.