ಸಿಎಂ ಗದ್ದುಗೆ ಗುದ್ದಾಟ; ರಾಜ್ಯದಲ್ಲಿ ದಲಿತ ಸಿಎಂ ಯಾಕೆ ಆಗಬಾರದು?: ಶ್ರೀಗಳ ಪ್ರಶ್ನೆ?
ಬೆಂಗಳೂರು,ನವೆಂಬರ್ 06: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳ ಮೂಲಕ ಭರ್ಜರಿ ಜಯಗಳಿಸಿದ್ದು, ಸರ್ಕಾರ ರಚನೆಯ ಆರು ತಿಂಗಳು ಪೂರೈಸುವ ಮೊದಲೇ ಮುಖ್ಯಮಂತ್ರಿ ಬದಲಾವಣೆ ಕುರಿತು ಸಾಕಷ್ಟು ಚರ್ಚೆಯಾಗುತ್ತಿದ್ದು, ಈ ನಡುವೆ ದಲಿತ ಸಿಎಂ ಕೂಗು ಜೋರಾಗಿದೆ.
ಹೌದು, ಬಾಗಲಕೋಟೆಯಲ್ಲಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ದಲಿತ ಸಿಎಂ ಪರ ದನಿ ಎತ್ತಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿಗೆ ಮುಖ್ಯಮಂತ್ರಿ ಆಗುವ ಅರ್ಹತೆ ಇದೆ. ರಾಜ್ಯದಲ್ಲಿ ದಲಿತರು ಮುಖ್ಯಮಂತ್ರಿ ಯಾಕೆ ಆಗಬಾರದು ಎಂದು ಪ್ರಶ್ನಿಸಿದ್ದಾರೆ.

ದಲಿತರು ಮತ ಬ್ಯಾಂಕ್ ಮಾತ್ರ ಅಗಿರಬೇಕಾ? ಮುಖ್ಯ ಮಂತ್ರಿ ಹುದ್ದೆ ಕೆಲವರ ಸ್ವತ್ತಾ? ಯಾರಾದ್ರೂ ಗುತ್ತಿಗೆ ಪಡೆದುಕೊಂಡಿದ್ದಾರಾ? ದಲಿತರು ಸಿಎಂ ಆಗಲಿ ಎನ್ನುವ ಔದಾರ್ಯ ಹೊಂದಿರದಿದ್ದರೆ ಹೇಗೆ ಎಂದು ಪುಂಖಾನುಪುಂಖವಾಗಿ ಪ್ರಶ್ನೆ ಮಾಡಿದ್ದಾರೆ.
ಇನ್ನೂ ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಅವಕಾಶ ಯಾವಾಗ ಬರುತ್ತೋ ಗೊತ್ತಿಲ್ಲ ಎಂದಿದ್ದಾರೆ. ಭಾನುವಾರ ಬಾಗಲಕೋಟೆಯ ಜಿಲ್ಲಾ ವಾಲ್ಮೀಕಿ ಜನಜಾಗೃತಿ ಸಮಾವೇಶ ಆಯೋಜನೆ ಮಾಡಲಾಗಿತ್ತು. ಈ ವೇಳೆ ರಾಜನಹಳ್ಳಿ, ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ, ದಲಿತ ಸಿಎಂ ಯಾಕೆ ಆಗಬಾರದು ಎಂದು ಕೇಳಿದ್ದಾರೆ. ಅದರ ಜೊತೆಗೆ ಸಮಯಕ್ಕೆ ಕಾಯಬೇಕೂ ಅಂತಾನೂ ಹೇಳಿದ್ದಾರೆ. ಅದಕ್ಕೆ ಪಕ್ಷ ಇದೆ. ಶಾಸಕರಿದ್ದಾರೆ. ಎಲ್ಲವೂ ಕೂಡಿ ಬಂದಾಗ ಮಾತ್ರ ಅವಕಾಶ ಸಿಗುತ್ತೆ. ನಮ್ಮ ಆಸೆ, ಸಮುದಾಯದ ಆಸೆ ಆಗಿರಬಹುದು ಅದು ಬೇರೆ. ಇಲ್ಲಿ ಪಕ್ಷ ಬಹಳ ಮುಖ್ಯ. ಅದು ಬಹಳ ದೊಡ್ಡದು. ಪಕ್ಷದ ತೀರ್ಮಾನವೇ ಅಂತಿಮ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಮುಖ್ಯಮಂತ್ರಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಮಾತನಾಡಿದ್ದಾರೆ. ನಾನೇ ಇರ್ತೀನಿ ಅಂದಿದ್ದಾರೆ. ಕಾದು ನೋಡಬೇಕು. ಸಂದರ್ಭ ಉದ್ಭವ ಆದಾಗ ನೋಡೋಣ ಎಂದ ಸಚಿವ ಸತೀಶ್ ಜಾರಕಿಹೊಳಿ ಮಾರ್ಮಿಕವಾಗಿ ಮಾತನಾಡಿದ್ದಾರೆ.
ಇನ್ನು ತಮ್ಮ ನೇತೃತ್ವದಲ್ಲಿ ಶಾಸಕರ ಪ್ರವಾಸ ಕೈಗೊಂಡಿರುವ ಕುರಿತು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ಟೂರು ನಮ್ಮಲ್ಲಿ ಇಲ್ಲ. ನಮ್ಮಲ್ಲಿ ಅಸಮಾಧಾನದ ಪ್ರಶ್ನೆಯೇ ಇಲ್ಲ. ಯಾವುದೇ ಸಮಸ್ಯೆ ಬಂದ್ರೂ ಮಾತುಕತೆ ಮೂಲಕ ಪರಿಹಾರ ಮಾಡಿಕೊಳ್ಳುತ್ತೇವೆ. ಆ ರೀತಿಯ ಘಟನೆ ಯಾವುದು ಆಗಿಲ್ಲ, ಹೈಕಮಾಂಡ್ ಮಾತನಾಡುವ ಮಾತೇ ಇಲ್ಲ. ಒಂದು ವೇಳೆ ಅಂಥದ್ದು ಏನಾದ್ರು ಇದ್ರೆ ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.












Click it and Unblock the Notifications