Raita Sankranti: ಜನವರಿ 16ರಂದು ಹೆಚ್.ಡಿ.ಕುಮಾರಸ್ವಾಮಿ ಅವರಿಂದ ರೈತ ಸಂಕ್ರಾಂತಿ
ಕಲಬುರಗಿ,ಜನವರಿ11: ರೈತರ ಸಮಗ್ರ ಕಲ್ಯಾಣಕ್ಕಾಗಿ ಪಂಚರತ್ನ ಯೋಜನೆಗಳಲ್ಲಿ ರೈತ ಚೈತನ್ಯ ಕಾರ್ಯಕ್ರಮ ರೂಪಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಇದೇ ತಿಂಗಳ 16ರಂದು ಕೃಷಿ ಸಮಸ್ಯೆಗಳ ಬಗ್ಗೆ ಅನ್ನದಾತರ ಜತೆ ಮುಕ್ತವಾಗಿ ಚರ್ಚೆ ನಡೆಸಲು ' ರೈತ ಸಂಕ್ರಾಂತಿ ' ಎಂಬ ಅನ್ ಲೈನ್ ಸಂವಾದ ಹಮ್ಮಿಕೊಂಡಿದ್ದಾರೆ.
ಈ ಬಗ್ಗೆ ಕಲಬುರಗಿ ಜಿಲ್ಲೆಯ ಸೇಡಂ ವಿಧಾನಸಭೆ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ನಡೆಸುತ್ತಿರುವ ಅವರು, ಸುಲೇಪೇಟ ಸಮೀಪದ ಜಮೀನೊಂದರ ಪಕ್ಕದ ಕಟ್ಟೆಯ ಮೇಲೆ ಮಾಧ್ಯಮಗಳ ಜತೆ ಮಾತನಾಡುತ್ತಾ ಈ ವಿಷಯವನ್ನು ತಿಳಿಸಿದರು.
ಮಹತ್ವದ ಈ ಸಂವಾದದಲ್ಲಿ ಮಾಜಿ ಪ್ರಧಾನಮಂತ್ರಿಗಳು ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರು ಭಾಗಿಯಾಗಲಿದ್ದಾರೆ. ಕೃಷಿ ವಲಯದ ಪರಿಪೂರ್ಣ ಪುನಚ್ಚೇತನಕ್ಕೆ ನಮಗೆ ಮಾಜಿ ಪ್ರಧಾನಿ ಅವರ ಮಾರ್ಗದರ್ಶನ ಇರುತ್ತದೆ ಎಂದು ಹೇಳಿದರು.

ಕಳೆದ 40ಕ್ಕೂ ಹೆಚ್ಚು ದಿನಗಳಿಂದ ನಾನು ರಾಜ್ಯದ ಉದ್ದಗಲಕ್ಕೂ ಪಂಚರತ್ನ ರಥಯಾತ್ರೆ ನಡೆಸುತ್ತಿದ್ದೇನೆ. ನಾನು ಮುಖ್ಯಮಂತ್ರಿ ಆಗಿದ್ದಾಗ 2006 ಮತ್ತು 2018ರಲ್ಲಿ ಎರಡು ಬಾರಿ ಸಾಲ ಮನ್ನಾ ಮಾಡಿದರೂ ರೈತರ ಸಮಸ್ಯೆಗಳು ನಿವಾರಣೆ ಆಗಿಲ್ಲ. ಕೆಲ ದಿನಗಳಿಂದ ಈಚೆಗೆ ಮತ್ತೆ ರೈತರು ಜೀವ ಕಳೆದುಕೊಳ್ಳುತ್ತಿದ್ದಾರೆ. ಇದು ನನಗೆ ಅತೀವ ನೋವು ಉಂಟು ಮಾಡಿದೆ ಎಂದರು ಅವರು. ರೈತರು ಶಾಶ್ವತವಾಗಿ ಸಾಲಗಾರರಾಗದಂತೆ ಹಾಗೂ ಅವರಿಗೆ ಆರ್ಥಿಕ ಚೈತನ್ಯ ನೀಡುವ ಉದ್ದೇಶದಿಂದ ರೂಪಿಸಿರುವ ರೈತ ಚೈತನ್ಯ ಕಾರ್ಯಕ್ರಮದ ಬಗ್ಗೆ ಅನ್ನದಾತರಿಗೆ ಮನವರಿಕೆ ಮಾಡಿಕೊಡುವುದು ಹಾಗೂ ಕೃಷಿ ಸಮಸ್ಯೆಗಳ ಬಗ್ಗೆ ಇನ್ನಷ್ಟು ಪರಿಣಾಮಕಾರಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಾನು ರೈತರ ಜತೆ ಸಂವಾದ ನಡೆಸುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ಬಿಡದಿಯ ನನ್ನ ತೋಟದಲ್ಲಿ ರೈತ ಸಂಕ್ರಾಂತಿ ಸಂವಾದ ಹಮ್ಮಿಕೊಳ್ಳಲಾಗಿದ್ದು, ಸಂಜೆ 4ರಿಂದ 6 ಗಂಟೆವರೆಗೂ ರೈತರ ಜತೆ ಸಂವಾದ ನಡೆಸುತ್ತೇನೆ. ಸುಮಾರು 50ಕ್ಕೂ ಹೆಚ್ಚು ವಿಧಾನಸಭೆ ಕ್ಷೇತ್ರಗಳ ರೈತರ ಜತೆ ನಾನು ಅನ್ ಲೈನ್ ವೇದಿಕೆ ಮೂಲಕ ನೇರ ಸಂವಾದ ನಡೆಸುತ್ತೇನೆ. ಆದರೆ, ಯಾವುದೇ ಭಾಗದ ರೈತರು ಈ ಸಂವಾದದಲ್ಲಿ ಭಾಗಿಯಾಗಬಹುದು ಹಾಗೂ ಸಮಸ್ಯೆಗಳು, ಪರಿಹಾರಗಳನ್ನು ತಿಳಿಸಬಹುದು ಎಂದರು ಅವರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಶ್ರೀ ವೆಂಕಟರಾವ್ ನಾಡಗೌಡ, ವಿಧಾನ ಪರಿಷತ್ ಸದಸ್ಯ ಶ್ರೀ ಭೋಜೇಗೌಡ, ಮಾಜಿ ಸದಸ್ಯ ಶ್ರೀ ರಮೇಶ್ ಗೌಡ, ಸೇಡಂ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀ ಬಾಲರಾಜ್ ಗುತ್ತೇದಾರ್, ಜಿಲ್ಲಾಧ್ಯಕ್ಷ ಶ್ರೀ ಸುರೇಶ್ ಮಾಗಾವಂಕರ್ ಇತರರು ಹಾಜರಿದ್ದರು.












Click it and Unblock the Notifications