ಮಹದಾಯಿ: ಮೂರನೇ ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಾಗ್ರಹ
ಗದಗ, ಜುಲೈ 18 : ಮಹದಾಯಿ, ಕಳಸಾ-ಬಂಡೂರಿ ಯೋಜನೆಗೆ ಆಗ್ರಹಿಸಿ ಆರಂಭವಾಗಿರುವ ರೈತ ಸೇನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಅವರ ಆಮರಣ ಉಪವಾಸ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಸಿರಿಸಿದೆ.
ಯೋಜನೆಗೆ ಆಗ್ರಹಿಸಿ ಗಟ್ಟಿ ನಿರ್ಧಾರ ತೆಗೆದುಕೊಂಡಿರುವ ಅವರು ಮಾಡು ಇಲ್ಲವೆ ಮಡಿ ಹೋರಾಟಕ್ಕೆ ಸಿದ್ಧವಾಗಿದ್ದಾರೆ. ನರಗುಂದಲ್ಲಿ ನಡೆಯುತ್ತಿರುವ ಹೋರಾಟ ನಿರಂತರ 734ನೇ ದಿನಕ್ಕೆ ತಲುಪಿದ್ದು, ಭಾನುವಾರ ನಡೆದ ಸಮಾವೇಶದಲ್ಲಿ ತೆಗೆದುಕೊಂಡ ನಿರ್ಧಾರದಂತೆ ಸೊರಬದಮಠ ಉಪವಾಸ ಸತ್ಯಾಗ್ರಹ ಮುಂದುವರಿಸಿದ್ದಾರೆ.
ವೀರೇಶ್ ಅವರ ಆರೋಗ್ಯದ ಮೇಲೆ ವೈದ್ಯರು ನಿಗಾ ವಹಿಸಿದ್ದಾರೆ. ಕೇವಲ ನೀರು ಮಾತ್ರ ಸೇವಿಸುತ್ತಿರುವ ಅವರ ಆರೋಗ್ಯ ಜುಲೈ 17ರ ವರೆಗೂ ಸ್ಥಿರವಾಗಿದೆ.
ಮಹದಾಯಿ: ರೈತ ಸೇನೆ ಅಧ್ಯಕ್ಷ ಸೊರಬದಮಠರಿಂದ ಉಪವಾಸ ಸತ್ಯಾಗ್ರಹ
ಮನವೊಲಿಕೆಗೆ ಯತ್ನ: ಈ ಮಧ್ಯೆ ಸೊರಬದಮಠ ಅವರ ಮನವೊಲಿಕೆಗೆ ಬಂದ ಅಧಿಕಾರಿಗಳು ಬರಿಗೈಲಿ ವಾಪಾಸ್ ಆಗಿದ್ದಾರೆ. ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ್ದ ನರಗುಂದ ತಹಶೀಲ್ದಾರ್ ಪ್ರಕಾಶ್ ಹೊಳೆಪ್ಪಗೋಳ, ಡಿವೈಎಸ್ಪಿ ಗುರು ಮತ್ತೂರ, ಸಿಪಿಐ ರಮಾಕಾಂತ ನಿರಶನ ಕೈಬಿಡುವಂತೆ ಮನವಿ ಮಾಡಿದರು. ಆದರೆ, ಬೇಡಿಕೆ ಈಡೇರುವವರೆಗೂ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಅವರ ಸ್ಪಷ್ಟಪಡಿಸಿದ್ದಾರೆ.
'ಇದು ರೈತರ ಅಳಿವು ಉಳಿವಿನ ಪ್ರಶ್ನೆ. ರೈತರು ಉಳಿಯಬೇಕಾದರೆ ಯಾವುದೇ ತ್ಯಾಗಕ್ಕೂ ಸಿದ್ಧರಿರಬೇಕು. ಹೋರಾಟದ ತೀವ್ರತೆ ಹಾಗೂ ಹೋರಾಟಗಾರರ ನಿಲುವನ್ನು ಅರಿತುಕೊಂಡು ಸರ್ಕಾರ ಯೋಜನೆ ಜಾರಿಗೆ ಮುಂದಾಗಲಿ' ಎಂದು ಸೊಬರದಮಠ ಸ್ಪಷ್ಟಪಡಿಸಿದರು.
ಮಠಾಧೀಶರ ಸಭೆ: ಇತ್ತ ಹುಬ್ಬಳ್ಳಿಯಲ್ಲಿ ಮಹದಾಯಿ, ಕಳಸಾ-ಬಂಡೂರಿ ನಾಲಾ ಯೋಜನೆಗೆ ಆಗ್ರಹಿಸಿ ಈ ಭಾಗದ ಜನಪ್ರತಿನಿಧಿಗಳ ಮೇಲೆ ಒತ್ತಡ ಹಾಕುವ ಉದ್ದೇಶದಿಂದ ಉತ್ತರ ಕರ್ನಾಟಕದ ಮಠಾಧೀಶರ ಸಭೆ ನಡೆಸಲು ತಿರ್ಮಾನ ಕೈಗೊಳ್ಳಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಯಬಸವ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ರಾಜ್ಯ ರೈತ ಸಂಘಟನೆಗಳ ಒಕ್ಕೂಟವು ಜುಲೈ 17ರಂದು ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಹಿಂದಿನ ಹೋರಾಟಗಳ ಸಂದರ್ಭದಲ್ಲಿ ನಡೆದ ಘಟನೆಗಳು ಬೇಸರ ತರಿಸಿದ್ದು, ಈ ಕಾರಣದಿಂದ ಕೆಲ ಕಾಲ ಹೋರಾಟದಿಂದ ದೂರ ಉಳಿದಿದ್ದೆ. ಆದರೆ, ಈಗ ಮತ್ತೆ ಹೋರಾಟದಲ್ಲಿ ಧುಮುಕಲು ರೈತರಿಂದ ಒತ್ತಡ ಬರುತ್ತಿದೆ.
ಈ ಕಾರಣದಿಂದ ಉತ್ತರ ಕರ್ನಾಟಕ ಭಾಗದ ಮಠಾಧೀಶರನ್ನು ಸಂಘಟಿಸುವ ಉದ್ದೇಶದಿಂದ ಸಭೆ ಕರೆಯಲು ಶೀಘ್ರದಲ್ಲಿಯೇ ನಿರ್ಧರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.