30 ವರ್ಷಗಳಲ್ಲೇ ಕಾಣದಂಥ ಮಳೆ ಸುರಿಯಲು ಕಾರಣವೇನು?
ಬೆಂಗಳೂರು, ಜನವರಿ 07: ಜನವರಿ ತಿಂಗಳಲ್ಲಿ ಈ ರೀತಿ ಅನಿರೀಕ್ಷಿತ ಮಳೆಯನ್ನು ಕಳೆದ 30 ವರ್ಷಗಳಲ್ಲೇ ಕಂಡಿಲ್ಲ, ದಾಖಲೆಗಳನ್ನು ಕೆದಕಿದರೆ ಎಲ್ಲೋ ಮುನಾರ್ಲ್ಕು ಬಾರಿ ತುಂತುರು ಮಳೆ ಸುರಿದ ಅಂಕಿ ಅಂಶ ಸಿಗುತ್ತದೆ ಎಂದು ಹವಾಮಾನ ಇಲಾಖೆ ಜನವರಿ 6ರಂದು ರಾಜ್ಯದ ಹಲವೆಡೆ ಸುರಿದ ಮಳೆ ಬಗ್ಗೆ ವಿವರ ನೀಡಿದೆ.
ಜೊತೆಗೆ ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವ ಕಾರಣ ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಜನವರಿ 6ರಂದು ಶುರುವಾದ ಮಳೆ ಈಗ ಉತ್ತರ ಒಳನಾಡಿಗೂ ವ್ಯಾಪ್ತಿಸಿದ್ದು, ಜನವರಿ 11ರವರೆಗೂ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.
ಜನವರಿ 8 ರಂದು ಕರಾವಳಿ ಭಾಗದಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು, 9ರಿಂದ ಮಳೆ ದಿಢೀರ್ ತಗ್ಗಲಿದೆ. ಉತ್ತರ ಒಳನಾಡಿನ ಕೆಲವೆಡೆ ಚದುರಿದಂತೆ ಅಲ್ಲಲ್ಲಿ ಮಳೆಯಾಗಲಿದೆ, ಹಲವೆಡೆ ಮೋಡ ಕವಿದ ವಾತಾವರಣ, ಥಂಡಿ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಎಲ್ಲೆಲ್ಲಿ ಮಳೆಯಾಗಲಿದೆ?
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಹಾವೇರಿ, ಕೊಪ್ಪಳ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗದಲ್ಲಿ ಮಳೆಯಾಗಲಿದೆ.

ಮೋಡದ ವಾತಾವರಣದ ಜೊತೆಗೆ ಚಳಿ ಹೆಚ್ಚಳ
ಬೆಂಗಳೂರಲ್ಲಿ ಗುರುವಾರದಂದು 22 ಡಿಗ್ರಿ ಗರಿಷ್ಠ ಉಷ್ಣಾಂಶ, 19 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಇನ್ನು ಮೂರು ದಿನ ತಾಪಮಾನದಲ್ಲಿ ಹೆಚ್ಚಳ ಸಾಧ್ಯತೆಯಿಲ್ಲ.
ಹಾಸನ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ. ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಗುಡಗು ಸಹಿತ ಮಳೆ, ಮೋಡದ ವಾತಾವರಣದ ಜೊತೆಗೆ ಚಳಿ ಹೆಚ್ಚಾಗಲಿದೆ.

ಅನಿರೀಕ್ಷಿತ ಮಳೆಗೆ ಏನು ಕಾರಣ?
ಚಳಿಗಾಲದಲ್ಲಿ ಪೂರ್ವ ದಿಕ್ಕಿನಿಂದ ಬರುವ ಕುಳಿರ್ಗಾಳಿ ಈ ಬಾರಿ ಮಳೆಯನ್ನು ಹೊತ್ತು ತಂದಿದೆ. ಇದು ಅಪರೂಪ. ಜನವರಿ- ಫೆಬ್ರವರಿಯಲ್ಲಿ ಬಿಸಿಲು ಮಳೆ ಬಿದ್ದರೂ ಚಳಿ, ಮೋಡ, ಭಾರಿ ಮಳೆ ಬೀಳುವುದು ಅನಿರೀಕ್ಷಿತ ಎಂದು ಹವಾಮಾನ ಇಲಾಖೆ ಹೇಳಿದೆ. ಬಂಗಾಳ ಕೊಲ್ಲಿಯ ಮೇಲ್ಮೈ ಗಾಳಿ ಪ್ರಬಲವಾಗಿದ್ದು, ದಿನವೀಡಿ ತಾಪಮಾನ ತಗ್ಗಿ, ಥಂಡಿ ವಾತವಾರಣ ಉಂಟಾಗಿದೆ.

ರಾಜ್ಯದ ಹಲವೆಡೆ ಬೆಳೆ ನಾಶ, ಜನಜೀವನ ಅಸ್ತವ್ಯಸ್ತ
ಸಂಕ್ರಾಂತಿ ಮುನ್ನ ಬರುತ್ತಿರುವ ಈ ಅಕಾಲಿಕ ಮಳೆಗೆ ರಾಜ್ಯದ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಮಲೆನಾಡು ಭಾಗದ ಚಿಕ್ಕಮಗಳೂರು, ಹಾಸನ, ಕೊಡಗಿನಲ್ಲಿ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ. ಇನ್ನೊಂದೆಡೆ ಬಯಲು ಸೀಮೆಯ ಚಿತ್ರದುರ್ಗ, ಹೊಸದುರ್ಗ, ಚಳ್ಳಕೆರೆ, ಹಿರಿಯೂರು ಭಾಗದಲ್ಲಿ ನಿರಂತರ ಮಳೆಯಿಂದ ಕೆರೆಗಳು ತುಂಬಿವೆ. ಉತ್ತರ ಒಳನಾಡಿನಲ್ಲೂ ಮಳೆ ಸುರಿಯುತ್ತಿದೆ. ಮಲೆನಾಡು, ಕರಾವಳಿ ಭಾಗದಲ್ಲಿ ಅಡಿಕೆ, ಭತ್ರ, ಕಾಫಿ ಬೆಳೆ ನಾಶವಾಗಿವೆ.












Click it and Unblock the Notifications