ಬೆಂದು ಬಸವಳಿದ ಕರ್ನಾಟಕಕ್ಕೆ ಅಲ್ಲಲ್ಲಿ ಮಳೆ ಸಿಂಚನ
ಬೆಂಗಳೂರು, ಮೇ, 04: ಬಿರು ಬೇಸಿಗೆಗೆ ತತ್ತರಿಸಿದ್ದ ಕರ್ನಾಟಕದ ಅಲ್ಲಲ್ಲಿ ಮಳೆರಾಯ ತಂಪೆರೆದಿದ್ದಾನೆ. ಮಂಗಳವಾರ ರಾತ್ರಿ ರಾಜ್ಯದ ಹಲವಾರು ಭಾಗಗಳಲ್ಲಿ ಮಳೆ ಸುರಿದಿದೆ.
ಶಿವಮೊಗ್ಗ, ಚಿತ್ರದುರ್ಗ, ಹಾಸನ, ಮಡಿಕೇರಿ, ದಾವಣಗೆರೆಯಲ್ಲಿ ಮಳೆಯಾಗಿದೆ. ಮಡಿಕೇರಿ ಸೇರಿದಂತೆ ಕೊಡಗು ಜಿಲ್ಲೆಯ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ. ಶಿವಮೊಗ್ಗದಲ್ಲಿ ಮಳೆ ಆರ್ಭಟಕ್ಕೆ ಮರಗಳು ಧರೆಗುಳಿವೆ.[ನಿರೀಕ್ಷಿಸಿ ! ಬೆಂಗಳೂರಲ್ಲಿ ಮಾಯದಂಥ ಮಳೆ ಬೀಳಲಿದೆ]
ಚಿತ್ರದುರ್ಗ ಜಿಲ್ಲೆ ಭರಮಸಾಗರ ಸಮೀಪದ ಗೊಲ್ಲರಹಟ್ಟಿ ಬಳಿ ಸಿಡಿಲು ಬಡಿದು ಹಂಪಳರಾಜು (27), ಸಿಡಿಲು ಬಡಿದು ಹಿರಿಯೂರು ತಾಲೂಕಿನ ಎಂ.ಡಿ.ಕೋಟೆಯಲ್ಲಿ ಲಕ್ಷ್ಮಿ (36) ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಮಹಾಬಲ (45) ಎಂಬುವವರು ಸಾವನ್ನಪ್ಪಿದ್ದಾರೆ.
ಭದ್ರಾವತಿ, ಸಾಗರ ತಾಲೂಕಿನ ಆನಂದಪುರದಲ್ಲಿ ಮಳೆಯಾಗಿದೆ. ಹರಪನಹಳ್ಳಿಯಲ್ಲಿ ಮಂಗಳವಾರ ರಾತ್ರಿ ಆಲಿಕಲ್ಲು ಮಳೆ ಬಿದ್ದಿದೆ. ಚಿಕ್ಕಮಗಳೂರು ತಾಲೂಕಿನ ಹಿರೇಕೊಳಲೆ, ಆವತಿ, ಮಲ್ಲಂದೂರು, ವಸ್ತಾರೆ, ಆಲ್ದೂರು ಮತ್ತಿತರ ಕಡೆಗಳಲ್ಲೂ ಮಳೆ ಬಿದ್ದಿದ್ದು ಕಾಫಿ, ಮೆಣಸು, ಅಡಿಕೆ, ತೆಂಗು ಬೆಳೆಗಳಿಗೆ ಕೊಂಚ ಆಸರೆ ಸಿಕ್ಕಂತಾಗಿದೆ.[ವಾಡಿಕೆಗಿಂತ ಹೆಚ್ಚು ಸುರಿಯಲಿದೆ ಮುಂಗಾರು ಮಳೆ]
ಪೂಜೆ-ಹವನ:ರಾಜ್ಯದ ವಿವಿಧೆಡೆ ಮಳೆಗೆ ಪ್ರಾರ್ಥಿಸಿ ಪೂಜೆ-ಹವನಗಳು ನಡೆಯುತ್ತಿವೆ. ಜಲಾಶಯಗಳು ಬತ್ತಿದ ಸ್ಥಿತಿ ತಲುಪಿದ್ದು ವಾರದಲ್ಲಿ ಸಾಕಷ್ಟು ಮಳೆಯಾಗದಿದ್ದರೆ ಬೇಸಿಗೆ ಇನ್ನಷ್ಟು ಭೀಕರ ಆಗಲಿದೆ.