ಸಂಸತ್ತಿನಿಂದ ಅನರ್ಹಗೊಳ್ಳಲು ಕಾರಣವಾದ ಜಾಗದಿಂದಲೇ ರಾಹುಲ್ ಪ್ರಚಾರ ಆರಂಭ: ಕುತೂಹಲ ಕೆರಳಿಸಿದ ಕಾಂಗ್ರೆಸ್ ನಡೆ
ಬೆಂಗಳೂರು, ಮಾರ್ಚ್ 29: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ( Rahul Gandhi ) ಅವರು ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆ ( Karnataka Assembly Elections 2023 ) ಪ್ರಚಾರವನ್ನು ಮುಂದಿನ ತಿಂಗಳು ಪ್ರಾರಂಭಿಸಲಿದ್ದಾರೆ. ಪ್ರತಿಭಟನೆಯ ಸಂಕೇತವಾಗಿ, ಏಪ್ರಿಲ್ 5 ರಂದು ಕೋಲಾರದಲ್ಲಿ ರಾಹುಲ್ ಗಾಂಧಿ ಅವರು 'ಸತ್ಯಮೇವ ಜಯತೇ' ಅಭಿಯಾನವನ್ನು ಕೈಗೊಳ್ಳಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ರಾಹುಲ್ ಗಾಂಧಿ ಅವರು ಕೋಲಾರದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಉಪನಾಮೆಯ ವಿವಾದವನ್ನು ಹುಟ್ಟುಹಾಕಿದ ಜಾಗವಿದು. ಇದು ರಾಹುಲ್ ಗಾಂಧಿ ಅವರನ್ನು ಎರಡು ವರ್ಷಗಳ ಜೈಲು ಶಿಕ್ಷೆಗೆ ಈಡು ಮಾಡಿದೆ ಹಾಗೂ ಸಂಸತ್ತಿನಿಂದ ಅನರ್ಹತೆಗೆ ಕಾರಣವಾಗಿದೆ.

2019 ರ ಚುನಾವಣೆಗೂ ಮುನ್ನ ಕೋಲಾರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ದೇಶದಿಂದ ಪರಾರಿಯಾಗಿರುವ ಉದ್ಯಮಿಗಳಾದ ಲಲಿತ್ ಮೋದಿ ಮತ್ತು ನೀರವ್ ಮೋದಿಯನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. 'ಎಲ್ಲಾ ಕಳ್ಳರಿಗೂ ಮೋದಿ ಎಂಬ ಸಾಮಾನ್ಯ ಉಪನಾಮ ಹೇಗೆ ಬರುತ್ತದೆ' ಎಂದು ಹೇಳಿದ್ದರು.
ಇದು ಹಿಂದುಳಿದ ವರ್ಗಗಳಿಗೆ ಮಾಡಿದ ಅವಮಾನ ಎಂದು ಬಿಜೆಪಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಗುಜರಾತ್ನ ಬಿಜೆಪಿ ಪಕ್ಷದ ಮುಖಂಡ ಪೂರ್ಣೇಶ್ ಮೋದಿ ಪ್ರಕರಣ ದಾಖಲಿಸಿದ್ದರು.
ತಮ್ಮ ಹೇಳಿಕೆಗೆ ಕ್ಷಮೆಯಾಚಿಸಲು ರಾಹುಲ್ ಗಾಂಧಿ ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಅವರು ಲೋಕಸಭೆಯಿಂದ ಅನರ್ಹಗೊಂಡಿದ್ದಾರೆ. ಇದು ಪ್ರತಿಪಕ್ಷಗಳ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಈ ಘಟನೆಯನ್ನು ದೇಶದ 18 ವಿರೋಧ ಪಕ್ಷಗಳ ನಾಯಕರು ಖಂಡಿಸಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಈ ಬೆಳವಣಿಗೆಯ ಸದುಪಯೋಗಪಡಿಸಿಕೊಳ್ಳು ನೋಡುತ್ತಿದೆ. ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಪ್ರತಿಪಕ್ಷಗಳನ್ನು ಒಗ್ಗೂಡಿಸಲು ಇದು ಕಾರಣವಾಗಲಿದೆ ಎಂಬ ಮಾತುಗಳು ಕೇಳಿಬಂದಿವೆ.
ಈ ಕಾರಣದಿಂದಲೇ ಕೋಲಾರದಿಂದ ಪ್ರಚಾರವನ್ನು ಆರಂಭಿಸಲು ರಾಹುಲ್ ಗಾಂಧಿ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ತಮ್ಮ ಅನರ್ಹತೆಗೆ ಕಾರಣವಾದ ಜಾಗದಿಂದ ಪ್ರವಾರವನ್ನು ಆರಂಭಿಸುವುದು ಪಕ್ಷಕ್ಕೆ ಲಾಭ ತಂದು ಕೊಡಬಹುದು ಎಂದು ಕಾಂಗ್ರೆಸ್ ನಂಬಿದೆ.
ಇಂದು ಮುಂಜಾನೆ, ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭೆ ಚುನಾವಣಾ ದಿನಾಂಕವನ್ನು ಘೋಷಿಸಿದೆ. ಆಡಳಿತಾರೂಢ ಬಿಜೆಪಿ ಸತತ ಎರಡನೇ ಅವಧಿಗೆ ಅಧಿಕಾರದ ನಿರೀಕ್ಷೆಯಲ್ಲಿದೆ.

2018ರಲ್ಲಿ ಎಚ್ಡಿ ಕುಮಾರಸ್ವಾಮಿ ಅವರ ಜನತಾದಳದೊಂದಿಗೆ ಸೇರಿ ಕರ್ನಾಟಕದಲ್ಲಿ ಸರ್ಕಾರ ರಚಿಸಿದ್ದ ಕಾಂಗ್ರೆಸ್ ಒಂದು ವರ್ಷದ ನಂತರ ಅಧಿಕಾರದಿಂದ ಹೊರಗುಳಿಯಿತು. ಶಾಸಕರು ಪಕ್ಷವನ್ನು ಕೈಬಿಟ್ಟು ಹೋಗಿದ್ದರಿಂದ ಮೈತ್ರಿ ಸರ್ಕಾರ ಪತನವಾಯಿತು.
ಈ ಬಾರಿಯೂ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ. ಮೈತ್ರಿಯ ಬಗ್ಗೆ ಹೇಳಿಕೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಂಡರೆ ಅಚ್ಚರಿ ಪಡಬೇಕಿಲ್ಲ ಎಂದು ತಿಳಿಸಿದ್ದಾರೆ.
ಈಗಾಗಲೇ ವರುಣಾದಿಂದ ಟಿಕೆಟ್ ಪಡೆದಿರುವ ಸಿದ್ದರಾಮಯ್ಯ ಕೋಲಾರದಿಂದಲೂ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರನ್ನು ಕೋಲಾರಕ್ಕೆ ಕರೆಸಿ ಪ್ರಚಾರ ಸಭೆಯನ್ನು ಮಾಡುವುದು ಉದ್ದೇಶವಾಗಿದೆ ಎಂದು ತಿಳಿದಬಂದಿದೆ. ಈ ಸಭೆ ಭಾರೀ ಪ್ರಮಾಣದ ಜನರನ್ನು ಸೇರಿಸುವುದು ಕಾಂಗ್ರೆಸ್ನ ಪ್ಲಾನ್ ಆಗಿದೆ ಎಂದು ಪಕ್ಷಗಳು ಮೂಲಗಳು ತಿಳಿಸಿವೆ.












Click it and Unblock the Notifications