Rahul Gandhi Kolar Rally: ಜೈ ಭಾರತ್ ಸಮಾವೇಶ: ಚಿನ್ನದ ನಾಡಿನಲ್ಲಿ ರಾಹುಲ್ ಗಾಂಧಿ ಅಬ್ಬರದ ಭಾಷಣ
ಕೋಲಾರ ಏಪ್ರಿಲ್ 16: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ 200 ಯುನಿಟ್ ವಿದ್ಯುತ್, ಅನ್ನಭಾಗ್ಯ ಯೋಜನೆ ಅಡಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುವುದು ಎಂದು ರಾಹುಲ್ ಗಾಂಧಿ ಭರವಸೆ ನೀಡಿದರು.
ಚಿನ್ನದ ನಾಡು ಕೋಲಾರದಲ್ಲಿ ಇಂದು ಜೈ ಭಾರತ್ ಸಮಾವೇಶವನ್ನು ಉದ್ದೇಶಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಷಣ ಮಾಡಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಲವಾರು ಭರವಸೆಯನ್ನು ಈಡೇರಿಸುವುದಾಗಿ ರಾಹುಲ್ ಗಾಂಧಿ ಹೇಳಿದರು.

ಪ್ರತಿ ಕುಟುಂಬಕ್ಕೆ 200 ಯುನಿಟ್ ವಿದ್ಯುತ್ ಉಚಿತ, ಪ್ರತಿಯೊಂದು ಕುಟುಂಬಕ್ಕೆ ಅನ್ನಭಾಗ್ಯ ಯೋಜನೆ ಅಡಿ ಅಕ್ಕಿ ನೀಡಲಾಗುವುದು ಎಂದು ರಾಹುಲ್ ಗಾಂಧಿ ಭರವಸೆಯನ್ನು ನೀಡಿದ್ದಾರೆ. ಅಲ್ಲದೆ ಪ್ರತಿ ಕುಟುಂಬದ ಯಜಮಾನನಿಗೆ ಎರಡು ಸಾವಿರ ರೂಪಾಯಿ ನೀಡಲಾಗುತ್ತದೆ. ನಾವು ಕೊಟ್ಟಿರುವ ಭರವಸೆಯನ್ನು ಕೂಡಲೇ ಜಾರಿಗೆ ತರುತ್ತೇವೆ ಎಂದು ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
ಪಕ್ಷ ಅಧಿಕಾರಕ್ಕೆ ಬಂದಾಗ ಸಿಎಂ ಬಗ್ಗೆ ನಾಯಕರು ನಿರ್ಧಾರಿಸುತ್ತಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲೇಬೇಕು ಎಂದರು.
ದೇಶದ ವಿಮಾನ ನಿಲ್ದಾಣಗಳನ್ನು ಅದಾನಿಗೆ ಕೊಡುತ್ತಿದ್ದಾರೆ. ಮುಂಬೈ ಏರ್ಪೋರ್ಟ್ ಕೂಡ ಅದಾನಿಗೆ ಬಿಜೆಪಿ ಅವರು ಕೊಡುತ್ತಿದ್ದಾರೆ. ಮುಂಬೈ ಅದಾನಿ ವಿಚಾರವಾಗಿ ನಾನು ಪಾರ್ಲಿಮೆಂಟ್ನಲ್ಲಿ ಮಾತನಾಡಿದ್ದೆ. ಮಾತನಾಡುವ ಮುನ್ನ ನನ್ನ ಮೈಕ್ ಆಫ್ ಮಾಡಿಸಿದ್ರು. ಇದೆನೆಲ್ಲಾ ಅದಾನಿಗೆ ಯಾಕೆ ಮಾಡುತ್ತಿದ್ದಾರೆ? ಈ ಬಗ್ಗೆ ಪ್ರಶ್ನೆ ಮಾಡಿದವರ ಮೇಲೆ ಇಡಿ ಅಸ್ತ್ರ ಪ್ರಯೋಗ ಮಾಡುತ್ತಿದ್ದಾರೆ ಎಂದು ಕೋಲಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುಡುಗಿದ್ದಾರೆ.
ನನ್ನನ್ನು ಬಗ್ಗಿಸಲು ಬಿಜೆಪಿ ಅವರು ಸಾಕಷ್ಟು ಪ್ರಯತ್ನ ಮಾಡಿದರು. ಆದರೆ ನಾನು ಈ ಬಗ್ಗೆ ಹೆದರುವುದಿಲ್ಲ. ಮೋದಿ ಅವರೇ ನಿಮಗೂ ಅದಾನಿಗೂ ಏನ್ ಸಂಬಂಧ? ಎಲ್ಲಿವರೆಗೂ ಈ ಪ್ರಶ್ನೆಗೆ ಉತ್ತರ ಸಿಗುವುದಿಲ್ಲವೋ ಅಲ್ಲಿವರೆಗೂ ನಾನು ಹೋರಾಟ ಮಾಡುತ್ತೇನೆ. ನನ್ನನ್ನು ಜೈಲಿಗಟ್ಟಲು ಪ್ರಯತ್ನಿಸಿದರೂ ನಾನು ಬಗ್ಗುವುದಿಲ್ಲ ಎಂದು ರಾಹುಲ್ ಗಾಂಧಿ ಆಕ್ರೋಶಗೊಂಡರು.
ಸಾವಿರಾರು ಕೋಟಿ ರೂಪಾಯಿಗಳು ಅದಾನಿ ಅಕೌಂಟಿಗೆ ಹೋಗುತ್ತಿದೆ. ಅದಾನಿ ಮೋದಿ ಭ್ರಷ್ಟಾಚಾರಕ್ಕೆ ಚಿಹ್ನೆ ಆಗಿದ್ದಾರೆ. ಅದಾನಿ ನಕಲಿ ಕಂಪನಿಗಳಲ್ಲಿ ಚಿನ್ನದ ಡೈರೆಕ್ಟರ್ ಆಗಿದ್ದಾರೆ. ಮೋದಿ ಓಬಿಸಿಗಳ ಬಗ್ಗೆ ಮಾತಣಾಡುತ್ತಿದ್ದಾರೆ. 2011ರ ಜನಗಣತಿಯನ್ನು ಮೋದಿ ಬಹಿರಂಗಪಡಿಸಲಿ. ಆನಂತರ ನಾವು ಮಾತನಾಡಬಹುದು ಓಬಿಸಿ ವಿಚಾರದಲ್ಲಿ ಯಾರು ಮೋಸ ಮಾಡುತ್ತಿದ್ದಾರೆ ಎಂದು ಎಂದು ರಾಹುಲ್ ಸವಾಲ್ ಹಾಕಿದರು.
ಚಿನ್ನದ ನಾಡು ಕೋಲಾರದಲ್ಲಿ ಡಿಕೆ ಶಿವಕುಮಾರ್ ಹೇಳಿಕೆ
ಕಮಲ ಕೆಸರಿನಲ್ಲಿ ಇದ್ದರೆ ಚಂದ, ದಾನಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚಂದ ಎಂದು ಕೋಲಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು. ಜೈ ಭಾರತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, 'ಮೇ 10 ಬದಲಾವಣೆ ತರುವ ದಿನ. ಬಿಜೆಪಿ ಅನ್ನು ಹೊಡೆದುರುಳಿಸುವಂತ ದಿನ. ಅಬಿವೃದ್ಧಿ ಮಾಡುವಂತ ದಿನ. ನಿಮ್ಮ ಸಮಸ್ಯೆಗಳನ್ನು ದೂರ ಮಾಡುವ ದಿನ. ಬಡವರ ಅನ್ನ ಭಾಗ್ಯ ನಿಶ್ಚಿಸುವ ದಿನ. ಈ ದಿನ ನಿಮ್ಮ ಕೈಯಲ್ಲಿದೆ. ಹೀಗಾಗಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವುದು ನಿಮ್ಮ ಕೈಯಲ್ಲಿದೆ. ಬಿಜೆಪಿ ಅಧಿಕಾರದಲ್ಲಿ ಏನಾಗುತ್ತಿದೆ ಎಂದು ನೀವೆಲ್ಲಾ ನೋಡುತ್ತಿದ್ದೀರಿ. ಇನ್ನೂ ಯಾರೆಲ್ಲಾ ಬರಲಿದ್ದಾರೆ ಎನ್ನುವುದನ್ನು ನೋಡುತ್ತಿರಿ' ಎಂದು ಡಿಕೆ ಶಿವಕುಮಾರ್ ಹೇಳಿದರು.












Click it and Unblock the Notifications