ಕೊನೆಗೆ ಸಿಕ್ತು ನಿಗಮ ಮಂಡಳಿಗೆ ಹೈಕಮಾಂಡ್ ಅಸ್ತು!
ಬೆಂಗಳೂರು, ಅಕ್ಟೋಬರ್. 25 : ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕಕ್ಕೆ ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ನೀಡಿದೆ. 20 ಶಾಸಕರು ಮತ್ತು 50ಕ್ಕೂ ಹೆಚ್ಚು ಕಾರ್ಯಕರ್ತರ ಹೆಸರು ನಿಗಮ-ಮಂಡಳಿ ಪಟ್ಟಿಯಲ್ಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಪಟ್ಟಿಯನ್ನು ಹಿಡಿದು ಭಾನುವಾರ ದೆಹಲಿಗೆ ತೆರೆಳಿದ್ದರು. ಸೋಮವಾರ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್, ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ನಿಗಮ ಮಂಡಳಿಗಳ ನೇಮಕದ ಪಟ್ಟಿಗೆ ಅಂತಿಮ ಒಪ್ಪಿಗೆ ನೀಡಿದ್ದಾರೆ. [ನಿಗಮ-ಮಂಡಳಿ ಸ್ಥಾನಕ್ಕೆ ರಾಹುಲ್ ಗಾಂಧಿ ಹೆಸರಲ್ಲಿ ನಕಲಿ ಪತ್ರ]
ಸಚಿವ ಸ್ಥಾನ ಸಿಗದೇ ಅಸಮಾಧಾನಗೊಂಡಿರುವ 20 ಶಾಸಕರಿಗೆ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಲಾಗುತ್ತಿದೆ.ಈ ಮೂಲಕ ಅವರನ್ನು ಸಮಾಧಾನಪಡಿಸಿ ಮುಂದಿನ ಚುನಾವಣೆಗೆ ಸಜ್ಜುಗೊಳಿಸಲಾಗುತ್ತಿದೆ.
ಪಕ್ಷ ಸಂಘಟನೆಗೆ ದುಡಿದ 50ಕ್ಕೂ ಹೆಚ್ಚು ಕಾರ್ಯಕರ್ತರಿಗೂ ಅವಕಾಶ ನೀಡಲಾಗುತ್ತದೆ. ಶಾಸಕರಿಗೆ ನಿಗಮ ಮಂಡಳಿ ಅವಕಾಶ ನೀಡುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ವಿರೋಧ ವ್ಯಕ್ತಪಡಿಸಿದ್ದರು.
ಆದ್ದರಿಂದ, ಶಾಸಕರು ಮತ್ತು ನಿಷ್ಠಾವಂತ ಕಾರ್ಯಕರ್ತರನ್ನು ಸೇರಿಸಿ ಪಟ್ಟಿಯನ್ನು ತಯಾರು ಮಾಡಲಾಗಿತ್ತು. ಈ ಪಟ್ಟಿಗೆ ಹೈಕಮಾಂಡ್ ಒಪ್ಪಿಗೆ ಸಿಕ್ಕಿದೆ. ಇನ್ನು ಒಂದೂವರೆ ವರ್ಷದಲ್ಲಿ ಚುನಾವಣೆ ಎದುರಾಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಪಟ್ಟಿ ಸಿದ್ದಪಡಿಸಲಾಗಿದೆ.
ಅಧಿಕಾರ ಸಿಗದೇ ಅಸಮಾಧಾನಗೊಂಡಿರುವ ಶಾಸಕರು ಮತ್ತು ಕಾರ್ಯಕರ್ತರಿಗೆ ಅವಕಾಶ ನೀಡಿ ಅಸಮಾಧಾನ ಶಮನಗೊಳಿಸುವ ಪ್ರಯತ್ನ ನಡೆಸಲಾಗಿದೆ. ಇನ್ನು ಯಾರ್ಯಾರಿಗೆ ಮಂಡಳಿಯಲ್ಲಿ ಸ್ಥಾನ ನೀಡುತ್ತಾರೆ ಎಂಬುವುದು ಇನ್ನು ಹೆಸರುಗಳು ಬಹಿರಂಗವಾಗಿಲ್ಲ.