ಕಾರಟಗಿಯಲ್ಲಿ ರಾಹುಲ್ ಗಾಂಧಿ ಭಾಷಣ, 10 ಪ್ರಮುಖ ಹೇಳಿಕೆಗಳು
ಕೊಪ್ಪಳ, ಫೆಬ್ರವರಿ 11 : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕ ಪ್ರವಾಸದಲ್ಲಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಅವರು ಇಂದು ರೋಡ್ ಶೋ ನಡೆಸಿದರು. ತಾವರಗೇರಾ ಮತ್ತು ಕಾರಟಗಿಯಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದರು.
ಭಾನುವಾರ ಬೆಳಗ್ಗೆ ರಾಹುಲ್ ಗಾಂಧಿ ಕುಕನೂರ ಪ್ರವಾಸಿ ಮಂದಿರದಿಂದ ಹೊರಟರು. ರಾಹುಲ್ ಗಾಂಧಿ ಅವರನ್ನು ನೋಡಲು ನೂರಾರು ಜನರು ಪ್ರವಾಸಿ ಮಂದಿರದ ಮುಂದೆ ಜಮಾಯಿಸಿದ್ದರು.
ರಾಹುಲ್ ಗಾಂಧಿ ರಾಜ್ಯ ಪ್ರವಾಸ : ಕಾರ್ಯಕ್ರಮಗಳ ಪಟ್ಟಿ
ವಿಶೇಷ ಬಸ್ ಮೂಲಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ರೋಡ್ ಶೋ ಆರಂಭಿಸಿದರು. ಪುಟ್ಟ ಬಾಲಕನನ್ನು ನೋಡಿ ಬಸ್ ನಿಲ್ಲಿಸಿದ ರಾಹುಲ್ ಬಾಲಕರನ್ನು ಎತ್ತಿಕೊಂಡು ಫೋಟೋ ತೆಗೆಸಿಕೊಂಡರು.
ಚಿತ್ರಗಳು : ಕರ್ನಾಟಕದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ
ತಾವರಗೇರಾದಲ್ಲಿ ಬಸ್ ನಿಲ್ಲಿಸಿ ಕೇವಲ 5 ನಿಮಿಷ ಭಾಷಣ ಮಾಡಿ, ಮತ್ತೆ ಬಸ್ಸನ್ನು ಏರಿದರು. ನಂತರ ಕಾರಟಗಿಯಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ರಾಹುಲ್ ಹೇಳಿದ 10 ಹೇಳಿಕೆಗಳು ಇಲ್ಲಿವೆ...
ಯಾರಿಗೆ ಸಿಕ್ಕಿತು ಉದ್ಯೋಗ?
ನರೇಂದ್ರ ಮೋದಿ ಅವರು 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದರು. ಈ ಕುರಿತು ಸಂಸತ್ತಿನಲ್ಲಿ ನಾನು ಪ್ರಶ್ನೆ ಮಾಡಿದೆ. ಆದರೆ, ಅದಕ್ಕೆ ಉತ್ತರ ಕೊಡುವ ಬದಲು ಅವರು ಕಾಂಗ್ರೆಸ್ ಪಕ್ಷವನ್ನು ದೂರುತ್ತಾರೆ.
ಫ್ರಾನ್ಸ್ಗೆ ತೆರಳಿ ಒಪ್ಪಂದ ರದ್ದು
ನರೇಂದ್ರ ಮೋದಿ ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಅವರು ಸ್ವತಃ ಫ್ರಾನ್ಸ್ಗೆ ಹೋಗಿ ಈ ಹಿಂದಿನ ಯುಪಿಎ-2 ಸರ್ಕಾರ ಮಾಡಿದ್ದ ಒಪ್ಪಂದವನ್ನು ರಕ್ಷಣಾ ಸಚಿವರಿಗೂ ತಿಳಿಯದಂತೆ ರದ್ದು ಮಾಡುತ್ತಾರೆ ಎಂದು ರಾಹುಲ್ ಆರೋಪ ಮಾಡಿದರು.
ನಿಮ್ಮ ಪಕ್ಕದಲ್ಲಿ ಯಾರಿದ್ದಾರೆ ನೋಡಿ
ನರೇಂದ್ರ ಮೋದಿ ಅವರು ಕರ್ನಾಟಕದ ಭ್ರಷ್ಟಾಚಾರದ ಬಗ್ಗೆ ಮೋದಿ ಮಾತನಾಡುತ್ತಾರೆ. ಅವರ ಪಕ್ಕದಲ್ಲೇ ಭ್ರಷ್ಟಾಚಾರದಲ್ಲಿ ವಿಶ್ವ ದಾಖಲೆ ಬರೆದ ಯಡಿಯೂರಪ್ಪ ಇರುವುದನ್ನು ಮರೆಯುತ್ತಾರೆ ಎಂದು ಲೇವಡಿ ಮಾಡಿದರು.
ಬಿಜೆಪಿ ಸರ್ಕಾರದ ಹಗರಣ
ಕರ್ನಾಟಕದಲ್ಲಿ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಗಣಿ, ಭೂ, ವೈದ್ಯಕೀಯ ಹಗರಣಗಳಲ್ಲಿ ಭಾಗಿಯಾಗಿತ್ತು. ನಮ್ಮ ಕಾಂಗ್ರೆಸ್ ಸರ್ಕಾರದಲ್ಲಿ ಒಂದೇ ಒಂದು ಲೋಪವೂ ಇಲ್ಲ ಎಂದು ಹೇಳಿದರು.
ನಿಮ್ಮ ಬಳಿ ಸಮಯ ಕಡಿಮೆ ಇದೆ
ನರೇಂದ್ರ ಮೋದಿ ಅವರೇ ನಿಮ್ಮ ಬಳಿ ಸಮಯ ಕಡಿಮೆ ಇದೆ. ಮಾತನ್ನು ನಿಲ್ಲಿಸಿ. ಕೆಲಸ ಮಾಡಿ. ಮುಂದಿನ ಚುನಾವಣೆ ಸಮಯದಲ್ಲಿ ನೀವು ಏನು ಕೆಲಸ ಮಾಡಿದ್ದೀರಿ? ಎಂದು ದೇಶದ ಜನರಿಗೆ ಉತ್ತರ ನೀಡಬೇಕು ಎಂದು ರಾಹುಲ್ ಹೇಳಿದರು.
5 ವರ್ಷದಲ್ಲಿ ಕೆಲಸ ಮಾಡಿದ್ದೇವೆ
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಡವರು, ಶ್ರಮಿಕರನ್ನು ಜೊತೆಯಾಗಿ ಕರೆದುಕೊಂಡು ಹೋಗುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ನಾವು ಇನ್ನೂ ಹೆಚ್ಚು ಕೆಲಸ ಮಾಡಲಿದ್ದೇವೆ ಎಂದು ಭರವಸೆ ನೀಡುತ್ತೇನೆ.
ಒಂದು ಗಂಟೆ ಭಾಷಣ ಮಾಡಿದರು
ಲೋಕಸಭೆಯಲ್ಲಿ ಮೋದಿ ಒಂದು ಗಂಟೆ ಭಾಷಣ ಮಾಡಿದರು. ಆದರೆ, ದೇಶದ ಅಭಿವೃದ್ಧಿಗೆ ಅವರು ಏನು ಮಾಡಿದ್ದಾರೆ? ಎಂದು ಹೇಳಲಿಲ್ಲ. ಕೇವಲ ಕಾಂಗ್ರೆಸ್ ಪಕ್ಷವನ್ನು ದೂಷಿಸುತ್ತಾರೆ.
ರೈತರ ಸಾಲ ಮನ್ನಾ ಮಾಡಿ
ರೈತರ ಸಾಲವನ್ನು ಒಂದು ರೂಪಾಯಿ ಮನ್ನಾ ಮಾಡಿಲ್ಲ. ಆದರೆ, ಉದ್ಯಮಿಗಳ ಸಾಲವನ್ನು ಮನ್ನಾ ಮಾಡಿದಿರಿ. ನಾನು ಸಿದ್ದರಾಮಯ್ಯ, ಖರ್ಗೆ ಅವರನ್ನು ಕರೆದು ಚರ್ಚೆ ಮಾಡಿದೆ. ನಂತರ ರಾಜ್ಯದಲ್ಲಿ ರೈತರ ಸಾಲ ಮನ್ನಾ ಮಾಡಲಾಯಿತು.
ಉದ್ಯಮಿಗಳ ಪರವಾದ ಸರ್ಕಾರ
ಕೇಂದ್ರ ಸರ್ಕಾರಕ್ಕೆ ಹಣಕಾಸಿನ ಕೊರತೆ ಇಲ್ಲ. ಆದರೆ, ರೈತರ ಸಾಲವನ್ನು ಮಾತ್ರ ಮನ್ನಾ ಮಾಡುತ್ತಿಲ್ಲ. ಕೇಂದ್ರದ್ದು ಉದ್ಯಮಿಗಳ ಪರವಾದ ಸರ್ಕಾರ ಎಂದು ಆರೋಪಿಸಿದರು.
ನಿಮ್ಮ ಅಕ್ಕ-ಪಕ್ಕ ನೋಡಿ
ಮೋದಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ನಿಮ್ಮ ಪಕ್ಕದಲ್ಲಿ ಯಡಿಯೂರಪ್ಪ ಕೂತಿದ್ದಾರೆ. ಜೈಲಿಗೆ ಹೋಗಿ ಬಂದ ಸಚಿವರು ಇದ್ದಾರೆ. ಅವರ ಕಡೆ ಒಮ್ಮೆ ನೋಡಿ ಎಂದು ವ್ಯಂಗ್ಯವಾಡಿದರು.