ಗುಡ್ ನ್ಯೂಸ್; ಸರ್ಕಾರದಿಂದಲೇ ಪೌರಕಾರ್ಮಿಕರಿಗೆ ವೇತನ: ಮಹತ್ವ ಮಾಹಿತಿ ನೀಡಿದ ರಹೀಂ ಖಾನ್
ಬೆಳಗಾವಿ, ಡಿಸೆಂಬರ್ 12: ರಾಜ್ಯದ ನಗರಸಭೆ, ಪುರಸಭೆ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಪೌರಕಾರ್ಮಿಕರಿಗೆ ಸರ್ಕಾರದಿಂದಲೇ ವೇತನ ಪಾವತಿಸುವ ಕುರಿತಂತೆ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಹೇಳಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿ ಗುರುವಾರ ವಿಧಾನಸಭೆಯಲ್ಲಿ ತೇರದಾಳ ಶಾಸಕ ಸಿದ್ದು ಸವದಿ ಅವರ ಗಮನಸೆಳೆಯುವ ಸೂಚನೆಗೆ ಉತ್ತರಿಸಿ, ಕಳೆದ 2022 ಕ್ಕೂ ಮುನ್ನ ನಗರ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರಿಗೆ ಎಸ್ಎಫ್ಸಿ ಅನುದಾನದಡಿ ವೇತನ ಪಾವತಿಸಲಾಗುತ್ತಿತ್ತು. ಆದರೆ ಸ್ಥಳೀಯ ಸಂಸ್ಥೆಗಳು ಉತ್ತಮವಾಗಿ ತೆರಿಗೆ ಸಂಗ್ರಹಿಸಿ, ಆತ್ಮ ನಿರ್ಬರವಾಗಬೇಕು, ಆರ್ಥಿಕವಾಗಿ ಸಬಲತೆಯನ್ನು ಸಾಧಿಸಬೇಕು ಎಂಬ ಉದ್ದೇಶದಿಂದ ಶೇ. 40 ರಷ್ಟು ಸರ್ಕಾರದಿಂದ ಹಾಗೂ ಶೇ. 60 ರಷ್ಟು ನಗರ ಸ್ಥಳೀಯ ಸಂಸ್ಥೆಗಳೇ ತಮ್ಮ ಆದಾಯದ ಅನುದಾನದಿಂದ ಪಾವತಿಸುವಂತೆ ಸೂಚನೆ ನೀಡಲಾಗಿರುತ್ತದೆ ಎಂದರು.

ಶಾಸಕ ಸಿದ್ದು ಸವದಿ ಅವರು ಪ್ರತಿಕ್ರಿಯಿಸಿ, ನಗರ, ಸ್ಥಳೀಯ ಸಂಸ್ಥೆಗಳಿಗೆ ಸ್ವಚ್ಛತೆ, ರಸ್ತೆ, ಚರಂಡಿ, ಸೇತುವೆ ಮುಂತಾದ ಕಾಮಗಾರಿಗಳಿಗೆ ಅನುದಾನದ ಅವಶ್ಯಕತೆ ಹೆಚ್ಚಿರುತ್ತದೆ, ಅಲ್ಲದೆ ತೆರಿಗೆ ಸಂಗ್ರಹ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು, ಇವೆಲ್ಲವನ್ನೂ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಪೌರಕಾರ್ಮಿಕರಿಗೆ ಸರ್ಕಾರದಿಂದಲೇ ವೇತನ ಪಾವತಿಯಾಗಬೇಕು ಎಂದು ಒತ್ತಾಯಿಸಿದರು. ಈ ಕುರಿತಂತೆ ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ರಹೀಂ ಖಾನ್ ಭರವಸೆ ನೀಡಿದರು.
ಬೀದರ ಜಿಲ್ಲೆಯಲ್ಲಿ ಶರಣ ಸ್ಮಾರಕಗಳ ಗುರುತಿಸಿ : ಹೆಚ್.ಕೆ.ಪಾಟೀಲ
ಬೀದರ ಜಿಲ್ಲೆಯಲ್ಲಿ ಶರಣ ಸ್ಮಾರಕ ಗುರುತಿಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಸ್ತಾವನೆ ಕಳುಹಿಸಿದಲ್ಲಿ ಪರಿಗಣಿಸಲಾಗುವುದು ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಾಹರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್ ಕೆ ಪಾಟೀಲ ಅವರು ಹೇಳಿದರು. ಪರಿಷತ್ತಿನಲ್ಲಿ ಡಿ.11ರಂದು ಸದಸ್ಯರಾದ ಡಾ.ಎಂ.ಜಿ.ಮುಳೆ ಅವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 570ರ ಮೇಲೆ ನಡೆದ ಚರ್ಚೆಯಲ್ಲಿ ಮಾತನಾಡಿದ ಸಚಿವರು, ಬೀದರ್ ಮತ್ತು ಬಸವಕಲ್ಯಾಣವನ್ನು ಪ್ರವಾಸೋದ್ಯಮ ನಕ್ಷೆಯಲ್ಲಿ ಗುರುತಿಸಿ ಟೂರಿಸಂ ಸರ್ಕೂಟ್ ಎಂದು ಘೋಷಿಸುವ ಪ್ರಸ್ತಾವನೆಯು ಪರಿಶೀಲನೆಯಲ್ಲಿದೆ ಎಂದು ಸಚಿವರು ತಿಳಿಸಿದರು.
ಕರ್ನಾಟಕ ಪ್ರವಾಸೋದ್ಯಮ ನೀತಿ 2024-29ರಡಿ ಬೀದರ ತಾಲೂಕಿನಲ್ಲಿ 9 ಹಾಗೂ ಬಸವಕಲ್ಯಾಣ ತಾಲೂಕಿನಲ್ಲಿ 5 ಪ್ರವಾಸಿ ತಾಣಗಳನ್ನು ಈಗಾಗಲೇ ಗುರುತಿಸಲಾಗಿರುತ್ತದೆ ಎಂದು ಸಚಿವರು ತಿಳಿಸಿದರು.
ದಿನಾಂಕ 7-8-2025ರ ಸರ್ಕಾರದ ಆದೇಶದಲ್ಲಿ ಈಗಾಗಲೇ ಗುರುತಿಸಿದ ಪ್ರವಾಸಿ ತಾಣಗಳ ಪಟ್ಟಿಗೆ ಇನ್ನಷ್ಟು ಶರಣ ಸ್ಮಾರಕಗಳು ಸೇರಬೇಕು ಎಂದು ಡಾ.ಮುಳೆ ಅವರು ಸರ್ಕಾರಕ್ಕೆ ಸಲಹೆ ನೀಡಿದರು.












Click it and Unblock the Notifications