ಲೋಕಸಭಾ ಚುನಾವಣೆಗೂ ಮುನ್ನ ಶರಣಾಗತಿ ಮುನ್ಸೂಚನೆ ಕೊಟ್ಟ ಕಾಂಗ್ರೆಸ್: ಆರ್.ಅಶೋಕ್
ಬೆಂಗಳೂರು, ಜನವರಿ 31: ವಿಧಾನಸಭಾ ಚುನಾವನೆಗೂ ಮೊದಲು ಭರಪೂರ ಗ್ಯಾರೆಂಟಿ ಯೋಜನೆಗಳನ್ನು ಘೋಷಿಸುವ ಮೂಲಕ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇದೀಗ ಲೋಕಸಭಾ ಚುನಾವಣೆಗೂ ಮೊದಲೇ ಗ್ಯಾರೆಂಟಿ ಯೋಜನೆಗಳ ಸ್ಥಗಿತ, ಮುಂದುವರಿಕೆ ಬಗ್ಗೆ ಭಾರೀ ಚರ್ಚೆಗಳು ನಡೆದಿವೆ.
ಕಾಂಗ್ರೆಸ್ ಮಹತ್ವಾಕಾಂಕ್ಷೆಯ ಗ್ಯಾರೆಂಟಿ ಯೋಜನೆಗಳ ರದ್ದು ಬಗ್ಗೆ ಸ್ವಪಕ್ಷ ಶಾಸಕ ಹೇಳಿಕೆಯೇ ಈ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿಯು ಲೋಕಸಭಾ ಚುನಾವಣೆ ಘೋಷಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಯುದ್ದಕ್ಕೂ ಮೊದಲೇ ಕಾಂಗ್ರೆಸ್ ಶಸ್ತ್ರತ್ಯಾಗ ಮಾಡಿ ಶರಣಾಗುವ ಮುನ್ಸೂಚನೆ ನೀಡಿದೆ ಎಂದು ಲೇವಡಿ ಮಾಡಿದೆ.

ಪ್ರಧಾನಿ ಮುಂದೆ ಕಾಂಗ್ರೆಸ್ ಶರಣಾಗತಿ
ಈ ಕುರಿತು ವಿಪಕ್ಷ ನಾಯಕ ಆರ್. ಅಶೋಕ್ ಅವರು ಬುಧವಾರ ಕಾಂಗ್ರೆಸ್ ಶಾಸಕರ ಹೇಳಿಕೆಯನ್ನು ಟ್ವೀಟ್ ಮಾಡಿ ಕಾಂಗ್ರೆಸ್ ಮೇಲೆ ಕುಟುಕಿದ್ದಾರೆ. ಲೋಕಸಭೆಯಲ್ಲಿ ಸೋತರೆ ಗ್ಯಾರೆಂಟಿ ರದ್ದು ಎಂದು ಹೇಳಿರುವ ಕಾಂಗ್ರೆಸ್ ಶಾಸಕ ಎಚ್ಸಿ ಬಾಲಕೃಷ್ಣ ಅವರು ಮತ್ತು ಕರ್ನಾಟಕ ಕಾಂಗ್ರೆಸ್ ಪಕ್ಷ ಯುದ್ಧಕ್ಕೆ ಮುನ್ನವೇ ಶಸ್ತ್ರತ್ಯಾಗ ಮಾಡಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಶರಣಾಗುವ ಮುನ್ಸೂಚನೆ ನೀಡಿದ್ದಾರೆ ಎಂದು ತಿವಿದಿದ್ದಾರೆ.
ಕಾಂಗ್ರೆಸ್ ಗ್ಯಾರೆಂಟಿಗಳು ಕೇವಲ ಜನರ ಮತ ಸೆಳೆಯಲು ಸೃಷ್ಟಿಸಿದ ಗಾಳಗಳೇ ಹೊರತು ಜನರ ಬದುಕು ರೂಪಿಸುವ ಶಾಶ್ವತ ಯೋಜನೆಗಳಲ್ಲ ಎಂದು ಆರ್.ಅಶೋಕ್ ದೂರಿದ್ದಾರೆ.

ಪ್ರಧಾನಿ ಗ್ಯಾರೆಂಟಿ ಮೇಲೆ ಜನರ ವಿಶ್ವಾಸ
ಭಾರತೀಯರ, ಕನ್ನಡಿಗರ ವಿಶ್ವಾಸ, ನಂಬಿಕೆ ಏನಿದ್ದರೂ ಅದು ಪ್ರಧಾಣಿ ನರೇಂದ್ರ ಮೋದಿ ಗ್ಯಾರೆಂಟಿ ಮೇಲೆಯೇ ಹೊರತು ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳ ಮೇಲೆ ಅಲ್ಲ ಎಂದು ಕಾಂಗ್ರೆಸ್ ಸರ್ಕಾರದ ಯೋಜನೆಗಳು ಕುರಿತು ಪ್ರತಿಕ್ರಿಯಿಸಿದ್ದಾರೆ.
ಗ್ಯಾರೆಂಟ್ ಯೋಜನೆಗಳು ಚುನಾವಣೆಯಲ್ಲಿ ಸೋತರೆ ರದ್ದಾಗಬಹುದು ಎಂದು ಕಾಂಗ್ರೆಸ್ ಶಾಸಕರ ಹೇಳಿಕೆ ಸರ್ಕಾರಕ್ಕೆ ಇರುಸು ಮುರುಸು ಉಂಟು ಮಾಡಿದೆ. ಈ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆ ವಿಧಾನಸೌಧದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು, ಯಾವುದೇ ಕಾರಣಕ್ಕೆ ಈ ಗ್ಯಾರೆಂಟಿ ಯೋಜನೆಗಳು ಸ್ಥಗಿತಗೊಳ್ಳುವುದಿಲ್ಲ. ಚುನಾವಣೆ ಬಳಿಕವ ಮುಂದುವರಿಯುತ್ತವೆ ಎಂದು ಹೇಳಿದ್ದಾರೆ.
ಇತ್ತ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ಸಹ ಈ ಬಗ್ಗೆ ಪ್ರತಿಕ್ರಿಯಸಿದ್ದು, ಯೋಜನೆ ಸ್ಥಗಿತ ಬಗ್ಗೆ ಶಾಸಕರ ಹೇಳಿಕೆ ಸರಿಯಲ್ಲ. ಗ್ಯಾರೆಂಟಿಗಳನ್ನು ಸ್ಥಗಿತಗೊಳಿಸುವ ಪ್ರಶ್ನೆಯೇ ಇಲ್ಲ. ಅವು ಮುಂದುವರಿಯುತ್ತವೆ ಎಂದು ತಿಳಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರು ಹೇಳಿದ್ದೇನು?
ಇನ್ನೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಓಟಿಗಾಗಿ ನೋಟು ಎನ್ನುತ್ತಿದ್ದ ಕಾಂಗ್ರೆಸ್ಸಿಗರು, ವಿಧಾನಸಭಾ ಚುನಾವಣೆಯಲ್ಲಿ ಓಟಿಗಾಗಿ ಬಿಟ್ಟಿ ಗ್ಯಾರಂಟಿ ಎಂದಿದ್ದರು. ಇದೀಗ ಓಟು ಕೊಡದಿದ್ದರೆ ಗ್ಯಾರಂಟಿ ನಿಲ್ಲಿಸುವ ಏಟು ಕೊಡುವುದಾಗಿ ಮತದಾರರಿಗೆ ಬೆದರಿಕೆ ಒಡ್ಡುತ್ತಿದ್ದಾರೆ. ಇದಕ್ಕೆ ಏಟಿಗೆ ಎದಿರೇಟು ಕೊಡುವ ತಾಕತ್ತು ನಮ್ಮ ಮತದಾರರಿಗೆ ಇದೆ ಎಂದು ಅವರು ಕಾಂಗ್ರೆಸ್ ಟಾಂಗ್ ಕೊಟ್ಟಿದ್ದಾರೆ.












Click it and Unblock the Notifications