'ದಸರಾದಲ್ಲಿ ಇದನ್ನ ಮಾಡದಿದ್ರೆ ಚಾಮುಂಡೇಶ್ವರಿಯ ಶಾಪ ಗ್ಯಾರಂಟಿ..' ಸರ್ಕಾರಕ್ಕೆ ಅಶೋಕ್ ಕೊಟ್ಟ ಎಚ್ಚರಿಕೆ ಏನು?
ವಿಶ್ವವಿಖ್ಯಾತ ಹಾಗೂ ನಾಡಹಬ್ಬ ಮೈಸೂರು ದಸರಾಗೆ ದಿನಗಣನೆ ಶುರುವಾಗಿದೆ. ಈ ಬಾರಿ ದಸರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದನ್ನು ಸ್ವಾಗತಿಸಿರುವ ವಿಪಕ್ಷ ನಾಯಕ ಆರ್.ಅಶೋಕ್ ರಾಜ್ಯ ಸರ್ಕಾರಕ್ಕೆ ಮಹತ್ವದ ಕಿವಿಮಾತನ್ನೂ ಹೇಳಿದ್ದಾರೆ. ದಸರಾ ಹೆಸರಲಿನಲ್ಲಿ ಲೂಟಿ ಮಾಡಬೇಡಿ ಎಂದು ಸರ್ಕಾರಕ್ಕೆ ಎಚ್ಚರಿಕೆಯೂ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಆರ್.ಅಶೋಕ್, ನಾಡಹಬ್ಬ ಮೈಸೂರು ದಸರಾ ಉತ್ಸವವನ್ನ ಅದ್ಧೂರಿಯಾಗಿ ಆಚರಿಸಬೇಕು ಎಂಬ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಆದರೆ ಅದ್ಧೂರಿ ದಸರಾ, ಕಾಂಗ್ರೆಸ್ ಸರ್ಕಾರದ ಮತ್ತೊಂದು ಅದ್ಧೂರಿ ಹಗರಣಕ್ಕೆ ವೇದಿಕೆ ಆಗದಿರಲಿ ಎನ್ನುವುದೇ ಕನ್ನಡಿಗರ ಆಶಯ ಎಂದಿದ್ದಾರೆ.

ʼಕಳೆದ ವರ್ಷ ಅಂತರರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕ ಶ್ರೀ ಪಂಡಿತ್ ತಾರಾನಾಥ್ ಅವರ ಬಳಿಯೂ ಪರ್ಸಂಟೇಜ್ ಕಮಿಷನ್ ಕೇಳಿ ಕರ್ನಾಟಕದ ಮಾನ ಹಾರಾಜು ಹಾಕಿದ್ದ ಕಾಂಗ್ರೆಸ್ ಸರ್ಕಾರ, ಈ ವರ್ಷವಾದರೂ ನಾಡಹಬ್ಬ ದಸರಾ ಮಹೋತ್ಸವಕ್ಕೆ ಭ್ರಷ್ಟಾಚಾರದ ಸೋಂಕು ತಗುಲಿಸದೆ, ನಾಡಿನ ಸಂಸ್ಕೃತಿ, ಪರಂಪರೆಯ ಗೌರವ ಉಳಿಸುತ್ತೋ ಅಥವಾ ಈ ವರ್ಷವೂ ಮತ್ತೊಂದು ಭ್ರಷ್ಟಾಚಾರದ ಅಂಬಾರಿ ಹೊತ್ತು ಕನ್ನಡಿಗರ ಮಾನ ಕಳಿಯುತ್ತೋ ಕಾದು ನೋಡಬೇಕು ಎಂದು ವ್ಯಂಗ್ಯ ಮಾಡಿದ್ದಾರೆ.
ʼವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಅಂದರೆ ಅದು ಕರ್ನಾಟಕದ ಭವ್ಯ ಸಾಂಸ್ಕೃತಿಕ ಪರಂಪರೆಯ ಪ್ರತೀಕ. ಇಡೀ ದೇಶ, ಪ್ರಪಂಚವೇ ಎದುರು ನೋಡುವ ಇಂತಹ ಉತ್ಸವವನ್ನು ರಾಜ್ಯ ಸರ್ಕಾರ ಅತ್ಯಂತ ಆಸಕ್ತಿ, ಶ್ರದ್ಧಾಭಕ್ತಿಗಳಿಂದ ಆಚರಿಸಬೇಕು. ಇಲ್ಲವಾದರೆ ಈ ಸರ್ಕಾರ ಆ ತಾಯಿ ಚಾಮುಂಡೇಶ್ವರಿಯ ಶಾಪಕ್ಕೆ ಗುರಿಯಾಗುವುದು ನಿಶ್ಚಿತ ಎಂದು ಎಚ್ಚರಿಕೆಯೂ ನೀಡಿದ್ದಾರೆ.

ಕಳೆದ ವರ್ಷ ದಸರಾ ಸಾಂಸ್ಕೃತಿಕ ಉತ್ಸವದಲ್ಲಿ ಕಾರ್ಯಕ್ರಮ ನೀಡಲು ಬಂದಿದ್ದ ಅಂತರರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕ ರಾಜೀವ್ ತಾರಾನಾಥ್ ಅವರಿಗೆ ಸಂಭಾವನೆಯಲ್ಲಿ ಕಮೀಷನ್ ಕೇಳಲಾಗಿತ್ತು ಎನ್ನುವ ಬಗ್ಗೆ ವರದಿಯಾಗಿತ್ತು.
ಈ ಬಗ್ಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದ ಅಧಿಕಾರಿಗಳೇ ಬಂದು ತಮ್ಮ ಬಳಿ ಕಮೀಷನ್ ಹಣ ಕೇಳಿದ್ದರು ಎಂಬ ವಿಚಾರವನ್ನು ಖುದ್ದು ರಾಜೀವ್ ತಾರಾನಾಥ ಅವರೇ ಹೇಳಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಅವರು ಅಧಿಕಾರಿಗಳನ್ನು ವಾಪಸ್ ಕಳುಹಿಸಿದ್ದರು. ಅಲ್ಲದೆ ಕಾರ್ಯಕ್ರಮ ಕೂಡ ರದ್ದು ಮಾಡಿದ್ದರು ಎನ್ನಲಾಗಿದೆ.

ಕಮೀಷನ್ ಮೂಲಕ ಕಲಾವಿದರನ್ನು ಶೋಷಣೆ ಮಾಡಲಾಗುತ್ತಿದೆ. ಕಾರ್ಯಕ್ರಮ ನೀಡದಿದ್ದರೂ ಪರವಾಗಿಲ್ಲ. ಆದರೆ, ನಾನು ಇಂತಹ ಕೃತ್ಯಗಳನ್ನು ಬೆಂಬಲಿಸುವುದಿಲ್ಲ. ಬೇರೆ ರಾಜ್ಯಗಳಂತೆ ನಮ್ಮಲ್ಲಿ ಕಲಾವಿದರನ್ನು ಪೋಷಿಸುವ ವಾತಾವರಣ ಇಲ್ಲ ಎಂದು ದೂರಿದ್ದರು.
ಈ ಘಟನೆ ಉಲ್ಲೇಖಿಸಿರುವ ವಿಪಕ್ಷ ನಾಯಕ ಆರ್.ಅಶೋಕ್ ಈ ಬಾರಿಯ ದಸರಾ ಉತ್ಸವದಲ್ಲಿ ಇಂತಹ ಘಟನೆಗಳು ನಡೆದು ರಾಜ್ಯಕ್ಕೆ ಅವಮಾನವಾಗದಂತೆ ಎಚ್ಚರ ವಹಿಸುವಂತೆ ಸಲಹೆ ನೀಡಿದ್ದಾರೆ. ಈಗಾಗಲೇ ಮೈಸೂರಿನ ದಸರಾ ಸಂಭ್ರಮ ಕಳೆಗಟ್ಟಿದೆ. ಸರ್ಕಾರ ಕೂಡ ಕಳೆದ ವರ್ಷಕ್ಕಿಂತ ಈ ಬಾರಿ ಅದ್ಧೂರಿಯಾಗಿ ದಸರಾ ಆಚರಣೆಗೆ ಸಜ್ಜಾಗಿದೆ.












Click it and Unblock the Notifications