ಪ.ಜಾ/ಪ.ಪಂಗಡದವರಿಗೆ ಸರ್ಕಾರಿ ಟೆಂಡರ್ನಲ್ಲಿ ಮೀಸಲಾತಿ
ಬೆಂಗಳೂರು, ಏಪ್ರಿಲ್ 21 : ಸರ್ಕಾರಿ ಇಲಾಖೆಗಳ ವ್ಯಾಪ್ತಿಯಲ್ಲಿ ನಡೆಯುವ 50 ಲಕ್ಷ ರೂ.ವರೆಗಿನ ಎಲ್ಲ ಕಾಮಗಾರಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ಮೀಸಲಾತಿ ಒದಗಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಬುಧವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು, 'ಪರಿಶಿಷ್ಟ ಜಾತಿಯವರಿಗೆ ಶೇಕಡಾ 17.15 ಹಾಗೂ ಪರಿಶಿಷ್ಟ ಪಂಗಡದವರಿಗೆ ಶೇಕಡಾ 6.95 ರಷ್ಟು ಮೀಸಲಾತಿ ದೊರೆಯಲಿದೆ' ಎಂದರು. [ಕುಡಿಯುವ ನೀರಿಗೆ 100 ಕೋಟಿ ತುರ್ತು ಹಣ : ಸಂಪುಟದ ತೀರ್ಮಾನ]

'ಟೆಂಡರ್ನಲ್ಲಿ ಶೇ 24.10 ರಷ್ಟು ಕಾಮಗಾರಿಯನ್ನು ಒದಗಿಸಲು ಕರ್ನಾಟಕ ಪಾರದರ್ಶಕ ಕಾಯ್ದೆಗೆ (ಕೆಟಿಟಿಪಿ 1999)ಕ್ಕೆ ತಿದ್ದುಪಡಿ ತರಲಾಗುವುದು. 2013-14ರ ಬಜೆಟ್ನಲ್ಲಿ ಈ ಕುರಿತು ಘೋಷಣೆ ಮಾಡಲಾಗಿತ್ತು. ಈಗ ಅದನ್ನು ಜಾರಿಗೆ ತರಲಾಗುತ್ತಿದೆ' ಎಂದು ಜಯಚಂದ್ರ ತಿಳಿಸಿದರು. [ಶಾಲಾ ಮಕ್ಕಳಿಗೆ 'ಶೂ ಭಾಗ್ಯ', ಸಂಪುಟದ ಒಪ್ಪಿಗೆ]
'ಲೋಕೋಪಯೋಗಿ, ಪಂಚಾಯತ್ ರಾಜ್ ಸೇರಿದಂತೆ ಎಲ್ಲಾ ಇಲಾಖೆಗಳಲ್ಲಿ 50 ಲಕ್ಷ ರೂ. ವರೆಗಿನ ಕಾಮಗಾರಿಯನ್ನು ನೀಡಲಾಗುತ್ತದೆ. ಜನಸಂಖ್ಯೆ ಆಧರಿಸಿ ಪರಿಶಿಷ್ಟ ಜಾತಿಯವರಿಗೆ 17.15 ಹಾಗೂ ಪರಿಶಿಷ್ಟ ಪಂಗಡದವರಿಗೆ 6.95ರಷ್ಟು ಮೀಸಲು ಕಲ್ಪಿಸಲಾಗುತ್ತದೆ' ಎಂದು ಸಚಿವರು ಹೇಳಿದರು. [ಕರ್ನಾಟಕ ಜಾತಿಗಣತಿ ವರದಿ: ಮುಸ್ಲಿಮರು ನಂ. 2?]
'ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಇದು ಜಾರಿಗೆ ಬರಲಿದೆ. ಯೋಜನೆ ಗುತ್ತಿಗೆ ಪಡೆಯಲು ಒಬ್ಬರಿಗಿಂತ ಹೆಚ್ಚುಮಂದಿ ಅರ್ಜಿ ಸಲ್ಲಿಸಿದರೆ, ಆಯ್ಕೆ ಪ್ರಕ್ರಿಯೆ ಹೇಗೆ?, ಯಾವ ಕಾಮಗಾರಿಗಳನ್ನು ಇದರ ಅಡಿ ನೀಡಬಹುದು ಎಂದು ಇಲಾಖಾ ಮಟ್ಟದಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ' ಎಂದು ಸಚಿವರು ವಿವರಣೆ ನೀಡಿದರು.












Click it and Unblock the Notifications