
ಕರ್ನಾಟಕದಲ್ಲಿ ಶೇಕಡ 200ರಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತಿವೆ: ಅಶ್ವತ್ಥ ನಾರಾಯಣ
ಧಾರವಾಡ, ಡಿಸೆಂಬರ್ 1: ಪದವಿ ಕಾಲೇಜುಗಳಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಕರ್ನಾಟಕ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಕನಿಷ್ಠಪಕ್ಷ ಒಂದು ಲಕ್ಷ ವಿದ್ಯಾರ್ಥಿಗಳಾದರೂ ಅಧ್ಯಯನ ಮಾಡುವಂತಾಗಬೇಕು. ಇದಕ್ಕೆ ಸರಕಾರವು ಅಗತ್ಯ ಉಪಕ್ರಮಗಳನ್ನು ರೂಪಿಸಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದರು.
ದಿವಂಗತ ಮಾಜಿ ಪ್ರಧಾನಿ ವಾಜಪೇಯಿಯವರ ಸ್ಮರಣಾರ್ಥ ಉನ್ನತ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿರುವ ಸುಶಾಸನ ಮಾಸಾಚರಣೆ ಅಂಗವಾಗಿ ಅವರು ವಿವಿ ವ್ಯಾಪ್ತಿಯ ಹಲವು ಕಾಲೇಜುಗಳ ಪ್ರಾಂಶುಪಾಲರು ಮತ್ತು ಬೋಧಕ ಸಿಬ್ಬಂದಿಯ ಜತೆ ಬುಧವಾರ ನಡೆದ ಕರ್ನಾಟಕ ವಿವಿ ಕ್ಯಾಂಪಸ್ನಲ್ಲಿ ಸಂವಾದದಲ್ಲಿ ಮಾತನಾಡಿದ ಅವರು,
ಇದು ಜ್ಞಾನದ ಯುಗವಾಗಿದ್ದು, ಕರ್ನಾಟಕದ ವಿಕಾಸಕ್ಕೆ ಸುವರ್ಣಾವಕಾಶ ಸಿಕ್ಕಿದೆ. ಇದನ್ನು ನಾವು ಕಳೆದುಕೊಳ್ಳದೆ, ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಯುವಜನರು ತಮ್ಮ ವ್ಯಕ್ತಿಗತ ಬದುಕನ್ನು ಕಟ್ಟಿಕೊಳ್ಳುವ ಜತೆಗೆ ರಾಷ್ಟ್ರನಿರ್ಮಾಣ ಕಾರ್ಯದಲ್ಲೂ ತೊಡಗಿಸಿಕೊಳ್ಳಬೇಕು ಎಂದರು.
ಪ್ರಧಾನಿ ಮೋದಿಯವರು ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದು ಭಾರತವು ಈಗ ತನ್ನದೇ ಆದ ರಕ್ಷಣಾ ನೀತಿ ಮತ್ತು ವಿದೇಶಾಂಗ ನೀತಿಗಳನ್ನು ಹೊಂದಿದೆ. ದೇಶವು ಜಗತ್ತಿನಲ್ಲಿ ಐದನೇ ಅತ್ಯಂತ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಆದರೆ ಇದು ಇನ್ನಷ್ಟು ಎತ್ತರಕ್ಕೆ ಹೋಗಬೇಕು ಎಂದು ತಿಳಿಸಿದರು. ಪ್ರಥಮ ದರ್ಜೆ ಕಾಲೇಜುಗಳಿಗೆ ಆರ್ಥಿಕ ಸ್ವಾಯತ್ತತೆ ಕೊಡಲಾಗಿದೆ. ಇದರ ಜತೆಗೆ ಕೌಶಲ್ಯಗಳನ್ನು ಕಲಿಸಲು ಸುಶಾಸನ ಮಾಸಾಚರಣೆಯ ಅಂಗವಾಗಿ ಗುರುವಾರದಿಂದ ಸ್ಕಿಲ್ ಪೋರ್ಟಲ್ಗೆ ಚಾಲನೆ ನೀಡಲಾಗುತ್ತಿದೆ. ಇದನ್ನು ವಿದ್ಯಾರ್ಥಿ ಸಮುದಾಯವು ಸದ್ಬಳಕೆ ಮಾಡಿಕೊಳ್ಳಬೇಕು. ಕರ್ನಾಟಕದಲ್ಲಿ ಶೇಕಡ 200ರಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತಿವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಉನ್ನತ ಶಿಕ್ಷಣ ವಲಯದಲ್ಲಿ ಸಂಪೂರ್ಣ ಡಿಜಿಟಲೀಕರಣ ಯಶಸ್ವಿಯಾಗಿ ನಡೆಯುತ್ತಿದೆ. ಯಾವ ಖಾಸಗಿ ವಿ.ವಿ.ಗಳಿಗೂ ಈ ಸಾಧನೆ ಸಾಧ್ಯವಾಗಿಲ್ಲ. ಇಂದು ಪ್ರವೇಶಾತಿಯಿಂದ ಹಿಡಿದು ಅಂಕಪಟ್ಟಿ ವಿತರಣೆಯವರೆಗೆ ಎಲ್ಲವೂ ಆಧುನಿಕ ತಂತ್ರಜ್ಞಾನದ ಸಹಾಯದಿಂದ ನಡೆಯುತ್ತಿದೆ. ಇಂತಹ ಸಾಧನೆ ಬೇರೆ ಯಾವ ರಾಜ್ಯದಲ್ಲೂ ಸಾಧ್ಯವಾಗಿಲ್ಲ ಎಂದು ತಿಳಿಸಿದರು.

ರಾಜ್ಯವು ಐಟಿ, ಬಿಟಿ, ಸೆಮಿಕಂಡಕ್ಟರ್, ಚಿಪ್ ತಯಾರಿಕೆ ಇತ್ಯಾದಿಗಳಲ್ಲಿ ಮೊದಲ ಸ್ಥಾನದಲ್ಲಿದೆ. ಹಾಗೆಯೇ ನೇರ ಮತ್ತು ಪರೋಕ್ಷ ತೆರಿಗೆ ಸಂಗ್ರಹದಲ್ಲೂ ನಾವು ಎರಡನೇ ಸ್ಥಾನದಲ್ಲಿವೆ. ವಿ.ವಿ.ಗಳು ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಸಂಸ್ಕೃತಿಯನ್ನು ರೂಢಿಸಿಕೊಳ್ಳಬೇಕು. ಇದಕ್ಕಾಗಿಯೇ ಉನ್ನತ ಶಿಕ್ಷಣ ಇಲಾಖೆಯಲ್ಲಿ ಇ-ಆಫೀಸ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಅಶ್ವತ್ಥ ನಾರಾಯಣ ಹೇಳಿದರು.
ಕಾರ್ಯಕ್ರಮದಲ್ಲಿ ಕವಿವಿ ಕುಲಪತಿ ಪ್ರೊ.ಕೆ.ಬಿ.ಗುಡಸಿ, ಪ್ರೊ.ಸಿ ಕೃಷ್ಣಮೂರ್ತಿ, ಬಸವರಾಜು ಮುಂತಾದವರು ಉಪಸ್ಥಿತರಿದ್ದರು.
ಜಮಖಂಡಿಯಲ್ಲಿ ಬಾಗಲಕೋಟೆ ವಿವಿ ಕ್ಯಾಂಪಸ್: ಅಶ್ವತ್ಥನಾರಾಯಣ
ನೂತನವಾಗಿ ಘೋಷಿಸಲ್ಪಟ್ಟಿರುವ ಬಾಗಲಕೋಟೆ ವಿಶ್ವವಿದ್ಯಾಲಯದ ಕೇಂದ್ರ ಕ್ಯಾಂಪಸ್ ಈಗ ಅಸ್ತಿತ್ವದಲ್ಲಿರುವ ಜಮಖಂಡಿ ಸ್ನಾತಕೋತ್ತರ ಕೇಂದ್ರದಲ್ಲಿ ಇರಲಿದೆ. ಈ ಸಂಬಂಧವಾಗಿ ಸರಕಾರದ ಆದೇಶದಲ್ಲಿ ಸೂಕ್ತ ಬದಲಾವಣೆ ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಬುಧವಾರ ತಿಳಿಸಿದ್ದಾರೆ.
ಬಾಗಲಕೋಟೆಯ ಜಿಲ್ಲೆಯ ಕಾಲೇಜುಗಳು ಇದುವರೆಗೂ ಬೆಳಗಾವಿಯ ರಾಣಿ ಚೆನ್ನಮ್ಮ ವಿ.ವಿ.ದ ವ್ಯಾಪ್ತಿಯಲ್ಲಿದ್ದವು. ಇನ್ನುಮುಂದೆ ಇವು ಹೊಸ ವಿ.ವಿ.ಯಡಿಯಲ್ಲಿ ಬರಲಿವೆ. ಬಾಗಲಕೋಟೆ ವಿವಿಗೆ ಸೇರಬೇಕಾದ ಜಮೀನಿನ ದಾಖಲೆಗಳನ್ನು ಚೆನ್ನಮ್ಮ ವಿ.ವಿ.ದಿಂದ ಇನ್ನು ಒಂದು ತಿಂಗಳೊಳಗಾಗಿ ವರ್ಗಾಯಿಸಲಾಗುವುದು. ಇದನ್ನು ಆ ವಿ.ವಿ.ಯ ಕುಲಸಚಿವರು ನಿರ್ವಹಿಸಲಿದ್ದಾರೆ ಎಂದಿದ್ದಾರೆ.