ನಿರ್ದಯಿ ಹಂತಕ ಬ್ಯಾಂಕ್ ಮ್ಯಾನೇಜರಿಗೆ ಗಲ್ಲು

ಮಂಗಳವಾರ ತಡಸಂಜೆ ನ್ಯಾಯಾಧೀಶ ಟಿಜೆ ಶಿವಶಂಕರೇ ಗೌಡ ಅಪರಾಧಿಗೆ ಮರಣದಂಡನೆ ವಿಧಿಸಿ ತೀರ್ಪು ನೀಡಿದ್ದಾರೆ. ಪುತ್ತೂರು ನ್ಯಾಯಾಲಯದ 101 ವರ್ಷಗಳ ಇತಿಹಾಸದಲ್ಲಿ ಇದು ಮೊದಲ ಮರಣದಂಡನೆ ಶಿಕ್ಷೆಯಾಗಿದೆ.
2010 ಜೂ 16ರಂದು ಪಾಪಿ ರಮೇಶ್ ಏನು ಮಾಡಿದ್ದನೆಂದರೆ...
ಅಂದಹಾಗೆ ಆರೋಪಿ ರಮೇಶ್ ನಾಯ್ಕ ಸೋಲಾಪುರದ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿದ್ದವ. ತನ್ನ ಇಬ್ಬರು ಮಕ್ಕಳಾದ ಮೋಹನ್ ರಾಜ್ (10) ಮತ್ತು ಕತ್ತಿಕಾ (4) ರನ್ನು ಪಾಣಾಜೆಯ ಕೆರೆಗೆ ತಳ್ಳಿ ಕೊಲೆ ಮಾಡಿದ್ದ. ಅದಕ್ಕೂ ಮುನ್ನ ನಾದಿನಿ ಮತ್ತು ಸ್ವಂತ ಅತ್ತೆಯನ್ನೇ ಡಬಲ್ ಮರ್ಡರ್ ಮಾಡಿದ್ದ.
ಏನಾಗಿತ್ತು ರಮೇಶನಿಗೆ? ಹೀಗೆಲ್ಲಾ ಸಾಲುಸಾಲಾಗಿ ಹೆಣಗಳನ್ನು ಮಲಗಿಸಿದ್ದು ಏಕೆ ಅಂದರೆ... ಹುಚ್ಚು ಅಲ್ಲ, ಬೆಪ್ಪು ಅಲ್ಲ ಎಲ್ಲಾ ಶಿವನ ಲೀಲೆ ಎಂಬಂತೆ ರಮೇಶ ಪ್ರೇಮಪಾಶದಲ್ಲಿ ಸಿಲುಕಿ ಹೀಗೆಲ್ಲಾ ತನ್ನವರನ್ನೇ, ತನ್ನ ಕುಡಿಗಳನ್ನೇ ಸಾಯಿಸಿಬಿಟ್ಟಿದ್ದ.
ರಮೇಶ ನಾಯ್ಕ ಮೂಲತಃ ಪಾಣಾಜೆಯ ಅರ್ಧಮೂಲೆಯವನು. ಆತನಿಗೆ ಪುತ್ತೂರಿನ ಸುಂದರಿ ಅವರ ಜತೆ ಮದುವೆಯಾಗಿತ್ತು. ಗಂಡ ಹೆಂಡತಿ ಇಬ್ಬರೂ ಬೇರೆ ಬೇರೆ ಬ್ಯಾಂಕುಗಳಲ್ಲಿ ಉದ್ಯೋಗಿಗಳಾಗಿದ್ದವರು. ರಮೇಶ ನಾಯ್ಕ ಸೋಲಾಪುರದಲ್ಲಿ ರಾಷ್ಟ್ರೀಕತ ಬ್ಯಾಂಕ್ ಮ್ಯಾನೇಜರ್ ಆಗಿದ್ದರೆ ಅವನ ಮಡದಿ ಸುಂದರಿ ಮಂಗಳೂರಿನಲ್ಲಿ ಬ್ಯಾಂಕ್ ಉದ್ಯೋಗಿ.
ಇನ್ನು, ನಾದಿನಿ ಸವಿತಾ ಬೆಂಗಳೂರಿನಲ್ಲಿ ಭವಿಷ್ಯ ನಿಧಿ ಕಚೇರಿಯಲ್ಲಿ ಉದ್ಯೋಗದಲ್ಲಿದ್ದರು. ತುಮಕೂರಿನಲ್ಲಿ ರಮೇಶ ನಾಯ್ಕ ಸ್ವಂತ ಮನೆ ಹೊಂದಿದ್ದ. ಆ ಮನೆಯಲ್ಲಿ ತನ್ನ ತಾಯಿ ಜತೆ ಸವಿತಾ ವಾಸ ಮಾಡುತ್ತಿದ್ದಳು.
ಪ್ರೇಮದ ಸವಿಗೆ ಮರಣಮೃದಂಗ ಬಾರಿಸಿದ್ದ : ಅಷ್ಟಕ್ಕೂ ಅವನು ಕಣ್ಣುಹಾಕಿದ್ದು ಯಾರ ಮೇಲೆ ಅಂತೀರಿ? ತನ್ನ ಪತ್ನಿಯ ಸೋದರಿ ಅಂದರೆ ನಾದಿನಿ ಸವಿತಾಳ ಮೇಲೆ! ಆದರೆ ಆಕೆ ರಮೇಶನಿಗೆ ಒಲಿದಿರಲಿಲ್ಲ. ಅಷ್ಟೇ ಅಲ್ಲ ನಾಯ್ಕನಿಂದ ದೂರವಾಗಲು ಆಕೆಯ ಬೇರೊಬ್ಬರ ಜತೆ (ಸಹೋದ್ಯೋಗಿ ಮೋಹನ್) ಪ್ರೇಮವಿವಾಹ ಮಾಡಿಕೊಳ್ಳಲು ಮುಂದಾಗಿದ್ದಳು.
ಇದು ರಮೇಶನಿಗೆ ಅರಗಿಸಿಕೊಳ್ಳಲಾಗಿಲ್ಲ. ಸರಿಯಾಗಿ ಅದೇ ಸಿಟ್ಟಿನಲ್ಲಿ ಮೊದಲು, ತುಮಕೂರಿನಲ್ಲಿದ್ದ ನಾದಿನಿ ಸವಿತಾ ಮತ್ತು ಅತ್ತೆ ಸರಸ್ವತಿಯನ್ನು ಇಲ್ಲವಾಗಿಸಿದ. ಸವಿತಾಳನ್ನು ಕೊಲೆ ಮಾಡಿ ನೀರಿನ ಸಂಪಿನಲ್ಲಿ ಹಾಕುತ್ತಾನೆ. ಅದನ್ನು ತಡೆಯಲು ಬಂದ ಅತ್ತೆ ಸರಸ್ವತಿಯನ್ನೂ ಮುಗಿಸುತ್ತಾನೆ. ಅಲ್ಲಿಂದ ಮುಂದೆ ಮಂಗಳೂರಿಗೆ ಬರುತ್ತಾನೆ.
ಮಧ್ಯಾಹ್ನದ ವೇಳೆಗೆ ಶಾಲೆ ಮುಗಿಸಿಕೊಂಡು ಬಂದಿದ್ದ ಭುವನ್ ಮತ್ತು ಮನೆಯಲ್ಲೇ ಇದ್ದ ಕತ್ತಿಕಾಳನ್ನು ಐಸ್ ಕ್ರೀಂ ಕೊಡಿಸುವುದಾಗಿ ಹೇಳಿ ಬಾಡಿಗೆ ಕಾರಲ್ಲಿ ಪಾಣಾಜೆಗೆ ಕರೆ ತರುತ್ತಾನೆ. ಅಲ್ಲಿಗೆ ಬರುವಾಗ ಇಳಿಸಂಜೆ ಆಗಿತ್ತು. ಅರ್ಧಮೂಲೆಯಲ್ಲಿ ತಾನು ಮಾರಾಟ ಮಾಡಿದ್ದ ಜಮೀನಿನ ಪಕ್ಕದ ತೋಟಕ್ಕೆ ಮಕ್ಕಳನ್ನು ಕರೆದೊಯ್ದು ನೀರಿನಲ್ಲಿ ಇಬ್ಬರನ್ನೂ ತಳ್ಳಿ ಕೊಲ್ಲುತ್ತಾನೆ. ಅಲ್ಲಿಂದ ಬಸ್ ಹತ್ತಿ ಹೋಗಿ ಪುತ್ತೂರಿನ ವಸತಿಗಹವೊಂದರಲ್ಲಿ ಬಿಡಾರ ಹೂಡುತ್ತಾನೆ.
ಕೋರ್ಟ್ ಈ ಪ್ರಕರಣದಲ್ಲಿ ಒಟ್ಟು 19 ಸಾಕ್ಷಿಗಳನ್ನು ವಿಚಾರಿಸಲಾಗಿದೆ. ಒಟ್ಟು 18 ದಾಖಲೆಗಳನ್ನು ಗುರುತಿಸಲಾಗಿದೆ. ತನ್ನ ಪುಟ್ಟ ಮಕ್ಕಳನ್ನು ಕೊಂದಿರುವ ಈ ನಿರ್ದಯಿ ಹಂತಕನಿಗೆ ಮರಣದಂಡನೆಯನ್ನೇ ನೀಡಬೇಕು. ಈ ಪ್ರಕರಣ ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದು ನ್ಯಾಯಾಲಯ ಪರಿಗಣಿಸಬೇಕು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಶಿವಪ್ರಸಾದ ಆಳ್ವ ವಾದ ಮಂಡಿಸಿದ್ದರು.
ರಮೇಶ ತನ್ನ ಪ್ರೇಮ ಪ್ರಕರಣದಲ್ಲಿ ಏನೇನೂ ಸಂಬಂಧವೇ ಇಲ್ಲದ ತನ್ನ ಮಕ್ಕಳನ್ನು ಕೊಲೆ ಮಾಡಿದ್ದು ಘನಘೋರ, ಅಕ್ಷ್ಯಮ್ಯ ಎಂದು ವಕೀಲ ಶಿವಪ್ರಸಾದ ಆಳ್ವ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು.
ಮಂಗಳವಾರ ಬೆಳಗ್ಗೆ ರಮೇಶನ ಪತ್ನಿ, ಪುತ್ತೂರಿನ ಸುಂದರಿ ಅವರೂ ಕೋರ್ಟಿನಲ್ಲಿ ಹಾಜರಿದ್ದರು. ಆಕೆ ಈ ತೀರ್ಪಿನ ಬಗ್ಗೆ ಏನೂ ಹೇಳಲು ನಿರಾಕರಿಸಿದರು. ಇನ್ನು ಕಟಕಟೆಯಲ್ಲಿದ್ದ ರಮೇಶ ಆಗಾಗ್ಗೆ ಕಣ್ಣುಮುಚ್ಚಿ ಕುಳಿತುಕೊಳ್ಳುತ್ತಿದ್ದ.
ತೀರ್ಪು ಪ್ರಕಟವಾಗುವ ವೇಳೆಗೆ ಪಾತಕಿ ಭಾವಶೂನ್ಯನಾಗಿದ್ದ. ಆದರೆ, ತನಗೆ ಮರಣದಂಡನೆ ವಿಧಿಸಬೇಡಿ ಎಂದು ಮಾತ್ರ ನ್ಯಾಯಾಧೀಶರಲ್ಲಿ ಅಂಗಾಲಾಚಿದ. ರಮೇಶ ನಾಯ್ಕನಿಗೆ ತುಮಕೂರು ನ್ಯಾಯಾಲಯ ಅತ್ತೆ ಮತ್ತು ನಾದಿನಿಯರನ್ನು ಕೊಂದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ನೀಡಿದೆ.












Click it and Unblock the Notifications