ಚರ್ಮಗಂಟು ನಿಯಂತ್ರಿಸಲು 37.5ಲಕ್ಷ ಲಸಿಕೆಗಳನ್ನು ಖರೀದಿಸಿ ಜಿಲ್ಲೆಗಳಿಗೆ ವಿತರಣೆ: ಸಚಿವ ಪ್ರಭು ಚವ್ಹಾಣ್
ಬೆಳಗಾವಿ,ಡಿಸೆಂಬರ್ 22: ಚರ್ಮಗಂಟು ರೋಗದ ನಿಯಂತ್ರಣಕ್ಕಾಗಿ ಹಾವೇರಿ, ಬಳ್ಳಾರಿ, ಚಿತ್ರದುರ್ಗ, ಧಾರವಾಡ, ಉಡುಪಿ ಮತ್ತು ರಾಯಚೂರು ಜಿಲ್ಲೆಗಳಿಗೆ ತಲಾ ರೂ.5ಲಕ್ಷಗಳಂತೆ ಒಟ್ಟು 30 ಲಕ್ಷ ರೂ.ಅನುದಾನವನ್ನು ತುರ್ತು ಔಷಧ ಪೂರೈಕೆ ಮಾಡಲು ವಿತರಿಸಲಾಗಿದೆ ಎಂದು ಪಶು ಸಂಗೋಪನೆ ಸಚಿವರಾದ ಪ್ರಭು ಚವ್ಹಾಣ್ ಅವರು ತಿಳಿಸಿದ್ದಾರೆ.
ಈ ಕುರಿತು ಬುಧವಾರ ಸದನದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಅನುದಾನದಲ್ಲಿ ಪ್ರತಿ ಡೋಸ್ ಗೆ ರೂ.5.25 ರಂತೆ 37.5 ಲಕ್ಷ ಲಸಿಕೆಗಳನ್ನು ಖರೀದಿಸಿ ಜಿಲ್ಲೆಗಳಿಗೆ ವಿತರಿಸಲು ಕ್ರಮವಹಿಸಲಾಗಿದೆ ಎಂದರು.
ಬೆಂಗಳೂರಿನ ಹೆಬ್ಬಾಳದಲ್ಲಿರುವ ರಾಜ್ಯದ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆ ವತಿಯಿಂದ 35.74 ಲಕ್ಷ ಡೋಸ್ ಲಸಿಕೆಗಳನ್ನು ರಾಜ್ಯ ಸರ್ಕಾರದಿಂದ ಜಿಲ್ಲೆಗಳಿಗೆ ವಿತರಿಸಲಾಗಿದೆ. ಚರ್ಮಗಂಟು ರೋಗದ ಚಿಕಿತ್ಸೆಗೆ ಔಷಧಿ ಮತ್ತು ಪೂರಕ ರಾಸಾಯನಿಕಗಳನ್ನು ಪೂರೈಸಲು ಹಾಗೂ ಪರಿಹಾರ ಧನ ನೀಡಲು ರೂ.11ಕೋಟಿ ಹೆಚ್ಚುವರಿ ಅನುದಾನಕ್ಕಾಗಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಜಾನುವಾರುಗಳಿಗೆ ಲಸಿಕೆ ಹಾಕಲು ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇರುವುದರಿಂದ, ಹಾಲು ಉತ್ಪಾದಕರ ಸಹಕಾರಿ ಸಂಘದಿಂದ ತರಬೇತಿ ಪಡೆದ ಲಸಿಕೆದಾರರು, ಮೈತ್ರಿ ಕಾರ್ಯಕರ್ತರನ್ನು ಲಸಿಕಾ ಕಾರ್ಯಕ್ರಮಕ್ಕೆ ತೊಡಗಿಸಿಕೊಳ್ಳಲಾಗಿದೆ ಎಂದು ಪಶು ಸಂಗೋಪನಾ ಸಚಿವರು, ಸದಸ್ಯರಾದ ಮಧು ಜಿ ಮಾದೇಗೌಡ, ಎಸ್ ವಿ ಸಂಕನೂರ, ಶಶಿಲ್ ಜಿ ನಮೋಶಿ, ಪ್ರಾಣೇಶ ಎಂ ಕೆ, ಎಸ್ ರವಿ, ಗೋವಿಂದರಾಜು, ಡಾ. ಡಿ.ತಿಪ್ಪಯ್ಯ ಮತ್ತು ಅ.ದೇವೇಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ರಾಜ್ಯದ 234 ತಾಲೂಕಿನ 15977 ಗ್ರಾಮಗಳಲ್ಲಿ ಚರ್ಮಗಂಟು ರೋಗಕ್ಕೆ 2,37,194 ಜಾನುವಾರುಗಳು ತುತ್ತಾಗಿದ್ದು, ಈ ಪೈಕಿ 1,64,254 ಜಾನುವಾರುಗಳು ಚಿಕಿತ್ಸೆಯಿಂದ ಗುಣಮುಖ ಹೊಂದಿವೆ. ಶೇ.60.57ರಷ್ಟು ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ ಎಂದರು.
ಭ್ರಷ್ಟಾಚಾರ ಪ್ರಕರಣ ಲೋಕಾಯುಕ್ತಕ್ಕೆ ವರ್ಗಾವಣೆ
ಬೀದರ ಜಿಲ್ಲೆಯ ಕರ್ನಾಟಕ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 2020-21ರಲ್ಲಿ 32 ಕೋಟಿ ರೂ. ಭ್ರಷ್ಟಾಚಾರ ಪ್ರಕರಣವನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ. ಭ್ರಷ್ಟಾಚಾರಕ್ಕೆ ಗುರಿಯಾದ ನೌಕರರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾದ ಗುತ್ತಿಗೆ ನೌಕರರನ್ನು ವಿಶ್ವವಿದ್ಯಾಲಯದ ಕಚೇರಿಯಿಂದ ಅಮಾನತು ಮಾಡಲಾಗಿದೆ ಎಂದು ಪಶು ಸಂಗೋಪನೆ ಸಚಿವರಾದ ಪ್ರಭು ಚವ್ಹಾಣ್ ಅವರು ಹೇಳಿದ್ದಾರೆ.
2021ರಲ್ಲಿ ಹಣಕಾಸು ನಿಯಂತ್ರಣ ಅಧಿಕಾರಿಗಳು ಮತ್ತು ನಿವೃತ್ತರಾದ ಹಾಗೂ ಇನ್ನೀತರರ ವಿರುದ್ಧ ಪ್ರಕರಣ ದಾಖಲಾಗಿದ್ದು ಪ್ರಕರಣ ಯಾವ ಹಂತದಲ್ಲಿದೆ ಎಂದು ಸದಸ್ಯರಾದ ಅರವಿಂದಕುಮಾರ ಅರಳಿ ಅವರು ಚುಕ್ಕೆ ಗುರುತಿನ ಪ್ರಶ್ನೆ ಕೇಳಿದ್ದರು. ಎಫ್ ಐ ಆರ್ ದಾಖಲಾದ ಆರೋಪಿಗಳು ಈಗಲೂ ವಿಶ್ವವಿದ್ಯಾಲಯದಲ್ಲಿ ಕರ್ತವ್ಯದ ಮೇಲಿದ್ದಾರೆ. ಇದು ಸರಿಯೇ ಎಂದು ಅರಳಿ ಅವರು ಅಸಮಾಧಾನ ವ್ಯಕ್ತಪಡಿಸಿದರು. 32 ಕೋಟಿ ರೂ ಹಣ ಭ್ರಷ್ಟಾಚಾರದಲ್ಲಿ ಯಾರನ್ನು ರಕ್ಷಿಸಬಾರದು. ತಪ್ಪಿತಸ್ಥ ಯಾರೇ ಇರಲಿ ಅವರ ಮೇಲೆ ಶಿಕ್ಷೆ ಆಗಬೇಕು ಎಂದು ವಿರೋಧ ಪಕ್ಷದ ಸಭಾ ನಾಯಕರಾದ ಬಿ.ಕೆ.ಹರಿಪ್ರಸಾದ್, ಎಸ್.ಎಲ್.ಬೋಜೇಗೌಡ, ಪ್ರಕಾಶ ಹುಕ್ಕೇರಿ ಮತ್ತು ಇನ್ನೀತರರು ದನಿಗೂಡಿಸಿದರು.
ಪಶು ವೈದ್ಯರ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿ: ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇರುವ ಸಂಸ್ಥೆಗಳಿಗೆ ಜಾನುವಾರುಗಳ ಚಿಕಿತ್ಸೆಗೆ ತೊಂದರೆ ಆಗದಂತೆ ಅಧಿಕ ಪ್ರಭಾರ ವ್ಯವಸ್ಥೆ ಮಾಡಲಾಗಿದ್ದು, ಪುಸ್ತುತ 400 ಪಶು ವೈದ್ಯಾಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡುವ ನೇಮಕಾತಿ ಪ್ರಕ್ರಿಯೆ ಪುಗತಿಯಲ್ಲಿದೆ. 290 ಪಶು ವೈದ್ಯರುಗಳನ್ನು ಎಲ್ ಎಚ್ ಡಿ ಸಿ ಕಾರ್ಯಕ್ರಮದಡಿ ಹೊರಗುತ್ತಿಗೆ ಆಧಾರದ ಮೇಲೆ ಪಡೆದುಕೊಂಡು ಸೇವೆ ನೀಡಲಾಗುತ್ತದೆ ಎಂದು ಸಚಿವರಾದ ಪ್ರಭು ಚವ್ಹಾಣ್ ಅವರು, ಸದಸ್ಯರಾದ ಎಸ್ ಎಲ್ ಬೋಜೇಗೌಡ ಅವೆ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ್ದಾರೆ.












Click it and Unblock the Notifications