ಕಿಮ್ಮನೆ ರತ್ನಾಕರ್ ಪತ್ರಿಕಾಗೋಷ್ಠಿ ಮುಖ್ಯಾಂಶಗಳು
ಬೆಂಗಳೂರು, ಮೇ 22 : ದ್ವಿತೀಯ ಪಿಯು ಮೌಲ್ಯಮಾಪನ ಮತ್ತು ಫಲಿತಾಂಶ ಪ್ರಕಟಣೆಯಲ್ಲಿ ಉಂಟಾಗಿರುವ ಗೊಂದಲವನ್ನು ಸರಿಪಡಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಪದವಿಪೂರ್ವ ಶಿಕ್ಷಣ ಇಲಾಖೆ ಮುಂದೆ ಶುಕ್ರವಾರ ಪತ್ರಿಭಟನೆ ಮುಂದುವರೆಸಿದ್ದಾರೆ. ಎಚ್.ಡಿ.ಕುಮಾರಸ್ವಾಮಿ, ಸುರೇಶ್ ಕುಮಾರ್ ಮುಂತಾದವರು ಪ್ರತಿಭಟನೆಗೆ ಕೈ ಜೋಡಿಸಿದ್ದಾರೆ.
ಅಂಕಗಳ ಗೊಂದಲದ ಹಿನ್ನಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ವಿಧಾನಸೌಧದಲ್ಲಿ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿ ನಡೆಸುತ್ತಿದ್ದಾರೆ. ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು ಇಲ್ಲಿವೆ.... [ಶುಕ್ರವಾರವೂ ಮುಂದುವರೆದ ವಿದ್ಯಾರ್ಥಿಗಳ ಪ್ರತಿಭಟನೆ]

* ಗ್ರಾಮ ಪಂಚಾಯಿತಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ನಾನು ಫಲಿತಾಂಶವನ್ನು ಪ್ರಕಟಿಸಿಲ್ಲ. ಎರಡು ಖಾಸಗಿ ವೆಬ್ಸೈಟ್ಗಳಲ್ಲಿ ತಪ್ಪು ಫಲಿತಾಂಶ ಪ್ರಕಟಗೊಂಡಿದೆ. ಈ ಬಗ್ಗೆ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. [ಪಿಯು ಗೊಂದಲ : ಕಡೆಗೂ ಎಚ್ಚೆತ್ತ ಕಿಮ್ಮನೆ ರತ್ನಾಕರ]
* ಫಲಿತಾಂಶ ಪ್ರಕಟವಾದಾಗ ಅಧಿಕಾರಿಗಳು ಗಮನ ಕೊಡಬೇಕಾಗಿತ್ತು. ಸಾರ್ವಜನಿಕರಿಗೆ ಮಾಹಿತಿ ನೀಡುವಲ್ಲಿ ಇಲಾಖೆ ಅಧಿಕಾರಿಗಳು ವಿಫಲವಾಗಿದ್ದಾರೆ. ನಾವು ವೆಬ್ಸೈಟ್ಗಳಿಗೆ ನೀಡಿರುವ ಸಿಡಿಯಲ್ಲಿ ಯಾವುದೇ ತಪ್ಪುಗಳು ಆಗಿಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇನೆ.
* ಗ್ರೇಸ್ ಅಂಕಗಳನ್ನು ನೀಡುವಾಗ ನಿಯಮಗಳನ್ನು ಪಾಲಿಸಲಾಗಿದೆ. ತಪ್ಪು ಪ್ರಶ್ನೆಗಳಿಗೆ ಉತ್ತರ ಬರೆಯಲು ಪ್ರಯತ್ನಿಸಿದ ವಿದ್ಯಾರ್ಥಿಗಳಿಗೆ ಮಾತ್ರ ಅಂಕಗಳನ್ನು ನೀಡಲಾಗುತ್ತದೆ, ಹಿಂದೆಯೂ ಹೀಗೆ ಮಾಡಲಾಗಿದೆ.
* ಅಂಕಗಳ ಗೊಂದಲದ ಹಿನ್ನಲೆಯಲ್ಲಿ ಸಿಇಟಿ ಫಲಿತಾಂಶ ಮುಂದೂಡಲು ಮನವಿ ಮಾಡಲಾಗಿದೆ. ಜೂನ್ 1ರ ನಂತರ ಫಲಿತಾಂಶ ಪ್ರಕಟಿಸುವಂತೆ ಕೋರಿದ್ದೇವೆ.
*ಮರು ಮೌಲ್ಯಮಾಪನಕ್ಕೆ ತಂಡ ರಚನೆ ಮಾಡಿದ್ದೇವೆ, ಒಂದು ಪತ್ರಿಕೆಯನ್ನು ಮೂವರು ಮರು ಮೌಲ್ಯಮಾಪನ ಮಾಡುತ್ತಾರೆ. 6 ಅಂಕಗಳಿಗಿಂತ ಹೆಚ್ಚು ಅಂಕಗಳು ಪಡೆದರೆ ಮಾತ್ರ ಹಣವನ್ನು ವಾಪಸ್ ನೀಡಲಾಗುತ್ತದೆ. ಇದಕ್ಕಿಂತ ಕಡಿಮೆ ಬಂದರೆ ಶುಲ್ಕ ವಾಪಸ್ ಕೊಡುವುದಿಲ್ಲ. ಈ ನಿಯಮವನ್ನು ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಮಾಡಲಾಗಿದೆ.
* ಈ ಹಂತದಲ್ಲಿ ಯಾವ ಶುಲ್ಕವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಮುಂದಿನ ಶೈಕ್ಷಣಿಕ ವರ್ಷ ಈ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ.












Click it and Unblock the Notifications