ಉಪನ್ಯಾಸಕರ ಪ್ರತಿಭಟನೆ: ಎಂಎಲ್ಸಿಗಳ ಮೇಲೆ ತೂರಿಬಂದ ಚಪ್ಪಲಿ
ಬೆಂಗಳೂರು, ಏಪ್ರಿಲ್, 14 : ಮೌಲ್ಯಮಾಪನ ಬಹಿಷ್ಕಾರ ಮಾಡಿ ಪ್ರತಿಭಟನೆ ನಡೆಸುತ್ತಿರುವ ಪಿಯು ಉಪನ್ಯಾಸಕರ ಆಕ್ರೋಶ ಇದೀಗ ವಿಧಾನ ಪರಿಷತ್ ಸದಸ್ಯರ ಮೇಲೆ ತಿರುಗಿದೆ. ಪ್ರತಿಭಟನೆ ನಡೆಸುತ್ತಿದ್ದ ಫ್ರೀಡಂ ಪಾರ್ಕ್ ಗೆ ಆಗಮಿಸಿದ ವಿಧಾನ ಪರಿಷತ್ ಸದಸ್ಯರಿಗೆ ಘೇರಾವ್ ಹಾಕಿದ ವೇಳೆ ಸದಸ್ಯರ ಮೇಲೆ ಚಪ್ಪಲಿಯೊಂದು ತೂರಿ ಬಂದಿದೆ.
ಪ್ರತಿಭಟನಾ ಸ್ಥಳಕ್ಕೆ ಗುರುವಾರ ಮಧ್ಯಾಹ್ನ ಆಗಮಿಸಿದ ಪರಿಷತ್ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ , ಅರುಣ್ ಶಹಾಪುರ್ ಸೇರಿದಂತೆ ನಾಲ್ವರ ವಿರುದ್ಧ ಉಪನ್ಯಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಹೊರಟು ಹೋಗಿ ಇಲ್ಲಿಂದ, ನಿಮ್ಮಿಂದ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ ಎಂದು ಘೋಷಣೆ ಕೂಗಿದರು.[ಮೌಲ್ಯ ಮಾಪನ ವಿವಾದ : ಮುರಿದು ಬಿತ್ತು 4ನೇ ಸಂಧಾನ ಸಭೆ]
ಉಪನ್ಯಾಸಕರ ಆಕ್ರೋಶ ಕಂಡು ನಾಲ್ವರು ಪರಿಷತ್ ಸದಸ್ಯರು ಸ್ಥಳದಿಂದ ವಾಪಾಸಾಗಲು ಮುಂದಾದರು. ಈ ವೇಳೆ ಚಪ್ಪಲಿಯೊಂದು ಪರಿಷತ್ ಸದಸ್ಯರತ್ತ ತೂರಿಬಂತು. ಆದರೆ ಯಾರಿಗೂ ಚಪ್ಪಲಿ ತಾಗಲಿಲ್ಲ.[ಅರವಿಂದ್ ಕೇಜ್ರಿವಾಲ್ ಮೇಲೆ ತೂರಿಬಂತು ಶೂ]
ಉಪನ್ಯಾಸಕರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ನಡೆಸಿದ ಎಲ್ಲ ಸಂಧಾನ ಸಭೆಗಳು ವಿಫಲವಾಗಿವೆ. ಪಿಯು ಮೌಲ್ಯಮಾಪನಕ್ಕೆ ಪರ್ಯಾಯ ಕ್ರಮಗಳತ್ತ ಯೋಚನೆ ಮಾಡುತ್ತಿರುವುದಾಗಿ ಕಿಮ್ಮನೆ ಗುರುವಾರ ಬೆಳಗ್ಗೆ ಹೇಳಿದ್ದಾರೆ.