ಮದ್ದೂರಲ್ಲಿ ಪೊಲೀಸರ ನಿರ್ಲಕ್ಷ್ಯ ವಿರುದ್ಧ ಸಿಡಿದೆದ್ದ ಸಾರ್ವಜನಿಕರು
ಮಂಡ್ಯ,ಫೆಬ್ರವರಿ,10: ಮದ್ದೂರಿನ ಎಪಿಎಂಸಿ ಮಾರುಕಟ್ಟೆ ಬಳಿ ನಡೆದ ಕಾರು-ಟಿವಿಎಸ್ ಮೊಪೆಡ್ ನಡುವೆ ನಡೆದ ಅಪಘಾತಕ್ಕೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಸಾರ್ವಜನಿಕರು ಬುಧವಾರ ಪ್ರತಿಭಟನೆ ನಡೆಸಿದರು.
ಗೊರವನಹಳ್ಳಿ ಗ್ರಾಮದ ನಿವಾಸಿ ಶಿವರಾಜು ತಮ್ಮ ಮಗಳು ಮಾನಸಳನ್ನು ಪಟ್ಟಣದ ಎಚ್.ಕೆ.ವಿ. ಕಾಲೇಜಿಗೆ ಬಿಡಲು ಟಿವಿಎಸ್ ಮೊಪೆಡ್ ನಲ್ಲಿ ಬರುತ್ತಿದ್ದಾಗ ಎಪಿಎಂಸಿ ಮಾರುಕಟ್ಟೆ ಹೆದ್ದಾರಿಯಲ್ಲಿ ಲಾರಿಗಳು ಅಸ್ತವ್ಯಸ್ತವಾಗಿ ನಿಂತಿದ್ದ ಪರಿಣಾಮ ಶಿವರಾಜು ಅವರು ತಿರುವು ತೆಗೆದುಕೊಳ್ಳಲು ಹೋದಾಗ ಹಿಂದಿನಿಂದ ಬಂದ ಕಾರು ಇವರ ಮೊಪೆಡ್ ಗೆ ಡಿಕ್ಕಿ ಹೊಡೆದು ಇಬ್ಬರು ತೀವ್ರ ಗಾಯಗೊಂಡರು.[ವಿದ್ಯಾರ್ಥಿನಿ ಬೆನ್ನುಬಿದ್ದ ಪೇದೆಗೆ ಬಿತ್ತು ಭರ್ತಿ ಒದೆ!]

ಅಪಘಾತ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು. ಅಷ್ಟರಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಚನ್ನೇಗೌಡನದೊಡ್ಡಿ ಗ್ರಾಮಸ್ಥರು ಈ ಅಪಘಾತಕ್ಕೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿ ಪೊಲಿಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.[ಮಂಡ್ಯ: ಚಾಲಕನ ನಿರ್ಲಕ್ಷಯದಿಂದ ಕೆಎಸ್ಸಾರ್ಟಿಸಿ ಬಸ್ ನದಿಗೆ ಬಿತ್ತೇ?]
ಲಾರಿಗಳನ್ನು ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದರಿಂದ ಎಪಿಎಂಸಿ ಮಾರುಕಟ್ಟೆ ಬಳಿ ಪ್ರತಿನಿತ್ಯ ಅಪಘಾತಗಳು ನಡೆಯುತ್ತಿವೆ. ದ್ವಿಚಕ್ರವಾಹನ ಸವಾರರು ಭಯದಲ್ಲಿ ಸಂಚರಿಸುವಂತಾಗಿದೆ ಎಂದು ದೂರಿದ ಪ್ರತಿಭಟನಾಕಾರರು ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಸ್ಥಳದಲ್ಲಿದ್ದ ಪಿಎಸ್ಐ ವಿವೇಕಾನಂದ ಉದ್ರಿಕ್ತ ನಾಗರಿಕರನ್ನು ಸಮಾಧಾನಪಡಿಸಿ, ಕೂಡಲೇ ಈ ಸ್ಥಳದಲ್ಲಿ ಲಾರಿ ನಿಲ್ಲದಂತೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ ಮೇರೆಗೆ ನಾಗರಿಕರು ಪ್ರತಿಭಟನೆ ಹಿಂದಕ್ಕೆ ಪಡೆದರು.












Click it and Unblock the Notifications