ಡಿ.2ರ ಮಂಗಳವಾರ ಬ್ಯಾಂಕ್ ಬಂದ್
ಬೆಂಗಳೂರು, ಡಿ.1 : ವೇತನ ಪರಿಷ್ಕರಣೆಗೆ ಒತ್ತಾಯಿಸಿ ರಾಷ್ಟ್ರೀಕೃತ ಬ್ಯಾಂಕ್ ನೌಕರರು ಡಿ.2ರ ಮಂಗಳವಾರ ರಾಜ್ಯಾದ್ಯಂತ ಮುಷ್ಕರ ಹಮ್ಮಿಕೊಂಡಿದ್ದಾರೆ. ಆದ್ದರಿಂದ ಬ್ಯಾಂಕ್ ವ್ಯವಹಾರಗಳಿಗೆ ತೊಂದರೆ ಆಗಲಿದ್ದು, ಸಾರ್ವಜನಿಕರು ಸೋಮವಾರವೇ ತಮ್ಮ ಕೆಲಸ ಮುಗಿಸಿಕೊಳ್ಳುವುದು ಒಳ್ಳೆಯದು.
ನವೆಂಬರ್ 12ರಂದು ದೇಶಾದ್ಯಂತ ಪ್ರತಿಭಟನೆ ನಡೆಸಿದ್ದ ಬ್ಯಾಂಕ್ ನೌಕರರು ಸದ್ಯ ಪ್ರಾದೇಶಿಕ ಮಟ್ಟದಲ್ಲಿ ಮುಷ್ಕರ ನಡೆಸಿ ವೇತನ ಪರಿಷ್ಕರಣೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಕರ್ನಾಟಕ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಡಿ.2ರಂದು ಮುಷ್ಕರ ನಡೆಯಲಿದೆ.

ಇಂದು ಸಂಜೆ 5 ಗಂಟೆಗೆ ಕೆನರಾ ಬ್ಯಾಂಕ್ ಮುಖ್ಯ ಕಚೇರಿಯಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಲಿರುವ ಬ್ಯಾಂಕ್ ನೌಕರರು, ಡಿ.2ರಂದು ಬೆಳಗ್ಗೆ 10ಗಂಟೆಗೆ ಪುರಭವನದಿಂದ ಮೆರವಣಿಗೆ ಆರಂಭಿಸಿ, ಮೈಸೂರು ಬ್ಯಾಂಕ್ ಕೇಂದ್ರ ಕಚೇರಿವರೆಗೆ ತೆರಳಿ ಮನವಿ ಅಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. [ದೇಶಾದ್ಯಂತ ಬ್ಯಾಂಕ್ ಮುಷ್ಕರ]
ಶೇ 25ರಷ್ಟು ವೇತನ ಹೆಚ್ಚಳ ಮಾಡಬೇಕೆಂದು ನೌಕರರು ಒತ್ತಾಯಿಸುತ್ತಿದ್ದಾರೆ. ಆದರೆ, ಬ್ಯಾಂಕ್ ಆಡಳಿತ ಮಂಡಳಿ ಶೇ 11ರವರೆಗೆ ವೇತನ ಹೆಚ್ಚಳಕ್ಕೆ ಸಮ್ಮತಿ ಸೂಚಿಸಿವೆ. ಇದನ್ನು ನೌಕರರು ತಿರಸ್ಕರಿಸಿದ್ದು, ವೇತನ ಹೆಚ್ಚಿಸಬೇಕೆಂದು ಪ್ರತಿಭಟನೆ ನಡೆಸುತ್ತಿದ್ದಾರೆ. [ವಲಯ ಮಟ್ಟದಲ್ಲಿ ಬ್ಯಾಂಕ್ ಮುಷ್ಕರದ ದಿನಾಂಕಗಳು]
ರಾಷ್ಟ್ರೀಕೃತ ಬ್ಯಾಂಕ್ ನೌಕರ ಮುಷ್ಕರದಿಂದಾಗಿ ಮಂಗಳವಾರ ಬ್ಯಾಂಕ್ ಕೆಲಸಗಳಿಗೆ ಅಡಚಣೆ ಉಂಟಾಗಲಿದೆ. ಆದ್ದರಿಂದ ಸೋಮವಾರ ಕೆಲಸ ಮುಗಿಸಿಕೊಳ್ಳವುದು ಉತ್ತಮ. ಎಟಿಎಂಗಳು ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ಹಣ ಪಡೆಯಲು ಯಾವುದೇ ತೊಂದರೆ ಉಂಟಾಗುವುದಿಲ್ಲ.
'ನೌಕರರ ಶ್ರಮದಿಂದ ರಾಷ್ಟ್ರೀಕೃತ ಬ್ಯಾಂಕ್ಗಳು ಕಳೆದ 5 ವರ್ಷದಲ್ಲಿ 1.30 ಲಕ್ಷ ಕೋಟಿ ರೂ. ಲಾಭ ಗಳಿಸಿವೆ. ಅಲ್ಲದೆ, ಕಳೆದ ತ್ರೈಮಾಸಿಕವೂ ಉತ್ತಮವಾಗಿದೆ. ಆದ್ದರಿಂದ ವೇತನ ಹೆಚ್ಚಿಸಬೇಕು. ಸರ್ಕಾರ ಮಧ್ಯ ಪ್ರವೇಶಿಸಿ ಈ ಬಗ್ಗೆ ಸೂಕ್ತ ನಿರ್ದೇಶನ ನೀಡಬೇಕು' ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ಅಧ್ಯಕ್ಷ ವೈ.ಸುದರ್ಶನ್ ಹೇಳಿದ್ದಾರೆ.












Click it and Unblock the Notifications