ಪಿಎಸ್ಐ ನೇಮಕ ಅಕ್ರಮ ಇಡೀ ಸಮಾಜಕ್ಕೆ ಅಪಾಯದ ಗಂಟೆ ಎಂದ ಹೈಕೋರ್ಟ್
ಬೆಂಗಳೂರು,ಜು.7. ಪಿಎಸ್ ಐ ನೇಮಕಾತಿಯ ಅಕ್ರಮ ಸಮಾಜಕ್ಕೆ ದೊಡ್ಡ ಅಪಾಯ ಎಂದು ಅಭಿಪ್ರಾಯಪಟ್ಟಿದೆ. ಪ್ರಕರಣದಲ್ಲಿನ ಆರೋಪಿ ಸಿ.ಎನ್.ಶಶಿಧರ್ ಮತ್ತಿತರರು ಜಾಮೀನು ಮತ್ತು ಎಫ್ ಐಆರ್ ರದ್ದು ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ವಿಚಾರಣೆ ನಡೆಸುತ್ತಿರುವ ನ್ಯಾ.ಎಚ್. ಪಿ. ಸಂದೇಶ್, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅಕ್ರಮ ನೇಮಕ ಪ್ರಕರಣದ ಸಂಬಂಧ ಬ್ಲೂಟೂತ್ ಬಳಕೆ ಸೇರಿದಂತೆ ನಡೆಸಿರುವ ಅಕ್ರಮ ವಿಧಾನಗಳು, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳು ಹಾಗೂ ತಿದ್ದುಪಡಿ ಮಾಡಿರುವ ಒಎಂಆರ್ ಶೀಟ್ ಗಳ ಪ್ರತಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿಗೆ ನಿರ್ದೇಶನ ನೀಡಿದೆ.
ಆ ವೇಳೆ ಸಿಐಡಿ ಪರ ವಕೀಲರು, ಜಾಮೀನು ಅರ್ಜಿಗಳು ಹಾಗೂ ಎಫ್ಐಆರ್ ಪ್ರಕರಣ ರದ್ದು ಕೋರಿ ಸಲ್ಲಿಸಿರುವ ಅರ್ಜಿಗಳ ಸಂಬಂಧ ಆಕ್ಷೇಪಣೆಗಳನ್ನು ಸಲ್ಲಿಸಲಾಗಿದೆ. ಜೊತೆಗೆ ತಿದ್ದುಪಡಿ ಮಾಡಿರುವ 32 ಒಎಂಆರ್ ಶೀಟ್ ಗಳನ್ನು ಸಲ್ಲಿಸಲಾಗಿದೆ. ಕೋರ್ಟ್ ಅವುಗಳನ್ನು ಪರಿಶೀಲಿಸಬೇಕು ಎಂದು ಹೇಳಿದರು.
ಜೊತೆಗೆ ಪ್ರಕರಣದ ಸಂಬಂಧ ಎಡಿಜಿಪಿ ಅಮೃತ್ ಪೌಲ್ ಬಂಧನ ಸೇರಿದಂತೆ ತನಿಖೆಯ ಪ್ರಗತಿಯ ಕುರಿತ ತಾಜಾ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿನ್ಯಾಯಾಲಯಕ್ಕೆ ಸಲ್ಲಿಸಲಾಯಿತು.
ಆಗ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿದ ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯ(ಆರ್ಎಫ್ಎಸ್ಎಲ್) ಸಲ್ಲಿಸಿ, ಅವುಗಳ ಪ್ರಕಾರ ಏನೇನು ತಿದ್ದುಪಡಿಗಳನ್ನು ಮಾಡಲಾಗಿದೆ, ಎಲ್ಲೆಲ್ಲಿ ಒಎಂಆರ್ ತಿದ್ದುಪಡಿ ಬದಲಾವಣೆ ಮಾಡಲಾಗಿದೆ ಎಂಬುದರ ಕುರಿತು ವಿವರಗಳನ್ನು ಸಲ್ಲಿಸಬೇಕು ಎಂದು ಸಿಐಡಿಗೆ ನಿರ್ದೇಶನ ನೀಡಿತು.

ಅಲ್ಲದೆ, ಬ್ಲೂಟೂತ್ ಸೇರಿದಂತೆ ಯಾವ್ಯಾವ ಅಕ್ರಮ ವಿಧಾನಗಳನ್ನು ಬಳಸಲಾಗಿದೆ(ಮೋಡಸ್ ಆಪರಂಡಿ) ಎಂಬ ಮಾಹಿತಿಯನ್ನು ಮುಂದಿನ ವಿಚಾರಣೆ ಸಲ್ಲಿಸಬೇಕು. ಜೊತೆಗೆ ತನಿಖೆಯ ಪ್ರಗತಿಯ ವರದಿಯನ್ನು ಸಲ್ಲಿಸಬೇಕು ಎಂದು ಸೂಚನೆ ನೀಡಿ ವಿಚಾರಣೆಯನ್ನು ಜು.14ಕ್ಕೆ ಮುಂದೂಡಿತು.
50 ಸಾವಿರ ಸಂತ್ರಸ್ತರು:
ವಕೀಲರು, ತನಿಖಾಧಿಕಾರಿಗಳ ಪ್ರಕಾರ ಯಾರೋ ಕೆಲವರು ಅಂದರೆ 32 ಮಂದಿ ಮಾತ್ರ ಕಳಂಕಿತರಿದ್ದಾರೆ, ಆದರೆ ಆಯ್ಕೆಯಾದ ಎಲ್ಲರನ್ನೂ ಸಂಶಯದಿಂದ ನೋಡಲಾಗುತ್ತಿದೆ ಎಂದರು. ಅದಕ್ಕೆ ಉತ್ತರಿಸಿದ ನ್ಯಾಯಮೂರ್ತಿ, ''ಪಿಎಸ್ಐ ಅಕ್ರಮ ಪ್ರಕರಣದಲ್ಲಿಪರೀಕ್ಷೆ ಬರೆದಿದ್ದ 50 ಸಾವಿರ ವಿದ್ಯಾರ್ಥಿಗಳು ನೊಂದಿದ್ದಾರೆ. ಅವರೆಲ್ಲರೂ ಒಂದು ರೀತಿಯಲ್ಲಿಸಂತ್ರಸ್ತರೇ. ಮಧ್ಯವರ್ತಿಗಳೂ ಅಕ್ರಮದಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ'' ಎಂದರು.
ತಪ್ಪಿತಸ್ಥರನ್ನು ಬಿಡಬಾರದು:
ನಿಜವಾದ ಸಂತ್ರಸ್ತರಿಗೆ ನ್ಯಾಯ ಒದಗಿಸುವುದು ಮತ್ತು ತಪ್ಪಿತಸ್ಥರನ್ನು ಶಿಕ್ಷಿಸುವುದು ಕೋರ್ಟ್ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿಕೋರ್ಟ್ ತನಿಖೆಯ ಮೇಲ್ವಿಚಾರಣೆ ನಡೆಸುತ್ತಿದೆ. ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾದರೂ ಕಾನೂನಿನ ಸಂಕೋಲೆಯಿಂದ ತಪ್ಪಿಸಿಕೊಳ್ಳಬಾರದು ಎಂದು ಅಭಿಪ್ರಾಯಟ್ಟರು.
ಕಳೆದ ವಿಚಾರಣೆ ವೇಳೆಯೂ, ನಿಜವಾದ ಅಪರಾಧಿಗಳನ್ನು ಬಂಧಿಸಬೇಕು, ಪೊಲೀಸ್ ಇಲಾಖೆಯ ಮೇಲಿನ ಗೌರವ ಉಳಿಯುವಂತೆ ತನಿಖೆ ಮಾಡಬೇಕು ಎಂದು ಸಿಐಡಿ ಎಡಿಜಿಪಿ ಸಂಧು ಅವರಿಗೆ ನ್ಯಾಯಾಲಯ ನಿರ್ದೇಶನ ನೀಡಿತ್ತು. ಆದಾದ ನಂತರ ಪೊಲೀಸರು ಪ್ರಕರಣದ ಸಂಬಂಧ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ಅವರನ್ನು ಬಂಧಿಸಿದ್ದರು.












Click it and Unblock the Notifications