ನವ ವಧುಗಳಿಗೆ ತಾಳಿ ಕಟ್ಟಿಸುವ ಮುನ್ನ ತಾನೇ ಕೋಳ ಹಾಕಿಸಿಕೊಂಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ!
ಬೆಂಗಳೂರು, ಏ. 22: ಪಿಎಸ್ಐ ನೇಮಕಾತಿಯಲ್ಲಿ ಪ್ರಭಾವಿ ರಾಜಕಾರಣಿಗಳೇ ಶಾಮೀಲಾಗಿದ್ದು, ಸಿಐಡಿ ಪೊಲೀಸರು ಒಬ್ಬೊಬ್ಬರಿಗೂ ಕೋಳ ತೊಡಿಸುತ್ತಿದ್ದಾರೆ. ಪಿಎಸ್ಐ ನೇಮಕಾತಿ ಅಕ್ರಮ ಸಂಬಂಧ ಅಫಜಲಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನನ್ನು ಸಿಐಡಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಮಹಾಂತೇಶ್ ಪಾಟೀಲ್ ಬಂಧಿತ ಆರೋಪಿ. ಪಿಎಸ್ಐ ಆಕಾಂಕ್ಷಿಗಳಿಂದ ಹಣ ಪಡೆದು ಬ್ಲೂಟೂತ್ ಒದಗಿಸಿದ್ದ. ಈ ಮೂಲಕ ಪರೀಕ್ಷೆಯಲ್ಲಿ ಅಕ್ರಮಕ್ಕೆ ಅವಕಾಶ ಮಾಡಿಕೊಟ್ಟ ಆರೋಪದ ಮೇಲೆ ಮಹಾಂತೇಶ್ ಪಾಟೀಲ್ನನ್ನು ಬಂಧಿಸಿದ್ದಾರೆ. ಇನ್ನೂ ಇವರ ಸಹೋದರ ಆರ್.ಡಿ. ಪಾಟೀಲ್ ಶಾಮೀಲಾಗಿರುವ ಆರೋಪ ಕೇಳಿ ಬಂದಿದ್ದು, ಆತನಿಗಾಗಿ ಶೋಧ ನಡೆಸುತ್ತಿದ್ದಾರೆ.
ಸಾಮೂಹಿಕ ವಿವಾಹ ಆಯೋಜಿಸಿದ್ದ ಪಾಟೀಲ್
ಮಹಾಂತೇಶ್ ಪಾಟೀಲ್ ಮತ್ತು ಆತನ ಸಹೋದರ ಆರ್.ಡಿ. ಪಾಟೀಲ್ ಮುಂದಿನ ಚುನಾವಣೆ ಗುರಿಯಿಟ್ಟುಕೊಂಡು ತಾಲೂಕಿನಲ್ಲಿ ನಾನಾ ಸಾಮಾಜಿಕ ಸೇವಾ ಕಾರ್ಯಗಳನ್ನು ಆಯೋಜಿಸುತ್ತಿದ್ದರು. ಶನಿವಾರ ಅಫಜಲಪುರ ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್ ನಲ್ಲಿ 101 ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಿದ್ದ. ನಾಳೆ 101 ನವ ಜೋಡಿ ತಾಳಿ ಕಟ್ಟಿ ಸಪ್ತ ಪದಿ ತುಳಿಯಲು ಮಹಾಂತೇಶ್ ಪಾಟೀಲ್ ಕಾರ್ಯಕ್ರಮ ಆಯೋಜಿಸಿದ್ದ. ಕಾರ್ಯಕ್ರಮ ನಿರ್ವಹಣೆ ಮಾಡಲು ನ್ಯಾಷನಲ್ ಫಂಕ್ಷನ್ ಹಾಲ್ ನಲ್ಲಿದ್ದ ಮಹಾಂತೇಶ್ ಪಾಟೀಲ್ ಸಿಐಡಿ ಪೊಲೀಸರು ಬಂಧಿಸಿ ಕೈಗೆ ಕೋಳ ತೊಡಿಸಿದ್ದಾರೆ.

ಅಫಜಲಪುರ ತಾಲೂಕಿನಿಂದ ಸುಮಾರು ವಿದ್ಯಾರ್ಥಿಗಳು ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಪಿಎಸ್ಐ ನೇಮಕಾತಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಹೆಸರು ಗಿಟ್ಟಿಸಿದ್ದರು. ಅಕ್ರಮದ ಸಣ್ಣ ಸುಳಿವು ಆಧರಿಸಿ ಕಾರ್ಯಚರಣೆ ನಡೆಸಿದ ಸಿಐಡಿ ಅಧಿಕಾರಿಗಳು ಈ ಜಾಲದ ಹಿಂದಿರುವ ದೊಡ್ಡ ಕುಳಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿ ಪಕ್ಷದ ಮುಖಂಡರಾಗಿದ್ದ ಮತ್ತು ಜ್ಞಾನಜ್ಯೋತಿ ಶಾಲೆಯ ಕಾರ್ಯದರ್ಶಿ ದಿವ್ಯ ಹಾಗರಗಿ ಕೂಡ ಅಕ್ರಮದಲ್ಲಿ ಶಾಮೀಲಾಗಿರುವುದನ್ನು ಸಿಐಡಿ ಪೊಲೀಸರು ಬಯಲಿಗೆ ಎಳೆದಿದ್ದರು. ಅವರ ಪತಿಯನ್ನು ಈಗಾಗಲೇ ಬಂಧಿಸಿದ್ದು, ಆಕೆಗಾಗಿ ಶೋಧ ನಡೆಸುತ್ತಿದ್ದಾರೆ. ನಿರೀಕ್ಷಣಾ ಜಾಮೀನು ಕೋರಿ ದಿವ್ಯಾ ಹಾಗರಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅತಿ ಶೀಘ್ರದಲ್ಲಿಯೇ ಆಕೆಯನ್ನು ಪೊಲೀಸರು ಬಂಧಿಸುವ ಸಾಧ್ಯತೆಯಿದೆ.

ಆರ್.ಡಿ ಪಾಟೀಲ್ ಕಿಂಗ್ ಪಿನ್:
ಪಿಎಸ್ಐ ಮಾತ್ರವಲ್ಲದೇ ಸರ್ಕಾರ ಉದ್ಯೋಗದ ಲಿಖಿತ ಪರೀಕ್ಷೆಗಳಲ್ಲಿ ದೊಡ್ಡ ಮಟ್ಟದ ಅಕ್ರಮವನ್ನು ಈ ಹಿಂದಿನಿಂದಲೂ ನಡೆಸುತ್ತಿದ್ದ. ಈ ಮೂಲಕವೇ ಕೋಟ್ಯಂತರ ರೂಪಾಯಿ ಗಳಿಸಿದ ಅರೋಪ ಆರ್.ಡಿ. ಪಾಟೀಲ್ ಮೇಲಿದೆ. ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಂದ ಲಕ್ಷ ಲಕ್ಷ ಹಣ ಪಡೆದು ಅವರಿಗೆ ಎಲೆಕ್ಟ್ರಾನಿಕ್ ಡಿವೈಎಸ್ ಕಲ್ಪಿಸಿಕೊಟ್ಟಿದ್ದ. ಅದರ ನೆರವಿನಿಂದ ಈತನಿಗೆ ಹಣ ಕೊಟ್ಟಿದ್ದ ಬಹುತೇಕ ಅಭ್ಯರ್ಥಿಗಳು ಪಿಎಸ್ಐ ಹುದ್ದೆ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದರು.

ಪಿಎಸ್ಐ ನೇಮಕಾತಿ ಅಕ್ರಮ ಹೊರ ಬೀಳುತ್ತಿದ್ದಂತೆ ಆರ್.ಡಿ. ಪಾಟೀಲ್ ತಲೆ ಮರೆಸಿಕೊಂಡಿದ್ದಾನೆ. ಆತನ ಸಹೋದರ ಮಹಾಂತೇಶ್ ಪಾಟೀಲ್ನನ್ನು ಸಿಐಡಿ ಪೊಲೀಸರು ಬಂಧಿಸಿದ್ದು, ಮತ್ತಷ್ಟು ದೊಡ್ಡ ಕುಳಗಳು ಈ ಅಕ್ರಮದಲ್ಲಿ ಬಂಧನಕ್ಕೆ ಒಳಗಾಗಲಿದ್ದಾರೆ. ಡಿವೈಎಸ್ಪಿ ಶಂಕರ್ ಗೌಡ ಪಾಟೀಲ್ ಮತ್ತು ಪ್ರಕಾಶ್ ರಾಥೋಡ್ ನೇತೃತ್ವದ ತಂಡ ಈ ಅಕ್ರಮದ ಜಾಲವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ.












Click it and Unblock the Notifications