ಧರಣಿ ಕೂತ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ತಂದೆ
ಬೆಂಗಳೂರು, ಫೆಬ್ರವರಿ 19 : ಭೋರ್ಗಲ್ಲ ಮೇಲೆ ಮಳೆಗರೆದರಾ ಕಲ್ಲು ನೀರ್ಕುಡಿಯಬಹುದೆ ಸರ್ವಜ್ಞ? ದುರಂತ ಸಾವಿಗೀಡಾದ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಪ್ರಕರಣದಲ್ಲಿಯೂ ಸರ್ಕಾರ ಭೋರ್ಗಲ್ಲಿನಂತಾಗಿದೆಯೆ? ಬಂಡೆಯ ಸಾವಿನ ನಂತರ ಅವರ ಕುಟುಂಬ ಕೇಳುತ್ತಿರುವ ಬೇಡಿಕೆಗಳೆಲ್ಲ ಭೋರ್ಗಲ್ಲ ಮೇಲೆ ಮಳೆ ಸುರಿಸಿದಂತಾಗಿದೆ. ಬಂಡೆ ವಿಚಾರದಲ್ಲಿ ಸರ್ಕಾರ 'ಬಂಡೆ'ಯಂತೆ ನಿಂತಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ.
ಬೆಂಗಳೂರಿನ ಮೌರ್ಯ ಸರ್ಕಲ್ ಬಳಿ ಇರುವ ಗಾಂಧಿ ಪ್ರತಿಮೆ ಮುಂದೆ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಅವರ ತಂದೆ ಕರಿಬಸಪ್ಪ ಅವರು ಶುಕ್ರವಾರ ಪ್ರತಿಭಟನೆ ನಡೆಸುತ್ತಿದ್ದು, ವಿವಿಧ ಸಂಘಟನೆಗಳ ಸದಸ್ಯರು ಮತ್ತು ಪ್ರತಿಪಕ್ಷ ಬಿಜೆಪಿಯ ನಾಯಕರು ಕರಿಬಸಪ್ಪ ಅವರ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ. [ಮಲ್ಲಿಕಾರ್ಜುನ ಬಂಡೆ ಪ್ರಕರಣದ ಹಿನ್ನೋಟ]
ಪಿಎಸ್ಐ ಮಲ್ಲಿಕಾರ್ಜುನ ಬಂಡೆಯವರ ಅಂತ್ಯಕ್ರಿಯೆ ಸಂದರ್ಭದಲ್ಲಿ ಸರ್ಕಾರ ಕೊಟ್ಟ ಭರವಸೆಗಳು ಈಡೇರಿಲ್ಲವೆಂದು ಅಳಲು ತೋಡಿಕೊಂಡಿರುವ ಕರಿಬಸಪ್ಪ ಅವರು, ಮಲ್ಲಿಕಾರ್ಜುನ ಬಂಡೆ ಅವರ ಪತ್ನಿ ಮಲ್ಲಮ್ಮ ಬಂಡೆ ಅವರು ಬ್ರೈನ್ ಟ್ಯೂಮರ್ನಿಂದ ಬಳಲುತ್ತಿದ್ದಾರೆ. ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. [ಮಲ್ಲಿಕಾರ್ಜುನ ಬಂಡೆ ಅಂತಿಯ ಯಾತ್ರೆಯ ಚಿತ್ರಗಳು]
Mallikarjun Bande Who lost his life while apprehending a Underworld Don Govt Promised his Wife a Site, Education for...
Posted by Prakash Sesharaghavachar onFriday, February 19, 2016
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಅವರು, ಮುಖ್ಯಮಂತ್ರಿ, ಗೃಹ ಸಚಿವರೊಂದಿಗೆ ಈ ಕುರಿತು ಚರ್ಚೆ ನಡೆಸಿ ನ್ಯಾಯ ದೊರಕಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಕರಿಬಸಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಗೃಹ ಕಚೇರಿ ಕೃಷ್ಣಾಗೆ ತೆರಳಿದ್ದಾರೆ.... [ಬಂಡೆ ಕುಟುಂಬದ ಬೇಡಿಕೆ ಈಡೇರಿಸಿದ ಸಿದ್ದರಾಮಯ್ಯ]

ಶೂಟೌಟ್ನಲ್ಲಿ ಮಲ್ಲಿಕಾರ್ಜುನ ಬಂಡೆ ಸಾವು
2014ರ ಜನವರಿ 8ರ ಮಧ್ಯಾಹ್ನ ಕಲಬುರಗಿಯ ರೋಜಾ ಪೊಲೀಸ್ ಠಾಣೆ ಸಮೀಪ ಗುಂಡಿನ ಕಾಳಗ ನಡೆದಿತ್ತು. ಮುಂಬೈ ಮೂಲದ ಭೂಗತ ಪಾತಕಿ ಮುನ್ನಾ ಗುಂಡಿನ ಕಾಳಗದಲ್ಲಿ ಮೃತಪಟ್ಟಿದ್ದ. ದಾಳಿಯಲ್ಲಿ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಮತ್ತು ಎಎಸ್ಐ ಉದ್ದಂಡಪ್ಪ ಗಾಯಗೊಂಡಿದ್ದರು. ತಲೆಗೆ ಗುಂಡು ತಗುಲಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮಲ್ಲಿಕಾರ್ಜುನ ಬಂಡೆ ಮೃತಪಟ್ಟಿದ್ದರು.

ಸರ್ಕಾರ ಘೋಷಣೆ ಮಾಡಿದ ಪರಿಹಾರವೇನು?
ಪಿಎಸ್ಐ ಮಲ್ಲಿಕಾರ್ಜು ಬಂಡೆ ಅವರ ಕುಟುಂಬಕ್ಕೆ 50 ಲಕ್ಷ ಪರಿಹಾರ ಹಾಗೂ 1 ನಿವೇಶನ, ಬಂಡೆ ಅವರ ನಿವೃತ್ತಿವರೆಗಿನ ವೇತನ ನೀಡಲಾಗುವುದು. ಅವರ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲಾಗುತ್ತದೆ ಎಂದು ಅಂದಿನ ಗೃಹ ಸಚಿವರಾದ ಕೆ.ಜೆ.ಜಾರ್ಜ್ ಅವರು ವಿಧಾನಪರಿಷತ್ತಿನಲ್ಲಿ ಹೇಳಿದ್ದರು.

ಬಂಡೆ ಪತ್ನಿ ಆಸ್ಪತ್ರೆಗೆ ದಾಖಲು
ಮಲ್ಲಿಕಾರ್ಜುನ ಬಂಡೆ ಅವರ ತಂದೆ ಕರಿಬಸಪ್ಪ ಅವರು ಹೇಳುವಂತೆ ಮಲ್ಲಿಕಾರ್ಜುನ ಬಂಡೆ ಅವರ ಪತ್ನಿ ಮಲ್ಲಮ್ಮ ಬಂಡೆ ಅವರು ಬ್ರೈನ್ ಟ್ಯೂಮರ್ನಿಂದ ಬಳಲುತ್ತಿದ್ದಾರೆ. ಕಳೆದ 5 ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಸರ್ಕಾರ ಚಿಕಿತ್ಸಾ ವೆಚ್ಚ ಭರಿಸಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿದೆ.

ಮಕ್ಕಳಿಗೆ ಯಾರು ಗತಿ?
ಮಲ್ಲಿಕಾರ್ಜುನ ಬಂಡೆ ಅವರು ನಮ್ಮೊಂದಿಗಿಲ್ಲ, ಮಲ್ಲಮ್ಮ ಅವರ ಪರಿಸ್ಥಿತಿ ಗಂಭೀರವಾಗಿದೆ. ಈಗ ಮಕ್ಕಳನ್ನು ನೋಡಿಕೊಳ್ಳುವವರು ಯಾರು? ಎಂಬುದು ಕರಿಯಪ್ಪ ಅವರ ಪ್ರಶ್ನೆ. ಸರ್ಕಾರ ಬಂಡೆ ಅವರ ಅಂತ್ಯಕ್ರಿಯೆ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಬೇಕು ಎಂಬುದು ಪ್ರಮುಖ ಬೇಡಿಕೆ.

ಮುಖ್ಯಮಂತ್ರಿಗಳ ಸಹಿ ಆಗಿಲ್ಲ
ಬಂಡೆ ಅವರ ನಿವೃತ್ತಿವರೆಗಿನ ವೇತನ ನೀಡಲಾಗುವುದು. ಅವರ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲಾಗುತ್ತದೆ ಎಂದು ಸರ್ಕಾರ ಹೇಳಿತ್ತು. ಈ ಕುರಿತು ಮನವಿ ಪತ್ರ ಸಲ್ಲಿಸಲಾಗಿದೆ. ಅದಕ್ಕೆ ಮುಖ್ಯಮಂತ್ರಿಗಳ ಸಹಿಯಾದರೆ ಸೌಲಭ್ಯ ಸಿಗುತ್ತದೆ. ಆದರೆ, ಮುಖ್ಯಮಂತ್ರಿಗಳು ಇನ್ನೂ ಸಹಿ ಮಾಡಿಲ್ಲ ಎಂಬುದು ಕರಿಬಸಪ್ಪ ಅವರ ಆರೋಪವಾಗಿದೆ.












Click it and Unblock the Notifications