ರೋಹಿತ್ ಚಕ್ರತೀರ್ಥ ಸಮಿತಿ ವಿಸರ್ಜನೆಗೆ ಆಗ್ರಹಿಸಿ ಮೇ 31ರಂದು ಪ್ರತಿಭಟನೆ
ಬೆಂಗಳೂರು, ಮೇ 25: ಜಾಗೃತ ನಾಗರಿಕರು ಕರ್ನಾಟಕ ವೇದಿಕೆ ಮೂಲಕ ಇಂದು ನಗರದ ಗಾಂಧಿ ಭವನದಲ್ಲಿ ಜರುಗಿದ 'ಪಠ್ಯಪುಸ್ತಕ ರಚನೆ, ಪರಿಷ್ಕರಣೆ ಮರು ಪರಿಷ್ಕರಣೆ ಕುರಿತು ಸಮಾಲೋಚನೆ' ಸಭೆಯಲ್ಲಿ ಕೆಲ ನಿರ್ಣಯ ಕೈಗೊಳ್ಳುವ ಜೊತೆಗೆ ಇದೇ ತಿಂಗಳು 31 ರಂದು ಬೃಹತ್ ಪ್ರತಿಭಟನೆಗರೆ ಕರೆ ನೀಡಲಾಗಿದೆ. ನಾಡಿನ ಸಾಹಿತಿಗಳು, ಚಿಂತಕರು, ಶಿಕ್ಷಣ ತಜ್ಞರು ನೇತೃತ್ವದಲ್ಲಿ ನಡೆದ ಇಂದಿನ ಸಭೆಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯಿಂದ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯನ್ನ ಕೂಡಲೇ ವಜಾ ಮಾಡುವಂತೆ ಆಗ್ರಹಿಸಿದರು.
ಗಾಂಧಿ ಭವನದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಶಿಕ್ಷಣ ತಜ್ಞ ವಿ.ಪಿ ನಿರಂಜನಾರಾಧ್ಯ, ಪ್ರೊ ಕೆ ಮರುಳಸಿದ್ದಪ್ಪ, ಶ್ರೀಪಾದ ಭಟ್, ಬಂಜಗೆರೆ ಜಯಪ್ರಕಾಶ್, ಎಲ್ ಹನುಮಂತಯ್ಯ, ಇಂದೂಧರ ಹೊನ್ನಾವರ, ರಾಜೇಂದ್ರ ಚೆನ್ನಿ , ಜಿ ರಾಜಶೇಖರಮೂರ್ತಿ, ಎಸ್ ಜಿ ಸಿದ್ದರಾಮಯ್ಯ, ವಸುಂಧಾರ ಭೂಪತಿ, ಬಿ.ಟಿ ಲಲಿತಾ ನಾಯಕ್ ಸೇರದಿಂದ ಅನೇಕ ಚಿಂತಕರು ಭಾಗಿಯಾಗಿದ್ದರು.
ಸಭೆಯಲ್ಲಿ ಅನೇಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಪಠ್ಯಪುಸ್ತಕ ಪರಿಷ್ಕರಣೆ ಹೆಸರಿನಲ್ಲಿ ನಡೆಯುತ್ತಿರುವ ತಾರತಮ್ಯವನ್ನು ಮತ್ತು ರಾಜಕೀಯವನ್ನು ಖಂಡಿಸಿದರು. ಅಲ್ಲದೆ, ಸಭೆಯಲ್ಲಿ ಕೆಲವೊಂದು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಪಠ್ಯ ಪುಸ್ತಕ ಪರಿಷ್ಕರಣೆ ಸಮಾಲೋಚನಾ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು
1. ಮೊಟ್ಟ ಮೊದಲಿಗೆ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಮರು ಪರಿಶೀಲನ ಸಮಿತಿಯನ್ನು ರದ್ದುಗೊಳಿಸಬೇಕು
2. ರೋಹಿತ್ ಚಕ್ರತೀರ್ಥ ಸಮಿತಿಯ ಶಿಫಾರಸ್ಸುಗಳನ್ನು ಈ ಕೂಡಲೆ ಜಾರಿಗೆ ಬರುವಂತೆ ತಿರಸ್ಕರಿಸಬೇಕು
3. ಈ ಸಮಿತಿಯು ವಿವಾದ ಮತ್ತು ಗೊಂದಲಗಳನ್ನು ಹುಟ್ಟು ಹಾಕಿರುವುದರಿಂದ ಈ ಪಠ್ಯಗಳನ್ನು ಯಾವುದೇ ಕಾರಣಕ್ಕೂ ಜಾರಿ ಮಾಡದೇ ಈ ಹಿಂದಿನ ಪಠ್ಯಪುಸ್ತಕಗಳನ್ನು ಮುಂದುವರೆಸಬೇಕು
4. ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ಕಾರಣಕ್ಕೆ ಮಕ್ಕಳ ಕಲಿಕೆಯ ಅಂತರ ಹೆಚ್ಚಾಗಿದ್ದು, ಇದರಿಂದಾಗಿ ಕಲಿಕೆಯ ನಷ್ಟವಾಗಿದೆ. ಇಂತಹ ಬಿಕ್ಕಟ್ಟಿನಲ್ಲಿ ಪಠ್ಯಕ್ರಮ ಮರು ರಚನೆಯಂತಹ ಯಾವುದೇ ಬಗೆಯ ಅನಗತ್ಯ ಪ್ರಯೋಗಗಳಿಗೆ ಕೈ ಹಾಕದೆ ಮತ್ತು ಆ ಮೂಲಕ ಇನ್ನಷ್ಟು ಕಲಿಕೆಯ ನಷ್ಟಕ್ಕೆ ಕಾರಣವಾಗದೆ ಈ ಒಂದು ವರ್ಷ ಯಥಾಸ್ಥಿತಿಯನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಸರಕಾರವನ್ನು ಒತ್ತಾಯಿಸಬೇಕು ಎಂದು ಆಗ್ರಹ ಮಾಡಲಾಗಿದೆ
ಸಾಮಾಜಿಕ ಸಂಘಟನೆಗಳು, ಶಿಕ್ಷಣ ತಜ್ಞರ ಮುಂದಿರುವ ಜವಾಬ್ದಾರಿಗಳ ಬಗ್ಗೆ ಪ್ರಸ್ತಾಪ
1. ರಾಜ್ಯವ್ಯಾಪಿ ಈ ಮರು ಪರಿಷ್ಕರಣಾ ಸಮಿತಿಯ ಅರ್ಹತೆಯನ್ನು ವಿವಿಧ ನೆಲೆಯಲ್ಲಿ ಪ್ರಶ್ನಿಸಬೇಕು.
2. ಅನಗತ್ಯವಾಗಿ ಮರು ಪರಿಷ್ಕರಣೆಗೆ ಅವಕಾಶ ಕಲ್ಪಿಸಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ರನ್ನು ವಜಾಗೊಳಿಸಬೇಕು.
3. ಪೋಷಕರ ಜೊತೆ, ಸ್ಥಳೀಯ ಸಂಸ್ಥೆಗಳ ಜೊತೆ, ಎಸ್ಡಿಎಂಸಿಗಳ ಜೊತೆ, ಶಿಕ್ಷಣದ ಭಾಗೀದಾರರ ಜೊತೆಗೆ ನಿರಂತರವಾಗಿ ಸಮಾಲೋಚನೆ, ಚರ್ಚೆ, ಸಂವಾದ ನಡೆಸಬೇಕು ಮತ್ತು ಅವರಿಗೆ ಈ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿಯ ಶಿಫಾರಸ್ಸುಗಳ ಅಪಾಯಗಳನ್ನು ಮನವರಿಕೆ ಮಾಡಿಕೊಡಬೇಕು ಮತ್ತು ಇವರೆಲ್ಲರೂ ಮುಂದಾಗಿ ಈ ಪರಿಷ್ಕರಣೆಯನ್ನು ಕೈ ಬಿಡಬೇಕೆಂದು ಒತ್ತಾಯಿಸುವಂತಾಗಬೇಕು
4. ಮುಖ್ಯವಾಗಿ ಸರಕಾರಗಳು ಬದಲಾದಂತೆ ಆಯಾ ಪಕ್ಷಗಳ ಸಿದ್ಧಾಂತಕ್ಕೆ ಅನುಗುಣವಾಗಿ ಪಠ್ಯಗಳು ಸಹ ಬದಲಾಗುತ್ತಿರುವುದು ಆತಂಕದ ಸಂಗತಿ. ಇದು ಅಂತ್ಯಗೊಳ್ಳಬೇಕಾಗಿದೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸಹ ಈ ಪಠ್ಯಕ್ರಮಗಳನ್ನು ಮನಸೋ ಇಚ್ಚೆ ಬದಲಾಯಿಸದಂತೆ ಒಂದು ವ್ಯವಸ್ಥೆ ಕುರಿತು ನಾವೆಲ್ಲರೂ ಯೋಚಿಸಬೇಕಾಗಿದೆ
5. ಜನತೆಗೆ ನಿಜಾರ್ಥದಲ್ಲಿ ಸಂವಿಧಾನದ ಆಶಯಗಳನ್ನುಳ್ಳ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಒಪ್ಪಿಕೊಂಡ, ಸಾಮಾಜಿಕ ನ್ಯಾಯವನ್ನು ಪಾಲಿಸುವ, ಲಿಂಗ ಸಮಾನತೆಯನ್ನು ಗೌರವಿಸುವ, ಬಹುಸಂಸ್ಕೃತಿಯನ್ನು, ಕನ್ನಡದ ಅಸ್ಮಿತೆಯನ್ನು ಒಳಗೊಂಡ ಒಂದು ಮಾದರಿ ಪರ್ಯಾಯ ಪಠ್ಯಕ್ರಮವನ್ನು ರೂಪಿಸಬೇಕಾಗಿದೆ.
ಇದರಲ್ಲಿ ಈ ಬಿಜೆಪಿ ಸರಕಾರ ಯಾವ ರೀತಿ ತಪ್ಪುಗಳನ್ನು ಮಾಡಿದೆ ಎಂಬುದನ್ನು ಸಹ ವಿವರಿಸಬೇಕು. ಈ ಕಾರ್ಯ ಯೋಜನೆಗಾಗಿ ಒಂದು ತಜ್ಞರ ಸಮಿತಿ ರಚಿಸಬೇಕು. ನಿರ್ದಿಷ್ಠ ಕಾಲಮಿತಿಯೊಳಗಡೆ ಈ 'ಮಾದರಿ ಪರ್ಯಾಯ ಪಠ್ಯಕ್ರಮ'ವನ್ನು ಅಂತಿಮಗೊಳಿಸಿ ಸಾರ್ವಜನಿಕ ಚರ್ಚೆಗೆ ಬಿಡಬೇಕು. ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡಲಾಗಿದೆ.
Recommended Video