'ಚಿತ್ತಾಪುರ ಸಹಾಯವಾಣಿ' ಆರಂಭಿಸಿದ ಪ್ರಿಯಾಂಕ ಖರ್ಗೆ
ಕಲಬುರಗಿ, ಮೇ 4 : ತಮ್ಮ ಕ್ಷೇತ್ರದ ಜನರ ಸಮಸ್ಯೆಗಳನ್ನು ತಿಳಿಯಲು ಚಿತ್ತಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ 24*7 ಸಹಾಯವಾಣಿಯನ್ನು ಆರಂಭಿಸಿದ್ದಾರೆ. ಎರಡು ನಿಮಿಷದಲ್ಲಿ ಜನರು ದೂರು ಹೇಳಿದರೆ ಅದು ರೆಕಾರ್ಡ್ ಆಗಿ ಶಾಸಕರ ಕಚೇರಿ ತಲುಪಲಿದೆ.
ಮತದಾರರ ಕುಂದು-ಕೊರತೆಯನ್ನು ಆಲಿಸಲು ಶಾಸಕ ಪ್ರಿಯಾಂಕ ಖರ್ಗೆ ಅವರು ಈ ವಿನೂತನ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ. ಸಹಾಯವಾಣಿಗೆ 'ಚಿತ್ತಾಪುರ ಸಹಾಯವಾಣಿ' ಎಂದು ನಾಮಕರಣ ಮಾಡಲಾಗಿದ್ದು, ದಿನದ 24 ಗಂಟೆಯೂ ಇದು ಕಾರ್ಯನಿರ್ವಹಿಸಲಿದೆ.

ಕ್ಷೇತ್ರದ ಯಾವುದೇ ವ್ಯಕ್ತಿ ಪಕ್ಷಭೇದ ಮರೆತು 1860-425-4040 ಸಂಖ್ಯೆಗೆ ಕರೆ ಮಾಡಿ ದೂರು ಮತ್ತು ಸಲಹೆ ಸೂಚನೆಗಳನ್ನು ನೀಡಬಹುದಾಗಿದೆ. ಕಚೇರಿ ಸಿಬ್ಬಂದಿ ಅಥವ ಸ್ವತಃ ಶಾಸಕರೇ ಕರೆ ಮಾಡಿದವರನ್ನು ಸಂಪರ್ಕಿಸಿ ಅವರ ಸಮಸ್ಯೆ ಬಗೆಹರಿಸಲು ಪ್ರಯತ್ನ ನಡೆಸುತ್ತಾರೆ.[ಬಡ ಕುಟುಂಬ ಮನೆ ಕಟ್ಟಿಕೊಳ್ಳಲು ಶಾಸಕರ ನೆರವು]
ದೂರು ನೀಡುವುದು ಹೇಗೆ : ನಿಗದಿತ ಸಂಖ್ಯೆಗೆ ಜನರು ಕರೆ ಮಾಡಿದಾಗ ಮೊದಲು ಸ್ವಾಗತ ಕೇಳಿ ಬರುತ್ತದೆ. ನಂತರ ಬೀಪ್ ಟೋನ್ ಕೇಳಿದ ಬಳಿಕ ಎರಡು ನಿಮಿಷದಲ್ಲಿ ಜನರು ಸಮಸ್ಯೆಯನ್ನು ಹೇಳಬೇಕು. ಅದು ಶಾಸಕರ ಕಚೇರಿಯ ಸರ್ವರ್ನಲ್ಲಿ ದಾಖಲಾಗುತ್ತದೆ. [ಶಾಸಕರ ಫೋನ್ ಸಮಸ್ಯೆ, ಸಿಎಂ ಸಿದ್ದರಾಮಯ್ಯಗೆ ಪತ್ರ!]
ಬಳಿಕ ದೂರುದಾರರ ಮೊಬೈಲ್ಗೆ ಕರೆ ಮಾಡಿ ಅವರ ಸಮಸ್ಯೆಗಳನ್ನು ಬಗೆಹರಿಸಲಾಗುತ್ತದೆ. ದೂರುದಾರರು ಕೊಟ್ಟಿರುವ ಮಾಹಿತಿ ಹಾಗೂ ಸಮಸ್ಯೆಗಳನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದು ಶಾಸಕ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.
CHITTAPUR CITIZENS can now call 1860-425-4040 for any GRIEVANCES | SUGGESTIONS | COMPLAINTS regarding constituency's...
Posted by Priyank Kharge on Sunday, May 3, 2015
ಏನು ಮಾಡಬಹುದು?
ಈ 24*7 ಸಹಾಯವಾಣಿಗೆ ಕರೆ ಮಾಡುವ ಜನರು
* ಚಿತ್ತಾಪುರ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಸಲಹೆ-ಸೂಚನೆ ನೀಡಬಹುದು
* ತಾಲೂಕಿನ ಆಡಳಿತವನ್ನು ಚುರುಕುಗೊಳಿಸಲು ಸಲಹೆ ನೀಡಬಹುದು
* ಭ್ರಷ್ಟಾಚಾರ, ಕಾಮಗಾರಿ ವಿಳಂಬ ಮುಂತಾದವುಗಳ ಕುರಿತು ದೂರು ಕೊಡಬಹುದು
* ಸಾರ್ವಜನಿಕರಿಗೆ ಅಗತ್ಯವಾದ ಸೌಲಭ್ಯಗಳ ಕುರಿತು ಬೇಡಿಕೆ ಸಲ್ಲಿಸಬಹುದು












Click it and Unblock the Notifications