ಸರ್ಕಾರಕ್ಕೆ ಮುಷ್ಕರದ ತಲೆ ಬಿಸಿ: ರಾಜ್ಯದಲ್ಲಿ ಮತ್ತೊಂದು ಹೋರಾಟಕ್ಕೆ ಸಜ್ಜು !
ಬೆಂಗಳೂರು, ಡಿಸೆಂಬರ್ 12: ರಾಜ್ಯದಲ್ಲಿ ಇತ್ತೀಚೆಗೆ ಹೋರಾಟಗಳ ಪರ್ವ ಶುರುವಾಗಿದೆ. ರೈತ ವಿರೋಧಿ ಕೃಷಿ ಮಸೂದೆ ವಾಪಸಿಗೆ ಆಗ್ರಹಿಸಿ ಹೋರಾಟ, ಮರಾಠ ಅಭಿವೃದ್ಧಿ ವಿರೋಧಿಸಿ ಕನ್ನಡ ಪರ ಸಂಘಟನೆಗಳ ಕರ್ನಾಟಕ ಬಂದ್, ಸಾರಿಗೆ ನೌಕರರ ಮುಷ್ಕರ ಸರ್ಕಾರದ ಪಾಲಿಗೆ ತಲೆ ಬಿಸಿ ಉಂಟು ಮಾಡಿತ್ತು. ಇದೀಗ ಇಂಥದ್ದೇ ಮತ್ತೊಂದು ಬೃಹತ್ ಮುಷ್ಕರಕ್ಕೆ ತೆರೆಮರೆಯಲ್ಲಿ ಸಿದ್ಧತೆ ನಡೆದಿದೆ. ಅದು ಈ ಎಲ್ಲಾ ಹೋರಾಟಗಳಿಗೂ ಭಿನ್ನವಾಗಲಿದ್ದು ಸರ್ಕಾರದ ಪಾಲಿಗೆ ಬಿಸಿ ತುಪ್ಪವಾಗಲಿದೆ.
ರಾಜ್ಯದಲ್ಲಿ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಸರ್ಕಾರದ ಕ್ರಮ ಖಂಡಿಸಿ ಕನ್ನಡ ಪರ ಸಂಘಟನೆಗಳು ಬೀದಿಗೆ ಇಳಿದಿದ್ದವು. ಇಡೀ ರಾಜ್ಯವೇ ಸ್ತಬ್ಧವಾಗಿತ್ತು. ಬೆಂಗಳೂರು ನಗರದಲ್ಲಂತೂ ರಸ್ತೆಗಳು ಬಂದ್ ಆಗಿ ಜನ ಸಾಮಾನ್ಯರು ನಾನಾ ಕಷ್ಟ ಎದುರಿಸಿದ್ದರು. ಇದರ ಬೆನ್ನಲ್ಲೇ ದೇಶದಲ್ಲಿ ಕೃಷಿ ಮಸೂದೆ ವಿರೋಧಿಸಿ ನಡೆಯುತ್ತಿದ್ದ ಹೋರಾಟವೂ ರಾಜ್ಯದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಭಾರತ್ ಬಂದ್ ಬೆಂಬಲಿಸಿ ರಾಜ್ಯದ ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಬೀದಿಗೆ ಇಳಿದಿದ್ದವು. ಆಗಲೂ ರಾಜ್ಯದೆಲ್ಲೆಡೆ ಬಸ್ ಸಂಚಾರ ಸ್ಥಗಿತವಾಗಿ ನಾನಾ ಸಮಸ್ಯೆ ತಲೆ ದೋರಿದ್ದವು.
ಇನ್ನೇನು ಮುಗಿಯಿತು ಎನ್ನುವಷ್ಟರಲ್ಲಿ ಸಾರಿಗೆ ನೌಕರರು ಕಳೆದ ಎರಡು ದಿನದಿಂದ ಮಷ್ಕರ ಕೈಗೊಂಡಿದ್ದಾರೆ. ಇಡೀ ರಾಜ್ಯದ ಸಂಚಾರ ವ್ಯವಸ್ಥೆಯೇ ಸ್ಥಗಿತಗೊಂಡಿದೆ. ಜನ ಸಾಮಾನ್ಯರು ಪರದಾಡುತ್ತಿದ್ದರು. ಸದ್ಯದ ಮಟ್ಟಿಗೆ ಈ ಹೋರಾಟ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಇದರ ಜತೆಗೆ ಇನ್ನೊಂದು ಮಹಾ ಹೋರಾಟಕ್ಕೆ ರಾಜ್ಯದಲ್ಲಿ ತೀವ್ರ ತರ ಬೆಳವಣಿಗೆ ಆಗುತ್ತಿದೆ. ಡಿಸೆಂಬರ್ 16 ರಂದು ಬೃಹತ್ ಹೋರಾಟ ನಡೆಯಲಿದೆ.

ಶಿಕ್ಷಕ ಸಮುದಾಯ ಹೋರಾಟ:
ಶಿಕ್ಷಕ ಸಮುದಾಯ ಹೋರಾಟ: ಕರೋನಾ ದಿಂದ ಕಂಗೆಟ್ಟಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಹೋರಾಟಕ್ಕೆ ಇಳಿಯಲು ಅಣಿಯಾಗುತ್ತಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟಗಳು ಮತ್ತು ಖಾಸಗಿ ಶಿಕ್ಷಕರು ಈ ಹೋರಾಟ ನಡೆಸಲು ಪೂರ್ವ ತಯಾರಿ ನಡೆಸಿದ್ದಾರೆ. ಡಿಸೆಂಬರ್ 16 ರಂದು ಸಾವಿರಾರುಖಾಸಗಿ ಶಿಕ್ಷಕರು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಗಳು ಬೀದಿಗೆ ಇಳಿಯಲು ಸಜ್ಜಾಗಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲೆ
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರು ಹೋರಾಟ ನಡೆಸಲಿದ್ದಾರೆ. ರಾಜಧಾನಿಯಲ್ಲಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹೋರಾಟ ನಡೆಸಲು ಪೂರ್ವ ತಯಾರಿ ನಡೆದಿದ್ದು, ಶಿಕ್ಷಕರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಸಂಘಟನೆಗಳು ನಿರತವಾಗಿವೆ. ಸದ್ಯದ ಮಟ್ಟಿಗೆ ಒಂದು ದಿನದ ಹೋರಾಟ ನಡೆಸುತ್ತಿರುವ ಖಾಸಗಿ ಶಿಕ್ಷಕರ ಬೇಡಿಕೆ ಈಡೇರಿಸಲು ಗಡುವು ನೀಡಲಿದ್ದು, ಈ ಅವಧಿಯಲ್ಲಿ ಸಮಸ್ಯೆ ಈಡೇರದಿದ್ದಲ್ಲಿ ಅನಿರ್ಧಿಷ್ಟ ಮುಷ್ಕರದ ಬಗ್ಗೆ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಹೋರಾಟದ ಮುಖಂಡತ್ವ ವಹಿಸಿರುವ ಸಂಘಟನೆ ಪದಾಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಅಧಿಕೃತ ಹೇಳಿಕೆ
ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್, ಡಿಸೆಂಬರ್ 16 ರಂದು ರಾಜ್ಯದಲ್ಲಿ ಖಾಸಗಿ ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳು ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹೋರಾಟ ನಡೆಲಿವೆ. ನಮ್ಮ ನಡೆ ಶಿಕ್ಷಕರ ಕಡೆ, ಶಿಕ್ಷಣ ಸಂಸ್ಥೆ, ಶಿಕ್ಷಕರು ಉಳಿದರೆ ಶಿಕ್ಷಣ ಉದ್ದೇಶದೊಂದಿಗೆ ನಡೆಸುತ್ತಿರುವ ಇದೊಂದು ಸಾಂಕೇತಿಕ ಹೋರಾಟ. ಆದರೆ ಕರೋನಾ ಕಷ್ಟ ಕಾಲದಲ್ಲಿ ಖಾಸಗಿ ಶಿಕ್ಷಕರನ್ನು ನಿರ್ಲಕ್ಷ್ಯಿಸಿದೆ. ಹೀಗಾಗಿ ನಾನಾ ಬೇಡಿಕೆ ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿದ್ದೇವೆ. ಆಯಾ ಜಿಲ್ಲೆಗಳಲ್ಲಿ ಹೋರಾಟ ನಡೆಯಲಿದೆ. ಮೂರು ಸಾವಿರಕ್ಕೂ ಹೆಚ್ಚು ಶಿಕ್ಷಕರು ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಖಾಸಗಿ ಶಾಲೆ
ರಾಜ್ಯದಲ್ಲಿ ಖಾಸಗಿ ಶಾಲೆಗಳ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಯನ್ನು ಕರೋನಾ ವಾರಿಯರ್ಸ್ ಎಂದು ಪರಿಗಣಿಸಿ ಕೋವಿಡ್ ಲಸಿಕೆ ಮೊದಲ ಹಂತದಲ್ಲಿಯೇ ಕೊಡಬೇಕು. ಖಾಸಗಿ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಆಹಾರ ಕಿಟ್ ವಿತರಿಸುವುದು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಗೌರವ ಧನ ನೀಡಬೇಕು. ಖಾಸಗಿ ಶಾಲಾ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಸರ್ಕಾರ ಪ್ರತ್ಯೇಕ ವಿಮಾ ಸೌಲಭ್ಯ ನೀಡಬೇಕು. ಶಾಲೆಗಳ ಪುನರಾರಂಭ, ದಾಖಲಾತಿ, ಹಾಜರಾತಿ ಕನಿಷ್ಠ ಮೌಲ್ಯಮಾಪನ ತೇರ್ಗಡೆ, ಬಾಕಿ ಶುಲ್ಕ ವಸೂಲಿ ಹಾಗೂ ಕನಿಷ್ಠ ಶುಲ್ಕ ವಸೂಲಿ ಮಾಡುವ ಬಗ್ಗೆ ಶಿಕ್ಷಣ ಇಲಾಖೆಯ ಸ್ಪಷ್ಟ ಆದೇಶಕ್ಕಾಗಿ ಆಗ್ರಹಿಸಿ ಈ ಹೋರಾಟ ನಡೆಸಲಾಗುತ್ತಿದೆ. ಈ ವಿಚಾರದ ಬಗ್ಗೆ ಶಿಕ್ಷಣ ಸಚಿವರ ಜತೆ ಅನೇಕ ಸಲ ಚರ್ಚಿಸಿದ್ದು, ಈವರೆಗೂ ಯಾವದೇ ತೀರ್ಮಾನ ಕೈಗೊಳ್ಳದ ಹಿನ್ನೆಲೆಯಲ್ಲಿ ಸಾಂಕೇತಿಕ ಹೋರಾಟ ನಡೆಸುತ್ತೇವೆ. ಈಡೇರಿಸದ ಪಕ್ಷದಲ್ಲಿ ಖಾಸಗಿ ಶಿಕ್ಷಕರು ಕೂಡ ಸಾರಿಗೆ ನೌಕರರ ಹಾದಿ ಹಿಡಿಯಬೇಕಾಗುತ್ತದೆ ಎಂದು ಕ್ಯಾಮ್ಸ್ ಎಚ್ಚರಿಕೆ ನೀಡಿದೆ.












Click it and Unblock the Notifications