ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಸಚಿವ ಡಾ. ಸುಧಾಕರ್ ಸಲಹೆ ಏನು?
ಬೆಂಗಳೂರು ಜೂ. 13: "ಸರ್ಕಾರದ ಜತೆಗೆ ಆರೋಗ್ಯ ಸೇವೆ ಒದಗಿಸುವಲ್ಲಿ ಮುಖ್ಯ ಪಾತ್ರ ವಹಿಸಿರುವ ಖಾಸಗಿ ಆಸ್ಪತ್ರೆಗಳು ರೋಗಿಗಳ ಮಾಹಿತಿಯನ್ನು ಸರ್ಕಾರದೊಂದಿಗೆ ಹಂಚಿಕೊಂಡರೆ ಇನ್ನಷ್ಟು ಗುಣಮಟ್ಟದ ವೈದ್ಯಕೀಯ ಸೇವೆ ನೀಡಲು ಸಹಾಯವಾಗುತ್ತದೆ" ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
ಸೋಮವಾರ ಬೆಂಗಳೂರಿನಲ್ಲಿ ನ್ಯಾಷನಲ್ ಅಸೋಸಿಯೇಷನ್ ಆಫ್ ಸಾಫ್ಟ್ ವೇರ್ ಆಂಡ್ ಸರ್ವೀಸ್ ಕಂಪನೀಸ್ (ನಾಸ್ಕಾಂ) ಆಯೋಜಿಸಿದ್ದ ಆಯುಷ್ಮಾನ್ ಭಾರತ ಡಿಜಿಟಲ್ ಮಿಷನ್ ಸಮಾವೇಶದಲ್ಲಿ ಸಚಿವರು ಮಾತನಾಡಿದರು. "ದೇಶದಲ್ಲಿನ ಶೇ.50ಕ್ಕಿಂತಲೂ ಅಧಿಕ ಮಂದಿ ಆರೋಗ್ಯ ಸೇವೆಗಾಗಿ ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸಿದ್ದಾರೆ. ಹೀಗಾಗಿ ರೋಗಿಗಳಿಂದ ಸಂಗ್ರಹಿಸುವ ಮಾಹಿತಿಯನ್ನು ಖಾಸಗಿ ಆಸ್ಪತ್ರೆಗಳು ಸರ್ಕಾರದ ಜತೆಗೆ ಹಂಚಿಕೊಳ್ಳಬೇಕು. ಇದು ಸಾಧ್ಯವಾದರೆ ಉತ್ತಮ ಆರೋಗ್ಯ ಸೇವೆ ನೀಡಲು ಇನ್ನಷ್ಟು ಯೋಜನೆ ರೂಪಿಸಲು ಅನುಕೂಲವಾಗುತ್ತದೆ" ಎಂದು ಸಚಿವರು ತಿಳಿಸಿದರು.
"ಈ ನಿಟ್ಟಿನಲ್ಲಿ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಕಾರ್ಯಕ್ರಮದ ಭಾಗವಾಗಿ ಖಾಸಗಿ ಆಸ್ಪತ್ರೆಗಳ ಜತೆ ಒಪ್ಪಂದ ಮಾಡಿಕೊಳ್ಳುವ ಅಗತ್ಯತೆ" ಇದೆ ಸಚಿವರು ಎಂದು ಅಭಿಪ್ರಾಯಪಟ್ಟರು.

ಕ್ರಾಂತಿಕಾರಕ ಬದಲಾವಣೆ; "ದೇಶದ ಪ್ರತಿಯೊಬ್ಬರಿಗೂ ಸೂಕ್ತ ಆರೋಗ್ಯ ಸೇವೆ ನೀಡುತ್ತಿರುವ 'ಆಯುಷ್ಮಾನ್ ಭಾರತ್ ಡಿಜಿಟಲ್ ಮಿಶನ್' (ಎಬಿಡಿಎಂ)' ಒಂದು ಬೃಹತ್ ಆರೋಗ್ಯ ಯೋಜನೆಯಾಗಿದೆ. ಇದು ಆರೋಗ್ಯ ಕ್ಷೇತ್ರದಲ್ಲಿದ್ದ ಕೆಲವು ಸಮಸ್ಯೆಗಳು ತೊಡೆದು ಹಾಕಿ, ಸುಸ್ಥಿರ ಆರೋಗ್ಯ ವ್ಯವಸ್ಥೆ ಸೃಷ್ಟಿಸಲು ಸಹಕಾರಿಯಾಗಿದೆ. ಇನ್ನು ಬೆಂಗಳೂರು ಒಂದರಲ್ಲೇ ಆರೋಗ್ಯ ಸಂಬಂಧಿ 7,500 ನವೋದ್ಯಮಗಳಿದ್ದು, ತಂತ್ರಜ್ಞಾನ ಬಳಕೆಯಲ್ಲಿ ಕರ್ನಾಟಕ ಮುಂದಿದೆ" ಎಂದು ಸಚಿವ ಸುಧಾಕರ್ ಹೇಳಿದರು.
ಮಾಹಿತಿ ಕ್ರೂಢೀಕರಣ: "ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ರಾಜ್ಯದ ಆರೋಗ್ಯ ಸೇವೆಗಳ ಮಾಹಿತಿ ಹಾಗೂ ಮಾನವ ಸಂಪನ್ಮೂಲ ವ್ಯವಸ್ಥೆ ಒಳಗೊಂಡ ಆರೋಗ್ಯ ವಲಯದ ಸಮಗ್ರ ಮಾಹಿತಿಗಳನ್ನು ಕ್ರೂಢೀಕರಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಆಂಬುಲೆನ್ಸ್ ಸೇವೆಯಲ್ಲಿ ಒಂದಷ್ಟು ಸಮಗ್ರ ಬದಲಾವಣೆ ತರಲಾಗುವುದು. ಇದರಿಂದ ಯಾವ ಆಸ್ಪತ್ರೆಗೆ ರೋಗಿಯನ್ನು ಕರೆದುಕೊಂಡು ಹೋಗಬೇಕು ಎಂಬ ಮಾಹಿತಿಯನ್ನು ಆಂಬುಲೆನ್ಸ್ ಚಾಲಕರಿಗೆ ಟೆಲಿಕಾಲ್ ಮೂಲಕ ಲಭ್ಯವಾಗುತ್ತದೆ. ಆಗ ತುರ್ತು ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ನೀಡಲು ಸುಲಭವಾಗುತ್ತದೆ. ಒಬ್ಬ ಪರಿಣಿತ ವೈದ್ಯರಿಂದ (ಸರ್ಜನ್) ಹಿಡಿದು ಸಾಮಾನ್ಯ ವೈದ್ಯರ ಕುರಿತಾದ ದತ್ತಾಂಶ ಸಂಗ್ರಹಿಸುವ ಮೂಲಕ ನಕಲಿ ವೈದ್ಯರ ಹಾವಳಿ ತಡೆಯಲಿದ್ದೇವೆ" ಎಂದು ಸಚಿವರು ವಿವರಿಸಿದರು.
25ಲಕ್ಷ ಜನರಿಗೆ ಕೌನ್ಸೆಲಿಂಗ್ ನೆರವು; "ಕೊರೋನಾ ಜನರ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಮೊದಲ ಅಲೆ ವೇಳೆ ಇ-ಮಾನಸ್' ವ್ಯವಸ್ಥೆ ಮೂಲಕ 25 ಲಕ್ಷಕ್ಕೂ ಹೆಚ್ಚು ಜನರಿಗೆ ಕೌನ್ಸೆಲಿಂಗ್ ನಡೆಸಿ ಮಾನಸಿಕ ಸ್ಥೈರ್ಯದ ನೆರವು ಒದಗಿಸಿದ್ದೇವೆ. ಟೆಲಿ ಐಸಿಯು, ಟೆಲಿ ಮೆಡಿಸನ್ ನಂತಹ ಕ್ರಮಗಳ ಮೂಲಕ ರಾಜ್ಯದೆಲ್ಲಡೆ ಏಕರೂಪದ ಚಿಕಿತ್ಸೆ ನೀಡಲಾಗಿದೆ" ಎಂದು ಡಿಜಿಟಲ್ ಆರೋಗ್ಯ ವ್ಯವಸ್ಥೆಯ ಮಹತ್ವ ತಿಳಿಸಿದರು.

"ಇಸ್ರೇಲ್ನಂತಹ ಸಣ್ಣ ದೇಶಗಳಲ್ಲಿ ಸಹ ಡಿಜಿಟಲ್ ಆರೋಗ್ಯ ವ್ಯವಸ್ಥೆ ಪರಿಣಾಮಕಾರಿಯಾಗಿ ಜಾರಿಗೆ ಬಂದಿದೆ. ಬೃಹತ್ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಈ ವ್ಯವಸ್ಥೆ ಸಮಪರ್ಕವಾಗಿ ಅನುಷ್ಠಾನಗೊಳ್ಳಬೇಕಿದೆ" ಎಂದು ಸುಧಾಕರ್ ತಿಳಿಸಿದರು.











Click it and Unblock the Notifications