ಕರ್ನಾಟಕದ ಜೈಲುಗಳಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಆರಂಭಕ್ಕೆ ಕಾರಾಗೃಹ ಇಲಾಖೆ ಯೋಜನೆ
ಬೆಂಗಳೂರು, ಜನವರಿ 04: ಕರ್ನಾಟಕ ಕಾರಾಗೃಹ ಇಲಾಖೆಯು ತನ್ನ ಸುಧಾರಣಾ ಮತ್ತು ಪುನರ್ವಸತಿ ಉಪಕ್ರಮಗಳ ಭಾಗವಾಗಿ ರಾಜ್ಯದಲ್ಲಿ ಜೈಲಿನ ಒಳಗೆ ಖೈದಿಗಳಿಗಾಗಿ ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ಗಳನ್ನು ಆರಂಭಿಸುವ ಚಿಂತನೆ ನಡೆಸಿದೆ.
ಕೈದಿಗಳು ಜೈಲಿನಿಂದ ಹೊರಬಂದ ನಂತರ ಗೌರವಯುತ ಜೀವನ ಕಟ್ಟಿಕೊಂಡು ಯಶಸ್ವಿ ಬದುಕು ನಡೆಸಬೇಕು. ಈ ಮಹತ್ತರ ಉದ್ದೇಶದಿಂದ ಕರ್ನಾಟಕ ಕಾರಾಗೃಹ ಇಲಾಖೆಯು ಇಂತದ್ದೊಂದು ಯೋಜನೆ ರೂಪಿಸುತ್ತಿದೆ.
ಖೈದಿಗಳಿಗೆ ಕಲಿಯಲು ಅನುಕೂಲವಾಗುವ ಈ ಹೊಸ ಯೋಜನೆ ಕುರಿತು ಕಾರಾಗೃಹಗಳು ಮತ್ತು ತಿದ್ದುಪಡಿ ಸೇವೆಗಳ ಇಲಾಖೆಯ ಹಿರಿಯ ಅಧಿಕಾರಿ ಒಬ್ಬರು ಮಾಹಿತಿ ನೀಡಿದ್ದಾರೆ. ಜೈಲಿನ ಆವರಣದಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಆರಂಭಿಸುವ ಸಂಬಂಧ ಕೆಲವು ಹೋಟೆಲ್ ನಿರ್ವಹಣಾ ಸಂಸ್ಥೆಗಳು ಸಂಪರ್ಕಿಸಿವೆ. ನಾವು ಅವರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಆದರೆ ಯಾವುದು ಇನ್ನು ಅಂತಿಮವಾಗಿಲ್ಲ. ಆದಷ್ಟು ಶೀಘ್ರವೇ ಎಲ್ಲವೂ ಅಂತಿಮವಾಗಲಿವೆ ಎಂದರು
ಎಲ್ಲವು ಅಂದುಕೊಂಡಂತೆ ಆದರೆ ಅಲ್ಪಾವಧಿಯ ಕೋರ್ಸ್ಗಳನ್ನು ಜೈಲಿನ ಆವರಣದಲ್ಲಿ ನಡೆಸಲಾಗುವುದು. ಕೈದಿಗಳು ಜೈಲಿನಿಂದ ಹೊರಬಂದ ನಂತರ ಗೌರವಯುತ ಜೀವನವನ್ನು ನಡೆಸಬೇಕೆಂದು ನಾವು ಬಯಸುತ್ತೇವೆ. ಅವರು ಸ್ವಯಂ ಉದ್ಯೋಗಿಗಳಾಗಬೇಕು. ಅದಕ್ಕಾಗಿ ಈ ಯೋಜನೆ ಪೂರಕವಾಗಿರಲಿದೆ. ಕೋರ್ಸ್ ಬಳಿಕ ಅವರಿಗೂ ಪ್ರಮಾಣ ಪತ್ರ ನೀಡಲಾಗುವುದು.
ಖೈದಿಗಳು ಸಾಕ್ಷರರಾಗಬೇಕು
ಪ್ರಸ್ತುತ ನಾವು ವಯಸ್ಕರ ಸಾಕ್ಷರತೆಯಿಂದ ದೂರ ಶಿಕ್ಷಣದವರೆಗೆ ಅನೇಕ ಶಿಕ್ಷಣ-ಸಂಬಂಧಿತ ಕೋರ್ಸ್ಗಳನ್ನು ಹೊಂದಿದ್ದೇವೆ. ಅನಕ್ಷರಸ್ಥರಾಗಿ ಬರುವ ಖೈದಿಗಳು ಸಾಕ್ಷರರಾಗಿ ಹೊರಬರಬೇಕು ಎಂಬುದು ಇಲಾಖೆಯ ಆಶಯ. ಕೋರ್ಸ್ ಕಲಿತ ನಂತರ ಅದು ಅವರು ಸ್ವಾವಲಂಬಿಯಾಗಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ಕೋರ್ಸ್ಗಳು ದಕ್ಷಿಣ ಭಾರತದಿಂದ ಉತ್ತರ ಭಾರತದವರೆಗೆ ತಿಂಡಿ, ತಿನಿಸು, ಊಟ ಸೆರಿದಂತೆ ಎಲ್ಲ ಬಗೆಯ ಆಹಾರ ಭಕ್ಷ್ಯಗಳನ್ನು ಬೇಯಿಸುವುದು ಮತ್ತು ಅತಿಥಿಗಳಿಗೆ ಬಡಿಸುವ ತರಬೇತಿಯನ್ನು ಒಳಗೊಂಡಿರುತ್ತದೆ. ಈ ಕೋರ್ಸ್ ಕಲಿತವರು ಜೈಲಿನಿಂದ ಹೊರ ಬಂದ ಬಳಿಕ ಸ್ವಂತ ವ್ಯವಹಾರವನ್ನು ಪ್ರಾರಂಭಿಸಬಹುದು. ಇಲ್ಲವೇ ದೊಡ್ಡ ಹೋಟೆಲ್ಗಳಲ್ಲಿ ಕೆಲಸ ಮಾಡಬಹುದು ಎಂದರು.