ನವೆಂಬರ್ 1ರಿಂದ ಗರ್ಭಿಣಿಯರು, ಬಾಣಂತಿಯರಿಗೆ ಮಾಸಿಕ 1 ಸಾವಿರ
Recommended Video

ಬೆಂಗಳೂರು, ಸೆ.26: ರಾಜ್ಯಸರ್ಕಾರವು ಮಹಿಳೆಯರಿಗಾಗಿ ಮುಖ್ಯಮಂತ್ರಿಗಳ ಮಾತೃಶ್ರೀ ಯೋಜನೆಯನ್ನು ಆರಂಭಿಸುತ್ತಿದ್ದು, ಯೋಜನೆ ನವೆಂಬರ್ 1ರಿಂದ ಅನುಷ್ಠಾನಗೊಳ್ಳಲಿದೆ.
ರಾಜ್ಯದ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ನವೆಂಬರ್ 1ರಿಂದ ಮಾಸಿಕ ಒಂದು ಸಾವಿರ ರೂ.ಗಳಂತೆ ಹೆರಿಗೆ ಪೂರ್ವ ಹಾಗೂ ಹೆರಿಗೆ ನಂತರ ತಲಾ ಮೂರು ತಿಂಗಳಿನಿಂದ ಆರು ತಿಂಗಳ ಕಾಲ 6 ಸಾವಿರ ರೂ.ಗಳನ್ನು ನೀಡಲಾಗುವುದು ಎಂದು ಸಚಿವೆ ಜಯಮಾಲಾ ತಿಳಿಸಿದ್ದಾರೆ.
ಪೋಷಣೆ ಅಭಿಯಾನ-ಪೌಷ್ಠಿಕ ಕರ್ನಾಟಕ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಇಂದಿಗೂ ಶೇ.46ರಷ್ಟು ಮಹಿಳೆಯರಲ್ಲಿ ಹಿಮೋಗ್ಲೋಬಿನ್ ಕೊರತೆ ಇದೆ. ಅಪೌಷ್ಠಿಕತೆಯಿಂದ ಬಳಲುತ್ತಿರುವ ತಾಯಂದಿರಿಗೆ ಎಲ್ಲ ಹಂತದಲ್ಲೂ ಬೆನ್ನೆಲುಬಾಗಿ ನಿಲ್ಲುವ ಹೃದಯ ಹಾಗೂ ಕಣ್ಣು ಸರ್ಕಾರಕ್ಕಿದೆ. ಹೀಗಾಗಿ ಪೌಷ್ಠಿಕ ಕರ್ನಾಟಕದ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಗರ್ಭಿಣಿಯರು, ಬಾಣಂತಿಯರಲ್ಲಿ ಕಂಡು ಬರುವ ಸಹಜ ಸಮಸ್ಯೆಗಳು
ರಾಜ್ಯದಲ್ಲಿ ಗರ್ಭಿಣಿಯರು, ಬಾಣಂತಿಯರು ಹಾಗೂ ವಿವಿಧ ಹಂತದ ಶಿಶುಗಳಲ್ಲಿ ಕಂಡುಬರುವ ಕುಂಠಿತ ಬೆಳವಣಿಗೆ, ತೂಕದ ಕೊರತೆ, ತೀವ್ರ ಅಪೌಷ್ಠಿಕತೆ, ರಕ್ತಹೀನತೆ, ಕಡಿಮೆ ತೂಕದ ಶಿಶು ಜನನ ಹೀಗೆ ಎಲ್ಲ ಬಗೆಯ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ತಿಳಿಸಿದರು.

ಮಾತೃಪೂರ್ಣ ಯೋಜನೆ ಯಶಸ್ವಿಯಾಗಿದೆ
ಅಂಗನವಾಡಿಗಳಲ್ಲಿ ಗರ್ಭಿಣಿಯರಿಗೆ ಒಂದು ಪೂರ್ಣ ಊಟ ಕೊಡುವ ಕಾರ್ಯಕ್ರಮವಾದ ಮಾತೃಪೂರ್ಣ ಯೋಜನೆ ಜಾರಿಗೊಳಿಸಿದಾಗ ಅನೇಕರು ವಿರೋಧ ವ್ಯಕ್ತಪಡಿಸಿದರು. ಸುಡುಬಿಸಿಲಿನಲ್ಲಿ ಗರ್ಭಿಣಿಯರು ನಡೆದುಕೊಂಡು ಅಂಗನವಾಡಿಗೆ ಹೇಗೆ ಬರಬೇಕು ಎಂದು ಪ್ರಶ್ನಿಸಿದ್ದರು. ಆದರೆ ಈ ಯೋಜನೆ ಶ್ರೀಮಂತ ಜನರಿಗೆ ಆಗಿರಲಿಲ್ಲ. ಬದಲಾಗಿ ರೈತ ಹಾಗೂ ಕಾರ್ಮಿಕ ಮಹಿಳೆಯರಿಗೆ ಆಗಿರುವುದರಿಂದ ಇಂದು ಯಶಸ್ವಿಯಾಗಿ ಕಾರ್ಯಕ್ರಮ ನಡೆಯುತ್ತಿದೆ. ಹಸಿವಿನಿಂದ ತೊಂದರೆಯಲ್ಲಿರುವವರು ಬರುತ್ತಿದ್ದಾರೆ ಎಂದು ಯೋಜನೆಯ ಯಶೋಗಾಥೆ ವಿವರಿಸಿದರು.

ಶಿಶು ಸುರಕ್ಷಣಾ, ಸೃಷ್ಠಿ ಯೋಜನೆ ಬಗ್ಗೆ ಜಾಗೃತಿ ಬೇಕು
ಪೌಷ್ಠಿಕ ಕರ್ನಾಟಕ ಪೋಷಣೆ ಅಭಿಯಾನದಡಿ ಮಾತೃಪೂರ್ಣ, ಮಾತೃಶ್ರೀ, ಸೃಷ್ಠಿ ಯೋಜನೆ, ಕ್ಷೀರಭಾಗ್ಯ, ಜನನಿ ಸುರಕ್ಷಾ ಯೋಜನೆ ಹಾಗೂ ಜನನಿ ಶಿಶು ಸುರಕ್ಷಾ ಯೋಜನೆ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸಿ, ಅರ್ಹ ಲಾನುಭವಿಗಳಿಗೆ ಎಲ್ಲ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ಸಚಿವೆ ಜಯಮಾಲಾ ತಿಳಿಸಿದರು.

ರಾಜ್ಯದ ಶೇ.46 ಮಹಿಳೆಯರಲ್ಲಿ ಹಿಮೋಗ್ಲೋಬಿನ್ ಕೊರತೆ
ಪೋಷಣೆ ಅಭಿಯಾನ-ಪೌಷ್ಠಿಕ ಕರ್ನಾಟಕ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಇಂದಿಗೂ ಶೇ.46ರಷ್ಟು ಮಹಿಳೆಯರಲ್ಲಿ ಹಿಮೋಗ್ಲೋಬಿನ್ ಕೊರತೆ ಇದೆ.
ಯುನಿಸ್ ನ ದಕ್ಷಿಣ ಭಾರತ ಪ್ರಾಂತ ಮುಖ್ಯಸ್ಥೆ ಮಿಥೆಲ್ ರಸ್ದಿಯಾ, ಕೇಂದ್ರ ಸರ್ಕಾರದ ಪೋಷಕಾಂಶಗಳ ಸಲಹೆಗಾರ್ತಿ ಮೀನಾ ಜೇಥಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್, ಆರೋಗ್ಯ ಇಲಾಖೆ ಆಯುಕ್ತ ಪಂಕಜ್ಕುಮಾರ್ ಪಾಂಡೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಆಯುಕ್ತೆ ಅರುಂಧತಿ ಚಂದ್ರಶೇಖರ್, ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಮರಿಸ್ವಾಮಿ, ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications